ಪ್ರಧಾನಿ ಮೋದಿ ಎದುರು ಮಹತ್ವದ ಬೇಡಿಕೆ ಇಟ್ಟ ಡಿ.ಎಚ್. ಶಂಕರಮೂರ್ತಿ!
ಬೆಂಗಳೂರು, ನ. 09: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಶುರುವಾಗಿದ್ದರೆ, ಮತ್ತೊಂದೆಡೆ ಬಿಜೆಪಿ ಹಿರಿಯ ನಾಯಕ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ಮಹತ್ವದ ಬೇಡಿಕೆಯನ್ನು ಶಂಕರಮೂರ್ತಿ ಅವರು ಪ್ರಧಾನಿ ಎದುರು ಇಟ್ಟಿದ್ದಾರೆ.
ಬಿಜೆಪಿಯ ಭೀಷ್ಮ, ಪಕ್ಷದ ಸಂಸ್ಥಾಪಕ ಸದಸ್ಯ ಎಲ್.ಕೆ. ಆಡ್ವಾಣಿ ಅವರನ್ನು ಬಿಜೆಪಿಯಲ್ಲಿ ನಿರ್ಲಕ್ಷ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಅದರ ಬೆನ್ನಲ್ಲಿಯೇ ಪ್ರಧಾನಿ ಮೋದಿ ಅವರು ಅಡ್ವಾಣಿ ಅವರ ನಿವಾಸಕ್ಕೆ ತೆರಳಿ ಕೇಕ್ ಕಟ್ ಮಾಡಿ ತಿನ್ನಿಸುವ ಮೂಲಕ ಆತ್ಮೀಯವಾಗಿ ಶುಭ ಕೋರಿದ್ದಾರೆ. ಪ್ರಧಾನಿ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಕ್ಷದ ಹಿರಿಯ ಅಡ್ವಾಣಿ ಅವರನ್ನು ಭೇಟಿ ಮಾಡಿ ಶುಭ ಕೋರಿದ್ದಾರೆ.
ಮಾಜಿ ಸಭಾಪತಿ ಡಿ.ಎಚ್ ಶಂಕರಮೂರ್ತಿಗೆ ಪ್ರಧಾನಿ ಮೋದಿ ಕರೆ
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಎದುರು ಕರ್ನಾಟಕ ವಿಧಾನ ಪರಿಷತ್ ಮಾಜಿ ಅಧ್ಯಕ್ಷ ಡಿ.ಎಚ್. ಶಂಕರಮೂರ್ತಿ ಅವರು ಪ್ರಧಾನಿ ಮೋದಿ ಎದುರು ಇಟ್ಟಿರುವ ಬೇಡಿಕೆ ಮಹತ್ವ ಪಡೆದುಕೊಂಡಿದೆ. ಪ್ರಧಾನಿ ಮೋದಿ ಎದುರು ರಾಜ್ಯ ಬಿಜೆಪಿ ಹಿರಿಯ ನಾಯಕ ಶಂಕರಮೂರ್ತಿ ಅವರು ಇಟ್ಟುರುವ ಬೇಡಿಕೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಪ್ರಧಾನಿ ಮೋದಿಗೆ ಶಂಕರಮೂರ್ತಿ ಪತ್ರ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ಪತ್ರ ಬರೆದಿದ್ದಾರೆ. 93ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಎಲ್ ಕೆ ಅಡ್ವಾಣಿ ಅವರ ದೇಶ ಸೇವೆಯನ್ನು ನೆನೆಸಿಕೊಂಡಿದ್ದಾರೆ. ಕಳೆದ ಏಳೂವರೆ ದಶಕಗಳಿಂದ ಅಡ್ವಾಣಿ ಅವರು ಸಾರ್ವಜನಿಕ ಸೇವೆಗೆ ಬದುಕನ್ನು ಮುಡಿಪಾಗಿಟ್ಟಿದ್ದಾರೆ ಎಂದು ಪತ್ರದಲ್ಲಿ ಶಂಕರಮೂರ್ತಿ ಉಲ್ಲೇಖಿಸಿದ್ದಾರೆ.
ನಾವೆಲ್ಲರೂ ಹೆಮ್ಮೆ ಪಡುವ ವ್ಯಕ್ತಿತ್ವ
ನಾವೆಲ್ಲರೂ ಹೆಮ್ಮೆ ಪಡುವ ವ್ಯಕ್ತಿತ್ವವನ್ನು ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ಅವರು ಹೊಂದಿದ್ದಾರೆ. ಆರ್ಎಸ್ಎಸ್, ಜನಸಂಘ ಹಾಗೂ ಭಾರತೀಯ ಜನತಾ ಪಾರ್ಟಿ ಮೂಲಕ ಸುಧೀರ್ಘ ಕಾಲ ಜನಸೇವೆಯನ್ನು ಮಾಡಿದ್ದಾರೆ. ನಾನೂ ಸೇರಿದಂತೆ ಕೋಟ್ಯಂತರ ಜನರು ಅಡ್ವಾಣಿ ಅವರ ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದೇವೆ. ಸಾರ್ವಜನಿಕ ಬದುಕಿನಲ್ಲಿ ಅವರ ಸೇವೆ ಹಾಗೂ ತ್ಯಾಗ ಅತಿ ದೊಡ್ಡದು.
ಆತ್ಮೀಯ ಸಂಬಂಧ
ಎಲ್ ಕೆ ಆಡ್ವಾಣಿ ಅವರೊಂದಿಗೆ ನಾನು ಅನೇಕ ಪ್ರವಾಸಗಳನ್ನು ಮಾಡಿದ್ದೇನೆ. ಲಕ್ಷಾಂತರ ಜನರಂತೆ ನಾನೂ ಅವರೊಂದಿಗೆ ಸೇವೆ ಸಲ್ಲಿಸಿರುವುದು ನನ್ನ ಅದೃಷ್ಟ. ಜೊತೆಗೆ ರಾಜ್ಯ ಪ್ರವಾಸ ಸಂದರ್ಭದಲ್ಲಿ ಅವರ ಭಾಷಣಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿ ವೇದಿಕೆ ಹಂಚಿಕೊಂಡಿದ್ದೇನೆ. ಕಳೆದ ಐದು ದಶಕಗಳಿಂದ ನಾನು ಅಡ್ವಾಣಿ ಅವರೊಂದಿಗೆ ಸಂಪರ್ಕ ಹೊಂದಿದ್ದೇನೆ ಎಂದು ಮಾಜಿ ಪ್ರಧಾನಿಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅತ್ಯುನ್ನತ ಗೌರವ ಕೊಡಿ
ಮಾಜಿ ಉಪ ಪ್ರಧಾನಿ ಲಾಲ್ಕೃಷ್ಣ ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಡಿ.ಎಚ್. ಶಂಕರಮೂರ್ತಿ ಅವರು ವಿನಂತಿಸಿದ್ದಾರೆ. ಭಾರತ ರತ್ನ ಪ್ರಶಸ್ತಿಗೆ ಅಡ್ವಾಣಿ ಅವರು ಎಲ್ಲ ರೀತಿಯಿಂದಲೂ ಅತ್ಯಂತ ಹೆಚ್ಚು ಅರ್ಹರಾಗಿದ್ದಾರೆ. ಕರ್ನಾಟಕದ ಕೋಟ್ಯಂತರ ಬಿಜೆಪಿ ಕಾರ್ಯಕರ್ತರ ಪರವಾಗಿ ಈ ಮನವಿಯನ್ನು ನಾನು ಮಾಡುತ್ತಿದ್ದೇನೆಂದು ಶಂಕರಮೂರ್ತಿ ಅವರು ಪತ್ರದಲ್ಲಿ ವಿವರಿಸಿದ್ದಾರೆ.