ಸೂರತ್ ವ್ಯಾಪಾರಿ 6 ಸಾವಿರ ಕೋಟಿ ಸರಕಾರಕ್ಕೆ ಒಪ್ಪಿಸಿದರಾ?
ಸೂರತ್, ನವೆಂಬರ್ 15: ಹಳೇ 500, 1000 ನೋಟುಗಳ ರದ್ದು ನಿರ್ಧಾರ ಘೋಷಣೆಯಾದ ಮೇಲೆ ಸೂರತ್ ಮೂಲದ ವ್ಯಾಪಾರಿಯೊಬ್ಬರು 6,000 ಕೋಟಿ ರುಪಾಯಿ ನಗದನ್ನು ಸರಕಾರಕ್ಕೆ ಒಪ್ಪಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸೂರತ್ ಮೂಲದ ವಜ್ರದ ವ್ಯಾಪಾರಿ, ಲಾಲ್ ಜಿ ಭಾಯ್ ಪಟೇಲ್ ಅಪಾರ ಪ್ರಮಾಣದ ನಗದನ್ನು ಹೊಂದಿದ್ದವರು ಎಂಬುದು ಸದ್ಯದ ಮಾಹಿತಿ.
ನೋಟು ರದ್ದು ಘೋಷಣೆಯಾದ ವಾರದೊಳಗೆ ಸಾವಿರಾರು ಕೋಟಿ ರುಪಾಯಿ ನಗದು ಒಪ್ಪಿಸಿದ್ದು, ಇದರ ಹಿಂದಿನ ನಿಜವಾದ ಕಾರಣ ಬಯಲಾಗಿಲ್ಲ. ದಾನ-ಧರ್ಮ, ಸಮಾಜ ಸೇವೆ ಕಾರ್ಯಗಳಿಂದ ಹೆಸರಾದ ಲಾಲ್ ಜಿ ಭಾಯ್ ಪಟೇಲ್, ಈ ವರ್ಷದ ಆರಂಭದಲ್ಲಿ ದೇಶದ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇನ್ನೂರು ಕೋಟಿ ರುಪಾಯಿ ದಾನ ಮಾಡಿದ್ದರು ಎಂಬುದು ಸುದ್ದಿಯ ಹೂರಣ.[ಕೋಟಿಗಟ್ಟಲೆ ಹಣ ಬ್ಯಾಂಕ್ ಗೆ ಕಟ್ಟಿ, ತೆರಿಗೆ ಪಾವತಿಸಿ ಸಾಕು!]
ತಮ್ಮ ಬಳಿ ಕೆಲಸ ಮಾಡುವ ನೌಕರರಿಗೆ ದೀಪಾವಳಿಯಲ್ಲಿ ಕಾರು, ಫ್ಲ್ಯಾಟ್ ನೀಡುವ ವಿಚಾರದಲ್ಲೂ ಪಟೇಲ್ ಹೆಸರುವಾಸಿ. ನೋಟು ರದ್ದು ಕ್ರಮ ಜನಸಾಮಾನ್ಯರ ಸಹನೆಯನ್ನು ಪರೀಕ್ಷೆಗೆ ಒಡ್ಡುತ್ತಿದೆ. ಇಷ್ಟುದ್ದ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು, ಎರಡೂವರೆ ಸಾವಿರ, ನಾಲ್ಕೂವರೆ ಸಾವಿರ ಪಡೆಯುವುದು ರೇಜಿಗೆ ಸಂಗತಿಯಾಗಿದೆ.[ಹಣ ವಿನಿಮಯ ಮಾಡಿದವರ ಬೆರಳಿಗೆ ಮಸಿ]
ಆದರೆ, ಈ ನಿರ್ಧಾರದ ನಿಜವಾದ ಫಲಿತಾಂಶ ಇನ್ನಷ್ಟೇ ಬರಬೇಕಾಗಿದೆ. ಆರು ಸಾವಿರ ಕೋಟಿ ರುಪಾಯಿಯನ್ನು ವ್ಯಾಪಾರಸ್ಥರೊಬ್ಬರು ಸರಕಾರಕ್ಕೆ ಒಪ್ಪಿಸಿದ್ದಾರೆ ಎಂಬ ಸುದ್ದಿಯಂತೂ ಜೋರು ಸದ್ದು ಮಾಡುತ್ತಿದೆ. ಇದು ನಿಜವಾಗಿದ್ದರೆ ತುಂಬ ದೊಡ್ಡ ಬೆಳವಣಿಗೆ. ಇನ್ನು ಮುಂದೆ ಇನ್ಣೂ ಎಂಥ ಸುದ್ದಿ ಬರುತ್ತದೋ ಕಾದು ನೋಡಬೇಕಿದೆ.