ಅಯ್ಯಪ್ಪ ಭಕ್ತರ ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸಿದ ಸುಪ್ರೀಂ ತೀರ್ಪು ?
ಕರಾವಳಿ, ಮಲೆನಾಡಿನ ಕಡೆಯ ಕೆಲವು ಪ್ರಮುಖ ದೇವಾಲಯಗಳನ್ನು ಪ್ರವೇಶಿಸಬೇಕಾದರೆ ಅಂಗಿ, ಬನಿಯನ್ ತೆಗೆದು ಒಳಗೆ ಬರಬೇಕು ಎನ್ನುವ ನಿಯಮವಿದೆ. ಕೇರಳದ ಗುರುವಾಯೂರು ದೇವಾಲಯದಲ್ಲಿ ಪುರುಷರು ಧೋತಿ, ಮಹಿಳೆಯರು ಸೀರೆ ಅಥವಾ ಚೂಡಿದಾರ್ ಹಾಕಿಕೊಂಡು ಬರಬೇಕು ಎನ್ನುವ ಪದ್ದತಿಯಿದೆ. 21ನೇ ಶತಮಾನದಲ್ಲಿದ್ದರೂ ಯಾಕಾಗಿ, ಈ ಪದ್ದತಿ ಎಂದರೆ ಅದಕ್ಕೊಂದು ಧಾರ್ಮಿಕ ಹಿನ್ನಲೆ ಇದ್ದಿರಬಹುದು.
ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪನ್ನು ಇಂದು ( ಸೆ 28) ನೀಡಿದೆ. ಕಳೆದ ಮೂರು ದಿನಗಳಲ್ಲಿ ಸುಪ್ರೀಂ ನೀಡಿದ ಐತಿಹಾಸಿಕ ತೀರ್ಪುಗಳಲ್ಲಿ ಇದೂ ಒಂದು. 10-50 ವರ್ಷದೊಳಗಿನ (ಋತುಮತಿಯಾಗುವ ಕಾರಣಕ್ಕಾಗಿ) ಮಹಿಳೆಯರಿಗೆ ಇಲ್ಲಿ ಪ್ರವೇಶ ನಿಷಿದ್ದ ಎನ್ನುವ ಕಾರಣವನ್ನು ದೇವಾಲಯದ ಆಡಳಿತ ಮಂಡಳಿ ನ್ಯಾಯಾಲಯಕ್ಕೆ ನೀಡಿತ್ತು.
ಇಲ್ಲಿ ಮಹಿಳೆಯರು, ಪುರುಷರು ಬೇಧಭಾವ ಎನ್ನುವ ಪ್ರಶ್ನೆ ಬರದೇ ಶ್ರೀಕ್ಷೇತ್ರಗಳಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಸಂಪ್ರದಾಯ ಮುಂದುವರಿದುಕೊಂಡು ಹೋಗಲಿ ಎನ್ನುವುದು ಎಲ್ಲರ ಆಶಯ ಇರುತ್ತದೆಯೇ ಹೊರತು, ಪುರುಷರು, ಮಹಿಳೆಯರು ಎನ್ನುವ ತಾರತಮ್ಯ ಇರುವ ಸಾಧ್ಯತೆ ಕಮ್ಮಿ ಎನ್ನುವುದು ಹೆಚ್ಚಿನ ಅಯ್ಯಪ್ಪ ಭಕ್ತರ ಒಕ್ಕೂರಿಲಿನ ಅಭಿಪ್ರಾಯ.
ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ: ಸುಪ್ರೀಂನಿಂದ ಐತಿಹಾಸಿಕ ತೀರ್ಪು
ಸುಪ್ರೀಂಕೋರ್ಟ್ ಇಂದು ನೀಡಿದ ತೀರ್ಪಿನಲ್ಲಿ ಪೀಠದಲ್ಲಿದ್ದ ಐವರಲ್ಲಿ ಒಬ್ಬರು ಅಭಿಪ್ರಾಯ ಪಟ್ಟಿದ್ದು ಇದನ್ನೇ, ಅವರು ಮಹಿಳೆ ಅನ್ನೋದು ಗಮನಿಸಬೇಕಾದ ವಿಚಾರ. ಧಾರ್ಮಿಕ ಆಚರಣೆಗಳನ್ನು ಸಮಾನತೆಯ ಹಕ್ಕಿನ ಆಧಾರದಮೇಲೆ ನಿರ್ಧರಿಸುವುದಕ್ಕಾಗುವುದಿಲ್ಲ, ಅದು ಭಕ್ತರಿಗೆ ಬಿಟ್ಟಿದ್ದು. ಅತ್ಯಗತ್ಯ ಧಾರ್ಮಿಕ ಆಚರಣೆಗಳನ್ನು ಕೋರ್ಟು ನಿರ್ಧರಿಸುವುದು ಸರಿಯಲ್ಲ. ಧಾರ್ಮಿಕ ಭಾವನೆಗಳಿಗೆ ಇದು ಘಾಸಿಯುಂಟುಮಾಡಬಹುದು ಎನ್ನುವುದು ನ್ಯಾ. ಇಂದು ಮಲ್ಹೋತ್ರ ಅವರ ಅಭಿಪ್ರಾಯವಾಗಿತ್ತು.
ಅನೈತಿಕ ಸಂಬಂಧದ ವಿಚಾರದಲ್ಲಿ ಸುಪ್ರೀಂಕೋರ್ಟ್ ಏನು ಗುರುವಾರದಂದು (ಸೆ 27) ತೀರ್ಪು ನೀಡಿತ್ತೋ, ಅದೇ ರೀತಿ ಶಬರಿಮಲೆ ತೀರ್ಪಿನ ವಿಚಾರದಲ್ಲೂ ಜನಸಾಮಾನ್ಯರಿಗೆ ಸಾಕಷ್ಟು ಅಸಮಾಧಾನವಿರುವುದು ಸ್ಪಷ್ಟ. ಆಯಾಯ ಧಾರ್ಮಿಕ ಕ್ಷೇತ್ರಗಳು ಅನಾದಿ ಕಾಲದಿಂದಲೂ ಪಾಲಿಸಿಕೊಂಡು ಬರುತ್ತಿರುವ ಸಂಪ್ರದಾಯಗಳು, 21ನೇ ಶತಮಾನದಲ್ಲಿ ಇದ್ದೇವೆ ಎನ್ನುವ ಕಾರಣಕ್ಕಾಗಿ ಬದಲಾಗಬೇಕಾಗಿಲ್ಲ. ಇದಕ್ಕೆ ಪುರುಷರು, ಮಹಿಳೆಯರು ಎನ್ನುವ ಹಣೆಪಟ್ಟಿ ಕಟ್ಟುವುದು ಎಷ್ಟು ಸರಿ ಎನ್ನುವ ಮಾತು ಕೇಳಿಬರುತ್ತಿದೆ.
ಶಬರಿಮಲೆಗೆ ತೆರಳುವುದು ಉಳಿದ ದೇವಾಲಯಗಳಂತೆ ಸಲೀಸಲ್ಲ
ಪುರುಷರಿಗೂ, ಶಬರಿಮಲೆಗೆ ತೆರಳುವುದು ಉಳಿದ ದೇವಾಲಯಗಳಂತೆ ಸಲೀಸಲ್ಲ. ಕೆಲವೊಂದು ಅಪವಾದಗಳನ್ನು ಬಿಟ್ಟರೆ, ಕಟ್ಟುನಿಟ್ಟಿನ ವ್ರತಾಚರಣೆ ಮಾಡಿ, ಇರುಮುಡಿ ಕಟ್ಟಿಕೊಂಡು ಶಬರಿಮಲೆಗೆ ತೆರಳಬೇಕಾಗುತ್ತದೆ. ಈ ಸಂದರ್ಭದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಸಂಸಾರದಿಂದ ದೂರವಿರಬೇಕು ಎನ್ನುವ ಕ್ರಮವಿದೆ. ಪಂಪಾದಿಂದ ಹದಿನೆಂಟು ಕಿ.ಮೀ ದೂರ ನಡೆದುಕೊಂಡು ದೇವಾಲಯ ಪ್ರವೇಶಿಸಬೇಕಾಗುತ್ತದೆ, ದಟ್ಟಾರಣ್ಯ, ಭಾರೀ ಜನಸಂದಣಿ ಬೇರೆ. ಈ ಕಾರಣವೂ, ಮಹಿಳೆಯರ ನಿರ್ಬಂಧಕ್ಕೆ ಕಾರಣವಾಗಿದ್ದಿರಬಹುದು.
ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ತೀರ್ಪು: ಸಚಿವೆ ಜಯಮಾಲಾ ಸ್ವಾಗತ
ಮನೆಯಲ್ಲಿ ದೇವರಿಗೆ ದೀಪವನ್ನೂ ಹಚ್ಚದ ಉದಾಹರಣೆಗಳಿವೆ
ಮಹಿಳೆ ಮುಟ್ಟಾಗಿರುವ ಸಂದರ್ಭಗಳಲ್ಲಿ ಅದೆಷ್ಟೋ ಮನೆಯಲ್ಲಿ ದೇವರಿಗೆ ದೀಪವನ್ನೂ ಹಚ್ಚದ ಉದಾಹರಣೆಗಳಿವೆ, ಇನ್ನು ಗುಡಿ ಸುತ್ತುವುದು ದೂರದ ಮಾತು. ಹೀಗಿರುವಾಗ, ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ನಿಷಿದ್ದದ ಹಿಂದೆ ಏನೋ ಒಂದು ಬಲವಾದ ಕಾರಣಗಳಿರಬಹುದು. ಅದೇನಂದರೆ, ಸ್ವಾಮಿ ಅಯ್ಯಪ್ಪ ನೈಷ್ಠಿಕ ಬ್ರಹ್ಮಾಚಾರಿ. ಆದ್ದರಿಂದ ಋತುಮತಿಯಾಗುವ ಮಹಿಳೆಯರು ಆತನ ದೇವಾಲಯವನ್ನು ಪ್ರವೇಶಿಸುವಂತಿಲ್ಲ ಎನ್ನುವ ನಿಯಮ ಏನಿದೆಯೋ ಅದು ಇಂದು ನಿನ್ನೆಯದಲ್ಲ.
ಶಬರಿಮಲೆ ತೀರ್ಪನ್ನು ಮಹಿಳಾ ನ್ಯಾಯಮೂರ್ತಿ ಇಂದು ಅವರೇ ವಿರೋಧಿಸಿದ್ದೇಕೆ?
ಅಯ್ಯಪ್ಪನ ಪಾದಮುಟ್ಟಿ ನಮಸ್ಕಾರ ಮಾಡಿದ್ದೇನೆ
ಅಯ್ಯಪ್ಪನ ಪಾದಮುಟ್ಟಿ ನಮಸ್ಕಾರ ಮಾಡಿದ್ದೇನೆ ಎನ್ನುವ ಕರ್ನಾಟಕದ ಸಚಿವೆಯೊಬ್ಬರು ಒಂದು ಕಡೆ, ಮುಂಬೈನ ಐತಿಹಾಸಿಕ ಹಾಜಿ ಆಲಿ ದರ್ಗಾ ಪ್ರವೇಶಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧದ ವಿಚಾರದಲ್ಲಿ ಹೋರಾಟ ಮಾಡಿ ಸೈ ಎನಿಸಿಕೊಂಡ ಭೂಮಾತಾ ಬ್ರಿಗೇಡಿನ ತೃಪ್ತಿ ದೇಸಾಯಿ ಇನ್ನೊಂದೆಡೆ. ಇವರಿಬ್ಬರಲ್ಲೂ ಇದ್ದದ್ದು ದೇವರ ಮೇಲಿನ ಅಪಾರ ಭಕ್ತಿಯೋ ಅಥವಾ ಈ ವಿಚಾರವನ್ನು ಇಟ್ಟುಕೊಂಡು ಮುಖ್ಯವಾಹಿನಿಗೆ ಬರಬೇಕು ಎನ್ನುವ ಉದ್ದೇಶವೋ ಎನ್ನುವುದು, ಆಸ್ತಿಕ ವಲಯದಲ್ಲಿ ಕಾಡುತ್ತಿರುವ ಪ್ರಶ್ನೆ. ನಿಜವಾದ ಭಕ್ತರು ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯವನ್ನು ಮೀರಲು ಬಯಸುತ್ತಾರಾ?
ಶಬರಿಮಲೆ ತೀರ್ಪನ್ನು ಮಹಿಳಾ ನ್ಯಾಯಮೂರ್ತಿ ಇಂದು ಅವರೇ ವಿರೋಧಿಸಿದ್ದೇಕೆ?
ಖ್ಯಾತ ಗಾಯಕ ಮತ್ತು ದೇವಾಲಯದ ಪರಮಭಕ್ತ ಕೆ ಜೆ ಯೇಸುದಾಸ್
ಗುರುವಾಯೂರು ದೇವಾಲಯದಲ್ಲಿ ಹಿಂದೂಯೇತರರಿಗೆ ಈಗಲೂ ಪ್ರವೇಶವಿಲ್ಲ. ಖ್ಯಾತ ಗಾಯಕ ಮತ್ತು ದೇವಾಲಯದ ಪರಮಭಕ್ತ ಕೆ ಜೆ ಯೇಸುದಾಸ್ ಬಹಳಷ್ಟು ಬಾರಿ ಪ್ರಯತ್ನಿಸಿದರೂ ದೇವಾಲಯದ ಆಡಳಿತ ಮಂಡಳಿ ಅವರಿಗೆ ಒಳಗೆ ಬರಲು ಅನುವು ಮಾಡಿಕೊಟ್ಟಿಲ್ಲ. ಚೆನ್ನೈ ಹೊರವಲಯದಲ್ಲಿರುವ ಮೇಲ್ಮರ್ವತೂರು ಆದಿಪರಾಶಕ್ತಿ ಓಂ ಶಕ್ತಿ ದೇವಾಲಯಕ್ಕೆ ಈಗಲೂ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಹೋಗುವುದು. ಇದೆಲ್ಲಾ, ಆಯಾಯ ಕ್ಷೇತ್ರಗಳು ಪಾಲಿಸಿಕೊಂಡು ಬರುತ್ತಿರುವ ಸಂಪ್ರದಾಯ... ನಂಬಿಕೆ..
ಶಬರಿಮಲೆಗೆ ಮಹಿಳೆ ಪ್ರವೇಶದ ವಿಚಾರದಿಂದಲೇ ಕ್ಷೇತ್ರಕ್ಕೆ ಹಾನಿಯಾಗಿದ್ದು
ಕಳೆದ ತಿಂಗಳ ಕಂಡುಕೇಳರಿಯದ ಮಳೆ, ಪ್ರವಾಹಕ್ಕೆ ಕೇರಳ ಅಕ್ಷರಸಃ ತತ್ತರಿಸಿ ಹೋಗಿತ್ತು. ಶಬರಿಮಲೆಯೂ ಹಾನಿಗೊಳಗಾಗಿತ್ತು. ಶಬರಿಮಲೆಗೆ ಮಹಿಳೆಯ ಪ್ರವೇಶದ ವಿಚಾರದಿಂದಲೇ ಕ್ಷೇತ್ರಕ್ಕೆ ಹಾನಿಯಾಗಿದ್ದು ಎನ್ನುವ ಪುಕಾರನ್ನು ಕೆಲವರು ಹಬ್ಬಿಸಿದ್ದರು. ಇದನ್ನೆಲ್ಲಾ ನಂಬಲು ಕಷ್ಟವಾದರೂ, ನ್ಯಾಯಪೀಠದಲ್ಲಿದ್ದ ಒಬ್ಬರು ಹೇಳಿದಂತೆ, ಪ್ರತಿಯೊಂದು ಧರ್ಮವೂ ಅದು ನಂಬಿದ ಧಾರ್ಮಿಕ ಆಚರಣೆಗಳಿಗೆ ಗೌರವ ನೀಡುವುದನ್ನು ಬಯಸುತ್ತದೆ. ಇಂಥ ವಿಷಯಗಳಲ್ಲಿ ಕೋರ್ಟಿನ ಮಧ್ಯಸ್ಥಿಕೆ ಸರಿಯಲ್ಲ ಎಂದು ಹೇಳಿರುವುದು, ಅಯ್ಯಪ್ಪ ಭಕ್ತರ ಭಾವನೆಯನ್ನೇ ಅಕ್ಷರಸಃ ಇವರು ತೋರಿದಂತಿದೆ. ಏನೇ ಆಗಲಿ, ಸುಪ್ರೀಂ ತೀರ್ಪನ್ನು ಗೌರವಿಸಲೇ ಬೇಕು ಮತ್ತು ಮಹಿಳೆಯರಿಗೂ ಸಮಾನತೆ ಸಿಗಬೇಕು. ಸ್ವಾಮಿಯೇ ಶರಣಂ ಅಯ್ಯಪ್ಪ...