ಅಫ್ಘಾನ್ ಬೆಳವಣಿಗೆಗಳು ಬಹಳ ಮಹತ್ವದ ಪರಿಣಾಮ ಬೀರಲಿವೆ; ಜೈಶಂಕರ್
ನವದೆಹಲಿ, ಅಕ್ಟೋಬರ್ 01: ಕಳೆದ ವರ್ಷ ಅಮೆರಿಕ ಹಾಗೂ ತಾಲಿಬಾನ್ ನಡುವಿನ ದೋಹಾ ಒಪ್ಪಂದದಲ್ಲಿ ಭಾರತವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ವಿಷಯವನ್ನು ಪ್ರಸ್ತಾಪಿಸಿರುವ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, 'ಅಫ್ಘಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು ಅಫ್ಘಾನಿಸ್ತಾನ ಹಾಗೂ ಅದರಾಚೆಗೆ ಮಹತ್ವದ ಪರಿಣಾಮಗಳನ್ನು ಉಂಟು ಮಾಡುತ್ತವೆ' ಎಂದು ಹೇಳಿದ್ದಾರೆ.
ಇದೇ ಸಮಯದಲ್ಲಿ, 'ಅಫ್ಘಾನಿಸ್ತಾನ ಎಲ್ಲರನ್ನೂ ಒಳಗೊಂಡ ಸರ್ಕಾರವನ್ನು ಹೊಂದಿದೆಯೇ ಹಾಗೂ ತಾಲಿಬಾನ್, ಅಫ್ಘಾನ್ ನೆಲವನ್ನು ಇತರೆ ದೇಶ ಅಥವಾ ವಿಶ್ವದ ವಿರುದ್ಧ ಭಯೋತ್ಪಾದನೆಗೆ ಬಳಸಿಕೊಳ್ಳಬಹುದೇ ಎಂಬಿತ್ಯಾದಿ ವಿಷಯಗಳು ಭಾರತದ ಪ್ರಮುಖ ಕಾಳಜಿಯಾಗಿದೆ' ಎಂದು ಅವರು ಹೇಳಿದ್ದಾರೆ.
ಯುಎಸ್ ಪ್ರವಾಸದ ಕ್ವಾಡ್ ಸಭೆಯಲ್ಲಿ ಪ್ರಧಾನಿ ಮೋದಿ: 10 ಪ್ರಮುಖ ಅಂಶಗಳನ್ನು ಓದಿ
ಗುರುವಾರ ಅಮೆರಿಕ-ಭಾರತ ಕಾರ್ಯತಂತ್ರ ಪಾಲುದಾರಿಕೆ ವೇದಿಕೆ (US-India Strategic Partnership Forum -USISPF) ವಾರ್ಷಿಕ ನಾಯಕತ್ವ ಶೃಂಗಸಭೆಯಲ್ಲಿ ವರ್ಚುಯಲ್ ಆಗಿ ಮಾತನಾಡಿದ ಅವರು ಅಫ್ಘಾನ್ನಲ್ಲಿನ ಈಚಿನ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆ.
ಅಮೆರಿಕದ ಮಾಜಿ ರಾಯಭಾರಿ ಫ್ರಾಂಕ್ ವಿಸ್ನರ್ ಅವರೊಂದಿಗಿನ ಸಂವಾದದಲ್ಲಿ ತೊಡಗಿಕೊಂಡ ಸಂದರ್ಭ ಜೈಶಂಕರ್, 'ಭಾರತ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಜಪಾನ್ ಒಳಗೊಂಡ ಕ್ವಾಡ್ ಒಕ್ಕೂಟವು ಯಾವುದೇ ದೇಶದ ವಿರುದ್ಧವಲ್ಲ ಹಾಗೂ ಇದನ್ನು ಗುಂಪುಗಾರಿಕೆ ಎಂಬಂತೆ ಕಾಣಬಾರದು ಹಾಗೂ ಋಣಾತ್ಮಕವಾಗಿ ನೋಡಬಾರದು' ಎಂದು ಹೇಳಿದ್ದಾರೆ.
'ಅಫ್ಘಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಹಲವು ವಿಷಯಗಳಲ್ಲಿ ಭಾರತ ಹಾಗೂ ಅಮೆರಿಕ ಒಂದೇ ನೆಲೆಯಲ್ಲಿ ಯೋಚಿಸುತ್ತಿವೆ. ಎರಡೂ ದೇಶಗಳ ಸ್ಥಿತಿ ಏಕಪ್ರಕಾರವಾಗಿದೆ. ಉದಾಹರಣೆಗೆ, ಅಫ್ಘಾನ್ ಅನ್ನು ತಾಲಿಬಾನ್ ಭಯೋತ್ಪಾದನೆಗೆ ಬಳಸಿಕೊಳ್ಳುವ ಸಾಧ್ಯತೆ ಸಂಬಂಧ ಎರಡೂ ದೇಶಗಳಲ್ಲಿ ಆತಂಕವಿದೆ' ಎಂದು ವಿವರಿಸಿದ್ದಾರೆ.
'ಜಾಗತಿಕ ಒಳಿತಿನ ಬಲ'ವಾಗಿ ಕಾರ್ಯನಿರ್ವಹಿಸಲಿದೆ ಕ್ವಾಡ್ ಸಭೆ; ಮೋದಿ
'ಕೆಲವು ವಿಷಯಗಳಲ್ಲಿ ಒಂದು ಮಟ್ಟಿಗೆ ನಾವೆಲ್ಲರೂ ಕಾಳಜಿ ಹೊಂದಿದ್ದೇವೆ ಹಾಗೂ ನ್ಯಾಯಯುತವಾಗಿ ನಡೆದುಕೊಳ್ಳುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ' ಎಂದು ಅಮೆರಿಕವನ್ನು ಉದ್ದೇಶಿಸಿ ಹೇಳಿದ್ದಾರೆ.
ಅಮೆರಿಕ-ಅಫ್ಘನ್ನ ದೋಹಾ ಒಪ್ಪಂದದ ಕುರಿತು ಮಾತನಾಡಿದ ಅವರು, 'ನನ್ನ ಪ್ರಕಾರ ದೋಹಾದಲ್ಲಿ ಏನೇ ಒಪ್ಪಂದವಾಗಿದ್ದರೂ ಅದಕ್ಕೆ ವಿಶಾಲ ಅರ್ಥವಿದೆ. ಅದನ್ನು ಮೀರಿ ನಾವು ಎಲ್ಲರನ್ನೂ ಒಳಗೊಂಡ ಸರ್ಕಾರವನ್ನು ಅಫ್ಘನ್ನಲ್ಲಿ ನೋಡಲು ಸಾಧ್ಯವಿದೆಯೇ? ಮಹಿಳೆಯರ, ಮಕ್ಕಳ, ಅಂಗವಿಕಲರ ಹಕ್ಕುಗಳನ್ನು ಗೌರವದಿಂದ ನೋಡಲು ಸಾಧ್ಯವಿದೆಯೇ?' ಎಂದು ಪ್ರಶ್ನಿಸಿದ್ದಾರೆ.
ದೋಹಾ ಒಪ್ಪಂದದ ವೇಳೆ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ಇದು ಅಮೆರಿಕಕ್ಕೂ ಗೊತ್ತಿದೆ ಎಂದಿದ್ದಾರೆ. ಕಳೆದ ವರ್ಷ ದೋಹಾ ಒಪ್ಪಂದವಾಗಿದ್ದು, ಹಿಂಸಾಚಾರಕ್ಕೆ ಅಂತ್ಯ ಹಾಡಬೇಕು ಎಂಬ ಷರತ್ತನ್ನು ಒಳಗೊಂಡು ಅಫ್ಘಾನ್ನಿಂದ ಅಮೆರಿಕ ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ಒಪ್ಪಿಗೆ ನೀಡಿತ್ತು.
'ಅಫ್ಘಾನಿಸ್ತಾನದಲ್ಲಿ ಏನಾಯಿತೋ, ಏನೇನು ಬೆಳವಣಿಗೆ ನಡೆಯುತ್ತಿದೆಯೋ ಅದು ನಮ್ಮ ದೇಶಗಳ ಮೇಲೂ ಮಹತ್ವದ ಪರಿಣಾಮಗಳನ್ನು ಉಂಟು ಮಾಡಲಿದೆ' ಎಂದು ಹೇಳಿದ್ದಾರೆ.
'ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ನಮ್ಮ, ನಿಮ್ಮ ಅನುಭವಗಳು ಭಿನ್ನವಾಗಿವೆ. ಗಡಿ ಭಯೋತ್ಪಾದನೆಯಲ್ಲಿ ನಾವು ಸಮಸ್ಯೆಗೆ ಒಳಪಟ್ಟಿದ್ದೇವೆ' ಎಂದು ಅಮೆರಿಕವನ್ನುದ್ದೇಶಿಸಿ ಮಾತನಾಡಿದ್ದಾರೆ.
ಅಫ್ಘಾನಿಸ್ತಾನದಿಂದ ಅಮೆರಿಕ ತಮ್ಮ ಸೇನಾ ಪಡೆಗಳನ್ನು ಹಿಂತೆಗೆದುಕೊಂಡ ನಂತರ ಅಫ್ಘನ್ ಆಡಳಿತಕ್ಕೆ ದೊಡ್ಡ ಸವಾಲು ಎದುರಾಗಿದೆ. ಅಲ್ಲಿಂದ ತಾಂತ್ರಿಕ ಹಾಗೂ ಆರ್ಥಿಕ ತಜ್ಞರ ವಲಸೆಯಾಗಿದೆ. ಅಫ್ಘಾನಿಸ್ತಾನದ ಬಿಕ್ಕಟ್ಟನ್ನು ನಿವಾರಿಸಿ ಸ್ಥಿರತೆ ತರುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಸಮುದಾಯಗಳು ಹಾಗೂ ತಾಲಿಬಾನ್ ಪರಸ್ಪರ ವ್ಯವಹಾರ ಮಾರ್ಗವನ್ನು ಕಂಡುಕೊಳ್ಳುವುದು ಅವಶ್ಯಕವಾಗಿದೆ ಎಂದು ಯುಎನ್ ನಿರಾಶ್ರಿತರ ಸಂಸ್ಥೆ ಮುಖ್ಯಸ್ಥ ಫಿಲಿಪ್ಪೊ ಗ್ರ್ಯಾಂಡಿ ಈಚೆಗಷ್ಟೆ ಹೇಳಿದ್ದರು.
ಈ ಬಾರಿ ಕ್ವಾಡ್ ಸಭೆಯಲ್ಲಿ ಕೂಡ ಅಫ್ಘಾನಿಸ್ತಾನ ಬಿಕ್ಕಟ್ಟಿನ ವಿಷಯ ಕೇಂದ್ರಬಿಂದುವಾಗಿತ್ತು. ಕಳೆದ ವಾರ ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ಕುರಿತು ಮಾತುಕತೆ ಆಡಿದ್ದರು.