ಸುಪ್ರೀಂ ನಿರ್ದೇಶನ ಉಲ್ಲಂಘನೆ, ಹಂಗಾಮಿ ಸಿಬಿಐ ಚೀಫ್ ಸಂಕಷ್ಟದಲ್ಲಿ?
ನವದೆಹಲಿ, ನವೆಂಬರ್ 28 : ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಾಗಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ನಿರ್ದೇಶನ ಕೊಟ್ಟಿದ್ದರೂ, ಆದಾಯ ತೆರಿಗೆ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪ ಹೊತ್ತಿದ್ದ ವ್ಯಕ್ತಿಯ ವಿರುದ್ಧದ ತನಿಖೆಯನ್ನು ನಿಲ್ಲಿಸಿದ್ದಕ್ಕಾಗಿ ಹಂಗಾಮಿ ಸಿಬಿಐ ನಿರ್ದೇಶಕ ಎಂ ನಾಗೇಶ್ವರ ರಾವ್ ಅವರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಆದಾಯ ತೆರಿಗೆ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪವನ್ನು ವಿವಾದಾತ್ಮಕ ಮಧ್ಯವರ್ತಿ ಮತ್ತು ಚಾರ್ಟರ್ಡ್ ಅಕೌಂಟಂಟ್ ಸಂಜಯ್ ಭಂಡಾರಿ ಮೇಲಿದೆ. ಈ ಪ್ರಕರಣಕ್ಕೆ ಮಂಗಳ ಹಾಡಿದ ಆರೋಪವನ್ನು ನಾಗೇಶ್ವರ ರಾವ್ ಅವರು ಹೊತ್ತಿದ್ದಾರೆ. ಅಲ್ಲದೆ, ನ್ಯಾಯಾಂಗ ನಿಂದನೆ ಮಾಡಿದ ಆರೋಪ ಅವರ ಮೇಲೆ ಬಂದರೂ ಅಚ್ಚರಿಯಿಲ್ಲ.
ಕೋರ್ಟ್ಗೆ ನೀಡಿದ ದಾಖಲೆಯನ್ನೇ ಸೋರಿಕೆ ಮಾಡಿದರೇ ಸಿಬಿಐ ನಿರ್ದೇಶಕ?
ಸದ್ಯಕ್ಕೆ ಸುದೀರ್ಘ ರಜೆಯ ಮೇಲಿರುವ ಸಿಬಿಐನ ನಿರ್ದೇಶಕ ಅಲೋಕ್ ವರ್ಮಾ ಅವರು, ಸಂಜಯ್ ಭಂಡಾರಿ ಪ್ರಕರಣದ ಮರುತನಿಖೆಗೆ ಆದೇಶಿಸಿದ್ದರು. ಆದರೆ, ಈ ಬಗ್ಗೆ ವಿಚಾರಿಸಿದಾಗ ಆ ತನಿಖೆಯನ್ನೇ ನಿಲ್ಲಿಸಲಾಗಿರುವುದು ತಿಳಿದುಬಂದಿತ್ತು. ಇದನ್ನು ವಿರೋಧಿಸಿ ಮೂರು ದಿನಗಳ ನಂತರ ಅಲೋಕ್ ವರ್ಮಾ ಅವರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಆಗ, ಸುಪ್ರೀಂ ಕೋರ್ಟ್, ನಾಗೇಶ್ವರ ರಾವ್ ಅವರು ಆಡಳಿತಾತ್ಮಕ ನಿರ್ಧಾರಗಳನ್ನು ಮಾತ್ರ ತೆಗೆದುಕೊಳ್ಳಬೇಕು, ಪಾಲಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ಆದೇಶಿಸಿತ್ತು.
ಸಿಬಿಐನಲ್ಲಿ ಆಂತರಿಕ ಕಚ್ಚಾಟ, ಆರೋಪ, ಪ್ರತ್ಯಾರೋಪಗಳು ಭುಗಿಲೆದ್ದು, ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರನ್ನು ಕಡ್ಡಾಯ ರಜೆಯ ಮೇಲೆ ಕೇಂದ್ರ ಸರಕಾರ ಕಳಿಸಿದ ನಂತರ, ಅಕ್ಟೋಬರ್ 23ರಂದು ಎಂ ನಾಗೇಶ್ವರ ರಾವ್ ಅವರು ಹಂಗಾಮಿ ಸಿಬಿಐ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದರು.
ಸಿವಿಸಿ ವರದಿಗೆ ಪ್ರತಿಕ್ರಿಯಿಸಲು ಸಮಯ ಕೇಳಿದ ಅಲೋಕ್ ವರ್ಮಾ
2015ರ ಜನವರಿಯಲ್ಲಿ ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರ ಮೇಲೆ ಸಿಬಿಐ ದಾಳಿ ನಡೆಸಿತ್ತು. ತನಿಖೆಯ ಸಂದರ್ಭದಲ್ಲಿ ಆಡಿಟರ್ ಸಂಜಯ್ ಭಂಡಾರಿ, ಹಲವಾರು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಕೈಮಿಲಾಯಿಸಿ ಅನೇಕ ಕುಳಗಳ ಆದಾಯ ತೆರಿಗೆ ವಂಚನೆಯಾಗುವಂತೆ ಮಾಡಿದ್ದ. ಆಗಾಗ ಹಲವಾರು ಕಡೆಗಳಲ್ಲಿ ಸಿಬಿಐ ಆದಾಯ ತೆರಿಗೆ ಅಧಿಕಾರಿಗಳ ಮೇಲೆ ದಾಳಿ ನಡೆಸಿತ್ತು.
ಮುಖ್ಯಸ್ಥರಿಲ್ಲದೆ ನಾವಿಕನಿಲ್ಲದ ದೋಣಿಯಂತಾದ ಸಿಬಿಐ
ಚೆನ್ನೈನ ಸಿಬಿಐ ನಿರ್ದೇಶಕರಾಗಿದ್ದಾಗ ಇದೇ ಎಂ ನಾಗೇಶ್ವರ ರಾವ್ ಅವರು ಆ ತನಿಖೆಯ ಮುಂದಾಳತ್ವ ವಹಿಸಿದ್ದರು. ಆಗಲೇ ಅವರು ಸಾಕ್ಷ್ಯ ಕೊರತೆಯ ಕಾರಣ ನೀಡಿ ಪ್ರಕರಣ ಮುಚ್ಚುವ ನಿರ್ಧಾರ ತೆಗೆದುಕೊಂಡಿದ್ದರು. ಇದನ್ನು ವಿರೋಧಿಸಿದ್ದಕ್ಕಾಗಿ ಪೊಲೀಸ್ ಅಧಿಕಾರಿಗಳಾದ ಪಿ ಥೇನಿಮೋಳಿ ಮತ್ತು ಡೆಪ್ಯುಟಿ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಆರ್ ಪ್ರಭು ಅವರನ್ನು ಸಿಬಿಐನಿಂದ ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು.