ವಿಪ್ಲವ್ ನನ್ನ ಚರ್ಮ ನೋಡಿ ಮಾತನಾಡಿದ್ದಾರೆ: ಡಯಾನಾ ಹೆಡನ್
ನವದೆಹಲಿ, ಏಪ್ರಿಲ್ 27: "ನಿಜವಾದ ಭಾರತ ನಾರಿ ಐಶ್ವರ್ಯ ರೈ, ಡಯಾನಾ ಹೆಡನ್ ಅಲ್ಲ" ಎನ್ನುವ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದ ತ್ರಿಪುರ ಮುಖ್ಯಮಂತ್ರಿ ವಿಪ್ಲವ್ ದೇವ್ ಗೆ ಡಯನಾ ಹೆಡನ್ ಪ್ರತ್ಯುತ್ತರ ನೀಡಿದ್ದಾರೆ.
"ನಾನು ಚಿಕ್ಕ ವಯಸ್ಸಿನಿಂದಲೂ ನನ್ನ ಚರ್ಮದ ಬಣ್ಣದಿಂದಾಗಿ ಇಂಥ ಮಾತುಗಳನ್ನು ಕೇಳುತ್ತಲೇ ಬಂದಿದ್ದೇನೆ. ಆದರೂ ನಾನು ಗೆದ್ದಿದ್ದೇನೆ. ಸಾಧನೆಯನ್ನು ನೋಡಿ ಜನರು ಹೆಮ್ಮೆ ಪಡೆಬೇಕು, ಅದನ್ನು ಟೀಕಿಸುವುದಲ್ಲ. ನಾನು ಕಂದು ಚರ್ಮದ ಹೆಮ್ಮೆಯ ಭಾರತೀಯ ನಾರಿ. ನನಗೆ ಬೇಸರವಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಒಂದು ಘನತೆ ಇದೆ. ಅವರು ಆಡುವ ಮಾತಿನ ಬಗ್ಗೆ ಎಚ್ಚರಿಕೆ ಇರಲಿ" ಎಂದು ಅವರು ನೇರಾನೇರವಾಗಿ ದಿಟ್ಟ ಪ್ರತಿಕ್ರಿಯೆ ನೀಡಿದ್ದಾರೆ.
"ನಿಜವಾದ ಭಾರತೀಯ ನಾರಿ ಐಶ್ವರ್ಯ ರೈ, ಡಯಾನಾ ಹೆಡನ್ ಅಲ್ಲ!"
1997 ರಲ್ಲಿ ವಿಶ್ವಸುಂದರಿ ಪ್ರಶಸ್ತಿ ಗೆದ್ದ ಕೃಷ್ಣ ಸುಂದರಿ ಡಯಾನಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ದೇವ್, 'ಅವರು ವಿಶ್ವ ಸುಂದಿರಿ ಆಗಿದ್ದು ಹೇಗೆ ಎಂದು ಪ್ರಶ್ನಿಸಿದ್ದರು. ನಿಜವಾದ ಭಾರತೀಯ ನಾರಿ ಎಂದರೆ ಅದು ಐಶ್ವರ್ಯ ರೈ' ಎಂದಿದ್ದರು.
ಇಜತ್ತೀಚೆಗಷ್ಟೇ, ಮಹಾಭಾರತ ಕಾಲದಿಂದಲೂ ಅಂತರ್ಜಾಲ ಸೌಲಭ್ಯಗಳಿದ್ದವು ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದ ಅವರು ಇದೀಗ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. ತ್ರಿಪುರ ರಾಜ್ಯದ ಮೊಟ್ಟ ಮೊದಲ ಬಿಜೆಪಿ ಮುಖ್ಯಮಂತ್ರಿ ಎಮಬ ಹೆಗ್ಗಳಿಕೆ ಪಡೆದ ಅವರು ಸಾಕಷ್ಟು ಸಮಸ್ಯೆಗಳನ್ನು ಹೊಂದಿರುವ ತ್ರಿಪುರದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸುವುದು ಬಿಟ್ಟ ಇಂಥ ವಿಷಯಗಳ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸುತ್ತಿರುವುದೇಕೆ ಎಂಬುದು ಹಲವರ ಪ್ರಶ್ನೆ.