ಧೂಮ್ ಕಳ್ಳರ ಬೈಕ್ ಓಡಿದ್ದು ಮೂರೇ ದಿನ
ಹರ್ಯಾಣ, ಅ. 31 : ಸಿನಿಮೀಯ ರೀತಿಯಲ್ಲಿ 125 ಅಡಿ ದೂರದ ಸುರಂಗ ಕೊರೆದು ಹರ್ಯಾಣದ ಪಂಜಾಬ್ ನ್ಯಾಷನಲ್ ಬ್ಯಾಂಕ್ ದರೋಡೆ ಮಾಡಿದ್ದ ಚಾಣಾಕ್ಷ ಕಳ್ಳರು ಪೊಲೀಸರ ಬಲೆಗೆ ಬಿದ್ದಿದ್ದು ಪ್ರಮುಖ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಧೂಮ್ ಚಿತ್ರದ ರೀತಿಯಲ್ಲಿ ಅಪಾರ ಬಂಗಾರ ಮತ್ತು ಹಣ ದೋಚಿ ಪಲಾಯನವಾಗಿದ್ದ ಉಳಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ದರೋಡೆ ನಡೆದು ಮೂರು ದಿನಗಳ ಅವಧಿಯಲ್ಲಿ ಪ್ರಕರಣ ಭೇದಿಸಲಾಗಿದೆ. ಬಂಧಿತರಿಂದ 39 ಕೆಜಿ ಚಿನ್ನ ಮತ್ತು 60 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.[ಹರ್ಯಾಣದಲ್ಲಿ ಧೂಮ್ ಚಿತ್ರ ಪ್ರೇರಣೆಯಿಂದ ಕಳ್ಳತನ]
ಪ್ರಕರಣದ ಮಾಸ್ಟರ್ ಮೈಂಡ್, ಮಹಿಲಾಪ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತನ ಮನೆಯಿಂದಲೇ ಸುರಂಗ ತೋಡಲಾಗಿತ್ತು. ಉಳಿದಂತೆ ಪ್ರಯೋಗಾಲಯದ ಸಹಾಯಕ ಸುರೇಂದರ್, ರಿಯಲ್ ಎಸ್ಟೇಟ್ ಉದ್ಯಮಿ ಸತೀಶ್ ಮತ್ತು ರೈತರಾದ ಬಾಲರಾಜ್ ಮತ್ತು ರಾಜೇಶ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. [ಆಟೊವನ್ನೇ ದರೋಡೆ ಅಡ್ಡೆ ಮಾಡಿಕೊಂಡಿದ್ದರು]
ದರೋಡೆಕೋರರು ನಿರಂತರವಾಗಿ ಸುಮಾರು 40 ದಿನಗಳ ಕಾಲ ಸುರಂಗ ತೋಡಿ ಬ್ಯಾಂಕ್ ಪ್ರವೇಶಿಸಿದ್ದರು. ಘಟನೆ ನಡೆದ ನಂತರ ಮಾಸ್ಟರ್ ಮೈಂಡ್ ಮಹಿಪಾಲ್ ಹೆದ್ದಾರಿ ಪಕ್ಕ ತನ್ನ ಕಾರಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಬಗೆಯಲ್ಲಿ ಬ್ಯಾಂಕ್ ದರೋಡೆ ಮಾಡಬಹುದು ಎಂದು ಉಳಿದವರಿಗೆ ತಿಳಿಸಿದ್ದವ ಈತನೇ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.