ಮನೆಮನಸುಗಳನ್ನು ಛಿದ್ರ ಮಾಡಿದ ಭೂಕಂಪದ ಮನಕಲಕುವ ಚಿತ್ರಗಳು
ಬೆಂಗಳೂರು, ಏ. 28 : ಇದನ್ನೇನು ಭೂಮಿಯ ಮೇಲೆ ಮೆರೆದಾಡುತ್ತಿರುವ ಮನುಜನಿಗೆ ಪ್ರಕೃತಿ ಕಲಿಸಿದ ಪಾಠವೆನ್ನುವುದಾ, ತನ್ನಷ್ಟಕ್ಕೆ ತಾನು ಬದುಕುತ್ತಿದ್ದ ಮನುಕುಲದ ಮೇಲೆ ಭೂಮಿಯ ಅಟ್ಟಹಾಸವೆನ್ನುವುದಾ? ಒಟ್ಟಿನಲ್ಲಿ ಭೂಮಿ ಸಣ್ಣಗೆ ಹೊರಳಿಕೊಂಡಿದ್ದಕ್ಕೆ ನೇಪಾಳದಲ್ಲಿ ಮತ್ತು ಭಾರತದ ಉತ್ತರ ಭಾಗದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ.
ಮುರಿದುಬಿದ್ದ ಮನೆಗಳನ್ನು, ಐತಿಹಾಸಿಕ ಸ್ಮಾರಕಗಳನ್ನು, ಗುಡಿಗೋಪುರಗಳನ್ನು ಮತ್ತೆ ಛಲದಿಂದ ಮರುನಿರ್ಮಾಣ ಮಾಡಬಹುದು. ಆದರೆ, ಮಣ್ಣಲ್ಲಿ ಮಣ್ಣಾಗಿ ಹೋದ ಬಂಧುಗಳನ್ನು, ಗೆಳೆಯರನ್ನು ಮರಳಿ ಪಡೆಯಲು ಸಾಧ್ಯವೆ? ಬದುಕಿದವನು ಬಡಜೀವ, ಸತ್ತವನು ಪುಣ್ಯಾತ್ಮ! ಪಾಪ ಪುಣ್ಯಗಳಿಗೆ ಇಲ್ಲಿ ಯಾವ ಲೆಕ್ಕವೂ ನೀಡದಂತೆ ಭೂಮಿ ತನ್ನ ಕೆಲಸ ತಾನು ಮಾಡಿ ಮತ್ತೆ ಗೊರಕೆ ಹೊಡೆಯುತ್ತಿದೆ. ಮತ್ತೆ ಯಾವಾಗ ಏಳುತ್ತದೋ ಬಲ್ಲವರಾರು?
ಅಸಲಿಗೆ ಸತ್ತವರೆಷ್ಟು, ನರಳುತ್ತಿರುವವರೆಷ್ಟು, ತಂದೆತಾಯಿ ಅಕ್ಕತಮ್ಮ ಬಂಧುಬಳಗಗಳನ್ನು ಕಳೆದುಕೊಂಡವರೆಷ್ಟು, ಬಿದ್ದ ಕಟ್ಟಡಗಳೆಷ್ಟು, ಉಳಿದುಕೊಂಡಿರುವ ಇಟ್ಟಿಗೆಗಳೆಷ್ಟು, ಇದೇ ದೇಶಕ್ಕೆ ಆಗಿರುವ ನಷ್ಟವೆಷ್ಟು, ಮತ್ತೆ ಸೆಟೆದು ನಿಲ್ಲಲು ಬೇಕಿರುವ ಕಾಲವೆಷ್ಟು, ಸಹಾಯಹಸ್ತ ಚಾಚುತ್ತಿರುವವರೆಷ್ಟು, ದೇವರಲ್ಲಿ ಮೊರೆಹೋಗಿ ಮೊಂಬತ್ತಿ ಅಂಟಿಸುತ್ತಿರುವವರೆಷ್ಟು... ಲೆಕ್ಕ ಹಾಕಲು ಇದು ಸಮಯವಲ್ಲ. [ಕರ್ನಾಟಕದ ನೆರವಿನ ಸುನಾಮಿ]
ಸಹಸ್ರಾರು ಜನರಿಗೆ ಆಕಾಶವೇ ಸೂರಾಗಿದೆ, ರಸ್ತೆಯೇ ಆಸ್ಪತ್ರೆಯಾಗಿದೆ, ತಾತ್ಕಾಲಿಕ ಟೆಂಟು ಸುಖದ ಅರಮನೆಯಾಗಿದೆ, ಹಸಿದವರಿಗೆ ಸಿಕ್ಕಿದ್ದೇ ಮೃಷ್ಟಾನ್ನ ಭೋಜನವಾಗಿದೆ, ನಾಯಿನರಿಗಳಿಗೆ ಮನುಷ್ಯನ ಅಳಿದುಳಿದ ಅಂಗಾಂಗವೇ ಆಹಾರವಾಗಿದೆ. ಹಿಮಾಲಯದ ಬುಡದಲ್ಲಿರುವವರ ಬದುಕು ಛಿದ್ರಛಿದ್ರವಾಗಿದೆ. ಪ್ರತಿಯೊಂದು ನೋಟವೂ ಮನಕಲಕುವಂತಿದೆ. [ಭೂಕಂಪದ ಚಿತ್ರಸಂಪುಟ]
ಎಲ್ಲಿಗೆ ಪಯಣ ಯಾವುದೋ ದಾರಿ ಏಕಾಂಗಿ ಸಂಚಾರಿ
ಕಠ್ಮಂಡುವಿನ ಆಸ್ಪತ್ರೆಯಲ್ಲಿ ಆತ್ಮೀಯರನ್ನು ಕಳೆದುಕೊಂಡ ಮಾತೆಯರಿಬ್ಬರು ಕಣ್ಣೀರಿಡುತ್ತಿರುವುದು. ಭೂಮಿಯ ಮೇಲಿನ ಋಣ ಅಲ್ಲಿಗೆ ಮುಗಿದಿತ್ತು.
ಒಂದು ದಿನದ ಪಾಪಚ್ಚಿಗೆ ಬಾಟ್ಲಿ ಹಾಲೇ ಆಹಾರ
ಕೇವಲ ಒಂದು ದಿನದ ಹಿಂದೆ ಮಗಳಿಗೆ ಜನುಮ ನೀಡಿದ್ದ ಪ್ರಬೀನಾ ಮೈನಾಲಿ ಬಾಟ್ಲಿ ಹಾಲನ್ನು ತಾತ್ಕಾಲಿಕ ಟೆಂಟ್ ನಲ್ಲಿ ಕುಡಿಸುತ್ತಿರುವುದು.
ಚಹಾ ಕುಡಿಯುತ್ತಿರುವ ಮಗು
ನಿರಾಶ್ರಿತರ ತಾಣ ಮನೆಮಠ ಕಳೆದುಕೊಂಡವರಿಂದ ತುಂಬಿ ಹೋಗಿವೆ. ಅವರಿಗೆಲ್ಲ ಆಹಾರ, ಬಟ್ಟೆ, ಆಶ್ರಯ ಒದಗಿಸುವುದೇ ಸವಾಲಿನ ಕೆಲಸವಾಗಿದೆ. ಅಂಥ ಒಂದು ಆಶ್ರಯತಾಣದಲ್ಲಿ ಏನೂ ಅರಿಯದ ಕಂದಮ್ಮ ಚಹಾ ಕುಡಿಯುತ್ತಿರುವುದು.
ಮಗ, ಸೊಸೆಯನ್ನು ಹುಡುಕಿ ಕೊಡಿ
ಅದೀಗ ತಾನೆ ಮದುವೆಯಾಗಿ ನೇಪಾಳಕ್ಕೆ ಪ್ರವಾಸಕ್ಕೆ ತೆರಳಿದ್ದ ಜಮ್ಮುವಿನ ಪರಕಾಶ್ ಮತ್ತು ಭರತ್ ರ ಫೋಟೋ ಹಿಡಿದು ರೋದಿಸುತ್ತಿರುವ ಅಮ್ಮ.
ಜೀವದ ಗೆಳೆಯರನ್ನು ಕಳೆದುಕೊಂಡ ಮಹಿಳೆ
ಬದುಕಿಗೆ ಆಧಾರವಾಗಿದ್ದ ಗಂಡನನ್ನು ಕಳೆದುಕೊಂಡಿರುವ ಮಹಿಳೆಯೊಬ್ಬರು ಪಶ್ಚಿಮ ಬಂಗಾಳದ ಜಯಪೈಗುರಿಯಲ್ಲಿ ಕಂಬನಿ ಮಿಡಿಯುತ್ತಿದ್ದಾರೆ.
ಅಳಿದುಹೋಗಿದ್ದರಲ್ಲಿ ಉಳಿದದ್ದನ್ನು ಹುಡುಕುತ್ತಿರುವುದು
ಅಳಿದುಹೋಗಿದ್ದರಲ್ಲಿ ಉಳಿದದ್ದನ್ನು ಹುಡುಕುತ್ತಿರುವ ನೇಪಾಳದ ನಿವಾಸಿಗಳು.
ಮುಂದಿನ ಜೀವನ ಹೇಗೋ ಏನೋ
ಲಕ್ಷಾಂತರ ಜನರು ಮನೆಮಠ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಮುಂದೆ ಹೇಗೋ ಏನೋ ಎಂಬ ಚಿಂತೆ ಅವರನ್ನು ಕಾಡುತ್ತಿದ್ದರಲ್ಲಿ ಅಚ್ಚರಿಯೇ ಇಲ್ಲ.
ಭವಿಷ್ಯ ಅಸ್ಪಷ್ಟ
ಭೂಕಂಪದಲ್ಲಿ ಸತ್ತು ಸ್ವರ್ಗ ಸೇರಿದವರು ನಿಜಕ್ಕೂ ಅದೃಷ್ಟವಂತರು, ಗಾಯಾಳುಗಳಾಗಿ ಎಲ್ಲವನ್ನು ಕಳೆದುಕೊಂಡು ಭೂಮಿಯ ಮೇಲೆ ಉಳಿದವರದು ನಿಜಕ್ಕೂ ನರಕಯಾತನೆ.
ನಿಮ್ಮ ಜೊತೆ ನಾವಿದ್ದೇವೆ ಹೆದರಬೇಡಿ
ನಿಮ್ಮ ಕಷ್ಟಕ್ಕೆ, ನಷ್ಟಕ್ಕೆ, ನೋವಿಗೆ, ನಲಿವಿಗೆ ಸ್ಪಂದಿಸಲು ನಾವಿದ್ದೇವೆ ಎಂದು ಭೂಕಂಪ ಸಂತ್ರಸ್ತರ ಪರವಾಗಿ ನಿಂತಿರುವ ರಾಂಚಿ ಶಾಲೆಯ ವಿದ್ಯಾರ್ಥಿಗಳು.
ಇದ್ದರೂ ಬಿದ್ದರೂ ಒಂದು ಸೆಲ್ಫಿ
ಹತ್ತೊಂಬತ್ತನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಭೀಮಸೇನ ಟವರ್ ಇತಿಹಾಸದ ಪುಟಗಳನ್ನು ಸೇರಿಕೊಂಡಿದೆ. ಅದರ ಮುಂದೆ ನಿಂತ ಪ್ರವಾಸಿಯೊಬ್ಬ ಸೆಲ್ಫಿ(ಸ್ವಂತಿಕೆ) ಕ್ಲಿಕ್ಕಿಸಿಕೊಳ್ಳುತ್ತಿರುವುದು.
ಮಕ್ಕಳ ಮೊರೆ ಪಶುಪತಿನಾಥನಿಗೆ ಕೇಳಲಿ
ಧೂಳಿಪಟವಾಗಿರುವ ನೇಪಾಳ ಮತ್ತೊಮ್ಮೆ ತನ್ನ ಸುಂದರ ಸ್ವರೂಪ ಪಡೆಯಲಿ, ಸತ್ತವರಿಗೆ ಶಾಂತಿ ದೊರಕಲಿ, ಸಂತ್ರಸ್ತರಿಗೆ ನೆಮ್ಮದಿ ಸಿಗಲಿ ಎಂದು ಕ್ಯಾಂಡಲ್ ಅಂಟಿಸುತ್ತಿರುವ ಜಮ್ಮುವಿನ ವಿದ್ಯಾರ್ಥಿನಿಯರು.
ಬದುಕಿದೆಯಾ ಬಡಜೀವವೆ!
ನೇಪಾಳದ ಭೂಕಂಪವನ್ನು ಕಣ್ಣಾರೆ ಕಂಡು ಜೀವಸಹಿತ ಪಾರಾಗಿ ಬಂದಿರುವ ಪಾಟ್ನಾದ ಮಹಿಳೆಯೊಬ್ಬಳ ಮೊಗದಲ್ಲಿ ಜೀವಭಯ ಎದ್ದು ಕಾಣುತ್ತಿದೆ.