ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಮುಖ್ಯಮಂತ್ರಿ?
ಮುಂಬೈ, ಅ.24: ನಾನು ದೆಹಲಿಯಲ್ಲೇ ಆರಾಮವಾಗಿದ್ದೇನೆ, ಮತ್ತೆ ರಾಜ್ಯ ರಾಜಕಾರಣಕ್ಕೆ ಹಿಂದಿರುಗುವ ಇರಾದೆಯಿಲ್ಲ. ಕೇಂದ್ರ ಸಚಿವನಾಗಿಯೇ ಮುಂದುವರಿಯುತ್ತೇನೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಆಯ್ಕೆಯಾಗುವ ಸಾಧ್ಯತೆಗಳೂ ನಿಚ್ಚಳವಾಗಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಫಡ್ನವೀಸ್ ರಹಸ್ಯ ಮಾತುಕತೆ ನಡೆಸಿದ್ದಾರೆ. ಇತ್ತ ಮಹಾರಾಷ್ಟ್ರ ಬಿಜೆಪಿಯ ಒಂದು ಗುಂಪು ಗಡ್ಕರಿ ಅವರನ್ನೇ ಮುಖ್ಯಮಂತ್ರಿ ಮಾಡಬೇಕೆಂದು ಒತ್ತಾಯಿಸಿದೆ. 40 ಎಂಎಲ್ ಎಗಳ ತಂಡವೊಂದು ಗಡ್ಕರಿಯೇ ಮುಖ್ಯಮಂತ್ರಿಯಾಗಬೇಕು ಎಂದು ಪಟ್ಟು ಹಿಡಿದು ಕುಳಿತಿದೆ ಎನ್ನಲಾಗಿದೆ.[ಗಡ್ಕರಿಗೆ ಮಹಾರಾಷ್ಟ್ರ ಸಿಎಂ ಆಗುವ ಯೋಗ?]
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಫಡ್ನವೀಸ್ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ನಡೆಯಲಿದೆ. ನಮ್ಮಲ್ಲಿ ಯಾವ ಸ್ಪರ್ಧೆಯೂ ಇಲ್ಲ. ಭಿನ್ನಾಭಿಪ್ರಾಯವೂ ಇಲ್ಲ. ಎಲ್ಲರೂ ಒಗ್ಗಾಟಾಗಿದ್ದು, ಸರ್ಕಾರ ರಚನೆ ಮಾಡಿ ಜನಪರ ಆಡಳಿತ ನೀಡಲಿದ್ದೇವೆ ಎಂದು ಹೇಳಿದ್ದಾರೆ.
ಅಕ್ಟೋಬರ್ 27ರಂದು ನಡೆಯಲಿರುವ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆಗೆ ಅಂತಿಮ ರೂಪ ಸಿಗಲಿದೆ. ಆದರೆ ಈಗಿನ ಬೆಳವಣಿಗೆಗಳು ಮತ್ತು ಕೇಂದ್ರ ಬಿಜೆಪಿ ನಾಯಕರ ಮಾತು ದೇವೇಂದ್ರ ಫಡ್ನವೀಸ್ ಗೆ ಮುಖ್ಯಮಂತ್ರಿ ಗಾದಿ ನಿಚ್ಚಳ ಮಾಡಿದಂತೆ ತೋರುತ್ತಿದೆ. ಗಡ್ಕರಿ ನಾನು ದೇಹಲಿಲ್ಲೇ ಇರುತ್ತೇನೆ ಎಂಬ ಮೂಲಕ ದೇವೇಂದ್ರ ಫಡ್ನವೀಸ್ ದಾರಿ ಸುಗಮವಾಗಿದೆ. ಇತ್ತ ಶಿವಸೇನೆಯೂ ಸಖ್ಯ ಬೆಳೆಸುತ್ತಿರುವುದು ಬಿಜೆಪಿಯ ಎಲ್ಲ ಆತಂಕ ದೂರ ಮಾಡುತ್ತಿದೆ.