ವಿಶ್ವಾಸ ಮತ ಮತ್ತು ಅವಿಶ್ವಾಸ ನಿರ್ಣಯಕ್ಕೆ ಇರುವ ವ್ಯತ್ಯಾಸವೇನು?
Recommended Video
ಬೆಂಗಳೂರು, ಜುಲೈ 19 : ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗಿದೆ. ಶುಕ್ರವಾರ ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚೆ ನಡೆಯಲಿದೆ. ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 268.
ಬುಧವಾರ ಟಿಡಿಪಿ ಸಂಸದ ಕೆ.ಶ್ರೀನಿವಾಸ್ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದರು. ಸ್ಪೀಕರ್ ಸುಮಿತ್ರಾ ಮಹಾಜನ್ ನಿರ್ಣಯವನ್ನು ಅಂಗೀಕರಿಸಿದ್ದಾರೆ. ಶುಕ್ರವಾರ ಸದನದಲ್ಲಿ ಚರ್ಚೆಗೆ ಅವಕಾಶ ನೀಡಿದ್ದಾರೆ.
ಸಂಸತ್ತಿನ ಉಭಯ ಸದನಗಳ ಸಂಖ್ಯಾಬಲ ಎಷ್ಟಿದೆ?
535 ಸದಸ್ಯ ಬಲದ ಲೋಕಸಭೆಯಲ್ಲಿ ಸರ್ಕಾರ ವಿಶ್ವಾಸ ಮತದಲ್ಲಿ ಜಯಗಳಿಸಲು 268 ಮತಗಳು ಅಗತ್ಯ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಪಕ್ಷದ ಸದಸ್ಯರಿಗೆ ವಿಪ್ ಜಾರಿ ಮಾಡಿವೆ. ಶುಕ್ರವಾರ ತಪ್ಪದೇ ಸದನದಲ್ಲಿ ಹಾಜರಿರಬೇಕು ಎಂದು ಸೂಚನೆ ನೀಡಿದೆ.
2003ರ ಬಳಿಕ ಮೊದಲ ಬಾರಿಗೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ!
ಅವಿಶ್ವಾಸ ನಿರ್ಣಯ ಮತ್ತು ವಿಶ್ವಾಸ ಮತ ಯಾಚನೆ ನಡುವೆ ವ್ಯತ್ಯಾಸವಿದೆ. ಈ ಎರಡರ ನಡುವೆ ಇರುವ ವ್ಯತ್ಯಾಸದ ಬಗ್ಗೆ ನಾವಿಲ್ಲಿ ಮಾಹಿತಿ ನೀಡಿದ್ದೇವೆ. ಶುಕ್ರವಾರ ಲೋಕಸಭೆ ಕಲಾಪದಲ್ಲಿ ಎನಾಗಲಿದೆ? ಎಂದು ದೇಶ ಕುತೂಹಲದಿಂದ ಕಾಯುತ್ತಿದೆ...
ಅವಿಶ್ವಾಸ ನಿರ್ಣಯ
ವಿರೋಧ ಪಕ್ಷ ಅವಿಶ್ವಾಸ ನಿರ್ಣಯವನ್ನು ಸರ್ಕಾರದ ವಿರುದ್ಧ ಮಂಡನೆ ಮಾಡಬಹುದು. ಸರ್ಕಾರಕ್ಕೆ ಸದನದಲ್ಲಿ ಬಹುಮತ ಇಲ್ಲ ಎಂದು ಅನ್ನಿಸಿದಾಗ ಅವಿಶ್ವಾಸ ನಿರ್ಣಯ ಮಂಡಿಸಬಹುದು.
ಸದನದ ಯಾವುದೇ ಸದಸ್ಯ ಅವಿಶ್ವಾಸ ನಿರ್ಣಯವನ್ನು ಮಂಡನೆ ಮಾಡಬಹುದು. ಇದಕ್ಕೆ ನಿಖರವಾದ ಕಾರಣವನ್ನು ನೀಡುವ ಅಗತ್ಯವಿಲ್ಲ. ಲೋಕಸಭೆಯಲ್ಲಿ ಮಾತ್ರ ಅವಿಶ್ವಾಸ ನಿರ್ಣಯ ಮಂಡಿಸಬಹುದು. ರಾಜ್ಯಸಭೆಯಲ್ಲಿ ಮಂಡನೆ ಮಾಡಲು ಬರುವುದಿಲ್ಲ.
50 ಸದಸ್ಯರ ಬೆಂಬಲ ಬೇಕು
ನಿಯಮ 198ರ ಅನ್ವಯ ಅವಿಶ್ವಾಸ ನಿರ್ಣಯವನ್ನು ಮಂಡನೆ ಮಾಡಬೇಕು. ಈ ಬಗ್ಗೆ ಲಿಖಿತವಾದ ನೋಟಿಸ್ ಬರೆದು ಸ್ಪೀಕರ್ಗೆ ಸಲ್ಲಿಸಬೇಕು. ಸ್ಪೀಕರ್ ಸದನದಲ್ಲಿ ಅದನ್ನು ಓದಿ ಹೇಳುತ್ತಾರೆ. 50 ಸದಸ್ಯರು ಈ ನಿರ್ಣಯವನ್ನು ಬೆಂಬಲಿಸಿದರೆ ಚರ್ಚೆಗೆ ಅರ್ಹವಾಗುತ್ತದೆ.
ನಿರ್ಣಯ ಅಂಗೀಕಾರವಾದ ಬಳಿಕ 10 ದಿನದಲ್ಲಿ ಈ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕು. ದಿನಾಂಕ ಮತ್ತು ಸಮಯವನ್ನು ಸ್ಪೀಕರ್ ನಿರ್ಧಾರ ಮಾಡುತ್ತಾರೆ. ಅವಿಶ್ವಾಸ ಮತದಲ್ಲಿ ಸರ್ಕಾರಕ್ಕೆ ಹಿನ್ನಡೆಯಾದರೆ. ಸರ್ಕಾರವನ್ನು ವಿಸರ್ಜನೆ ಮಾಡಬೇಕಾಗುತ್ತದೆ.
ವಿಶ್ವಾಸ ಮತ ಎಂದರೇನು?
ವಿಶ್ವಾಸ ಮತದ ನಿರ್ಣಯವನ್ನು ವಿರೋಧ ಪಕ್ಷಗಳು ಮಂಡಿಸಲು ಸಾಧ್ಯವಿಲ್ಲ. ಹೊಸದಾಗಿ ರಚನೆಯಾದ ಸರ್ಕಾರ ಮೊದಲ ಕಲಾಪದಲ್ಲಿ ವಿಶ್ವಾಸ ಮತವನ್ನು ಸಾಬೀತು ಮಾಡುತ್ತದೆ. ಲೋಕಸಭೆಯಾದರೆ ಪ್ರಧಾನಿ ವಿಶ್ವಾಸ ಮತ ನೀಡುವಂತೆ ಮನವಿ ಮಾಡುತ್ತಾರೆ.
ಹೊಸದಾಗಿ ಅಸ್ತಿತ್ವಕ್ಕೆ ಬಂದ ಸರ್ಕಾರ ವಿಶ್ವಾಸ ಮತ ಗಳಿಸಲು ವಿಫಲವಾದರೆ ಪತನವಾಗಲಿದೆ. ಹೆಚ್ಚು ಸದಸ್ಯರ ಸಂಖ್ಯೆ ಹೊಂದಿರುವ ಮತ್ತೊಂದು ಪಕ್ಷ ಸರ್ಕಾರ ರಚನೆ ಮಾಡಲಿದೆ.
ಲೋಕಸಭೆಯಲ್ಲಿ ಬಲಾಬಲ
ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿರುವ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಲೋಕಸಭೆಯಲ್ಲಿ ಬಿಜೆಪಿ 273 ಸದಸ್ಯ ಬಲವನ್ನು ಹೊಂದಿದೆ. ಎಸ್ಡಿಎ ಮೈತ್ರಿಕೂಟ ಸೇರಿದರೆ ಸದಸ್ಯ ಬಲ 310 ಆಗಲಿದೆ. ಬಿಜೆಪಿ ಎಲ್ಲಾ ಸದಸ್ಯರಿಗೆ ವಿಪ್ ಜಾರಿ ಮಾಡಿದೆ. ಶಿವಸೇನೆ ಸಹ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದೆ. ಆದ್ದರಿಂದ, ಸರ್ಕಾರ ಪತನವಾಗುವ ಸಾಧ್ಯತೆ ಕಡಿಮೆ ಇದೆ.