ಧೀರೂಭಾಯಿ ಅಂಬಾನಿ ನೆನೆದು ಕಣ್ಣೀರಾದ ಅಮಿತಾಬ್ ಬಚ್ಚನ್
ಮುಂಬೈ, ಡಿಸೆಂಬರ್ 25: 'ರಿಲಯನ್ಸ್ ಫ್ಯಾಮಿಲಿ ಡೇ' ಕಾರ್ಯಕ್ರಮದಲ್ಲಿ ಶನಿವಾರ ಭಾಗಿಯಾದ್ದ ಬಿಗ್ ಬಿ ಅಮಿತಾಬ್ ಬಚ್ಚನ್ ಭಾವುಕರಾಗಿದ್ದರು. ತಮ್ಮ 90ರ ದಶಕದ ದಿವಾಳಿಯ ದಿನಗಳು, ಆಗ ಸಹಾಯವಿತ್ತ ಧೀರೂಭಾಯಿ ಅಂಬಾನಿಯನ್ನು ನೆನೆದು ಬಚ್ಚನ್ ಕಣ್ಣಾಲಿಗಳು ಒದ್ದೆಯಾದವು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತಾಬ್ ಬಚ್ಚನ್, "1990ರಲ್ಲಿ ನಾನು ದಿವಾಳಿಯಾಗಿದ್ದೆ. ನನ್ನ ಬ್ಯಾಂಕ್ ಖಾತೆಯಲ್ಲಿ ಇದ್ದ ಹಣ ಝೀರೋ. ಆಗ ಧೀರೂಭಾಯಿ ಅಂಬಾನಿ ತಮ್ಮ ಪುತ್ರ ಅನಿಲ್ ಅಂಬಾನಿಯನ್ನು ನನ್ನ ಬಳಿಕೆ ಸಹಾಯ ಹಸ್ತ ಚಾಚಲು ಕಳುಹಿಸಿದರು. ನಾನು ಈ ತೊಂದರೆಯಿಂದ ಹೊರಗೆ ಬಂದರೆ ಸಾಕು ಎಂಬುದು ಅವರ ಉದ್ದೇಶವಾಗಿತ್ತು. ನಾನು ಈ ಸಹಾಯವನ್ನು ಅವತ್ತು ನಯವಾಗಿ ತಿರಸ್ಕರಿಸಿದೆ," ಎಂದು ಅಮಿತಾಬ್ ನೆನಪಿಸಿಕೊಂಡರು.
ಆದರೆ, "ದೇವರ ದಯೆಯಿಂದ ಮತ್ತೆ ಕೆಲಸಗಳು ಸಿಗಲು ಆರಂಭಿಸಿದವು. ಇದರಿಂದ ನನ್ನ ಸಾಲಗಳನ್ನು ಮುಗಿಸಲು ಸಾಧ್ಯವಾಯಿತು," ಎಂದು ಬಚ್ಚನ್ ಅವತ್ತಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
"ಇದಾದ ನಂತರ ನಾನು ಅವರ ಮನೆಯಲ್ಲೇ ಕಾರ್ಯಕ್ರಮವೊಂದರಲ್ಲಿ ಅವರನ್ನು ಭೇಟಿಯಾದೆ. ಆಗ ಅವರು ನನ್ನನ್ನು ಕರೆದು ಅವರ ಇಂಡಸ್ಟ್ರಿಯ ಸ್ನೇಹಿತರ ಮುಂದೆ, 'ಈ ಹುಡುಗ ಕುಸಿದಿದ್ದರೂ ತನ್ನ ಸ್ವಂತ ಬಲದ ಮೇಲೆ ಎದ್ದು ನಿಂತಿದ್ದಾನೆ. ನಾನು ಅದಕ್ಕಾಗಿ ಅವರನ್ನು ಪ್ರಶಂಸಿಸುತ್ತೇನೆ,' ಎಂದರು. ಅವರ ಈ ಮಾತುಗಳು ಅವರು ನನಗೆ ನೀಡಬಹುದಾಗಿದ್ದ ಎಲ್ಲಾ ಆಸ್ತಿಗಳಿಗಿಂತ ನನಗೆ ಮೌಲ್ಯಯುತವಾಗಿದ್ದವು," ಎಂದು ಬಚ್ಚನ್ ಹೇಳಿದ್ದಾರೆ.
ಧೀರೂಭಾಯಿ ಜೀವನ ಲಕ್ಷಾಂತರ ಜನರ ಹೃದಯ ತಟ್ಟಿದೆ ಎಂದು ಇದೇ ವೇಳೆ ಅಮಿತಾಬ್ ಬಚ್ಚನ್ ಬಣ್ಣಿಸಿದರು.