'ಉಗ್ರರ ಅಸ್ತಿತ್ವ ಎಂದಿಗೂ ಶಾಶ್ವತವಲ್ಲ': ತಾಲಿಬಾನ್ ಬಗ್ಗೆ ನರೇಂದ್ರ ಮೋದಿ
ನವದೆಹಲಿ, ಆಗಸ್ಟ್ 20: "ಉಗ್ರರ ಆಡಳಿತವು ಕೆಲ ಕಾಲ ಪ್ರಾಬಲ್ಯವನ್ನು ಹೊಂದಿರಬಹುದು. ಆದರೆ ಉಗ್ರರ ಅಸ್ತಿತ್ವವು ಎಂದಿಗೂ ಶಾಶ್ವತವಲ್ಲ," ಎಂದು ಶುಕ್ರವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಯುಎಸ್ ತನ್ನ ಸೇನೆಯನ್ನು ಹಿಂಪಡೆಯುತ್ತಿದ್ದಂತೆ ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಈ ಹೇಳಿಕೆಯನ್ನು ನೀಡಿದ್ದಾರೆ.
"ನಾಶ ಪಡಿಸುವ ಶಕ್ತಿಗಳು, ಭಯೋತ್ಪಾದನೆಯ ಆಲೋಚನೆಯಿಂದ ಸಾಮ್ರಾಜ್ಯವನ್ನು ಕಟ್ಟಲು ಮುಂದಾಗುವ ಯೋಚನೆಗಳು, ಕೆಲ ಕಾಲದ ಸಮಯ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಬಹುದು. ಆದರೆ ಈ ಅಸ್ತಿತ್ವ ಎಂದಿಗೂ ಶಾಶ್ವತವಲ್ಲ. ಇದು ಮಾನವೀಯತೆಯನ್ನು ಅದುಮಿಡಲು ಸಾಧ್ಯವಾಗದು," ಎಂದು ಪ್ರಧಾನಿ ಮೋದಿ ಹೇಳಿರುವುದಾಗಿ ಪ್ರಧಾನ ಮಂತ್ರಿ ಕಚೇರಿ ಟ್ವೀಟ್ ಮಾಡಿದೆ.
ಅಫ್ಘಾನಿಸ್ತಾನದಿಂದ ಬರಲು ಇಚ್ಛಿಸುವ ಹಿಂದೂಗಳಿಗೆ ಆಶ್ರಯ: ಪ್ರಧಾನಿ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಗುಜರಾತ್ನ ಪ್ರಸಿದ್ದ ಸೋಮನಾಥ್ ಮಂದಿರದ ವಿವಿಧ ಯೋಜನೆಗಳಿಗೆ ವರ್ಚುವಲ್ ವ್ಯವಸ್ಥೆ ಮೂಲಕ ಚಾಲನೆ ನೀಡಿ ಮಾತನಾಡಿದರು, "ಸೋಮನಾಥ್ ದೇವಾಲಯವನ್ನು ಹಲವು ಬಾರಿ ನಾಶ ಮಾಡಲಾಯಿತು. ಇಲ್ಲಿನ ಮೂರ್ತಿಗಳನ್ನು ವಿರೂಪಗೊಳಿಸಲಾಗಿದೆ. ಸೋಮನಾಥ್ ದೇವಾಲಯವನ್ನು ಸಂಪೂರ್ಣವಾಗಿ ನಾಶ ಮಾಡಲು ಎಲ್ಲಾ ಪ್ರಯತ್ನಗಳು ನಡೆದಿದೆ. ಆದರೆ ದೇವಾಲಯವು ಈಗ ಮತ್ತೆ ತನ್ನ ವೈಭವನ್ನು ಹೆಚ್ಚಿಸಿದೆ. ಇದು ನಮಗೆ ಆತ್ಮ ವಿಶ್ವಾಸವನ್ನು ಮೂಡಿಸಿದೆ," ಎಂದು ಹೇಳಿದರು.
ಹಾಗೆಯೇ ಈ ಸಂದರ್ಭದಲ್ಲಿ ''ವಿನಾಶಕಾರಿ ಹಾಗೂ ಭಯೋತ್ಪಾದನೆ ಪಡೆಗಳು ಕೆಲ ಕಾಲ ಮಾತ್ರ ತನ್ನ ಪ್ರಾಬಲ್ಯವನ್ನು ಸಾಧಿಸಬಹುದು. ಆದರೆ ಈ ಪಡೆಗಳು ಶಾಶ್ವತವಲ್ಲ,'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇನ್ನು ಪ್ರವಾಸೋದ್ಯಮದ ಬಗ್ಗೆ ಈ ಸಂದರ್ಭದಲ್ಲೇ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ಪ್ರವಾಸೋದ್ಯಮದ ಸ್ಪರ್ಧಾತ್ಪಕ ಸೂಚ್ಯಂಕದಲ್ಲಿ ಭಾರತ 2013 ರಲ್ಲಿ 65 ನೇ ಸ್ಥಾನದಲ್ಲಿತ್ತು. ಆದರೆ 2019 ರಲ್ಲಿ 34 ನೇ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಭಾರತಕ್ಕೆ ಬರಲು ಇಚ್ಛಿಸುವ ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಸಿಖ್ ಹಾಗೂ ಹಿಂದೂಗಳಿಗೆ ಆಶ್ರಯ ನೀಡಲು ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ. ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ ಅಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ. ತಾವು ಹುಟ್ಟಿ ಬೆಳೆದ ನಾಡದರೂ ದೇಶವನ್ನು ತೊರೆದು ಬೇರೆಯೇ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ತುರ್ತು ಸಭೆ ನಡೆಸಿದ್ದರು. ಬಳಿಕ ಅಫ್ಘಾನಿಸ್ತಾನದಿಂದ ಬರಲು ಇಚ್ಛಿಸುವ ಎಲ್ಲಾ ಅಲ್ಪಸಂಖ್ಯಾತ ಸಿಖ್ ಹಾಗೂ ಹಿಂದೂಗಳಿಗೆ ಆಶ್ರಯ ನೀಡಲು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
जो तोड़ने वाली शक्तियाँ हैं, जो आतंक के बलबूते साम्राज्य खड़ा करने वाली सोच है, वो किसी कालखंड में कुछ समय के लिए भले हावी हो जाएं लेकिन, उसका अस्तित्व कभी स्थायी नहीं होता, वो ज्यादा दिनों तक मानवता को दबाकर नहीं रख सकती: PM @narendramodi
— PMO India (@PMOIndia) August 20, 2021
ಅಫ್ಘಾನ್ ರಾಜಧಾನಿ ಕಾಬೂಲ್ ಅನ್ನು ತಾಲಿಬಾನ್ ವಶಕ್ಕೆ ಪಡೆದ ಹಿನ್ನೆಲೆ ಪರಿಸ್ಥಿತಿಯನ್ನು ಅವಲೋಕಿಸಿ, ಅಫ್ಘಾನಿಸ್ತಾನದಲ್ಲಿನ ಭಾರತೀಯ ರಾಯಭಾರಿ ಮತ್ತು 120 ಸಿಬ್ಬಂದಿಯನ್ನು ಕಾಬೂಲ್ನಿಂದ ಮಂಗಳವಾರ ಭಾರತಕ್ಕೆ ವಾಪಸ್ ಕರೆತರಲಾಗಿದೆ. ತುರ್ತು ಸ್ಥಳಾಂತರಿಸುವಿಕೆಯ ಭಾಗವಾಗಿ ಐಎಎಫ್ನ ಸಿ -17 ಹೆವಿ-ಲಿಫ್ಟ್ ವಿಮಾನದಿಂದ ಜನರನ್ನು ಸ್ವದೇಶಕ್ಕೆ ಕರೆತರಲಾಗುತ್ತಿದೆ ಎಂದು ಈ ಅಭಿವೃದ್ದಿಯ ಬಗ್ಗೆ ಮಾಹಿತಿ ತಿಳಿದಿರುವ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದರು. ಭಾರತೀಯ ವಾಯುಪಡೆಯ ಸಿ -17 ಹೆವಿ-ಲಿಫ್ಟ್ ವಿಮಾನವು ಎರಡನೇ ತಂಡದ ರಾಜತಾಂತ್ರಿಕರು, ಅಧಿಕಾರಿಗಳು ಮತ್ತು ಪತ್ರಕರ್ತರನ್ನು ಕಾಬೂಲ್ ನಿಂದ ಹೊತ್ತುಕೊಂಡು ಗುಜರಾತ್ ನ ಜಾಮ್ ನಗರಕ್ಕೆ ಬಂದಿಳಿದಿತ್ತು. ಅಫ್ಘಾನಿಸ್ತಾನದಲ್ಲಿನ ಭಾರತೀಯ ರಾಯಭಾರಿ ರುದ್ರೇಂದ್ರ ಟಂಡನ್ 120 ಇತರ ರಾಜತಾಂತ್ರಿಕರು ಮತ್ತು ಅಧಿಕಾರಿಗಳೊಂದಿಗೆ ವಿಮಾನದಲ್ಲಿದ್ದರು. ಇದಕ್ಕೂ ಮುನ್ನ ಭಾರತೀಯ ವಾಯುಪಡೆಯ (ಐಎಎಫ್) ಸಿ -17 ಹೆವಿ-ಲಿಫ್ಟ್ ಸಾರಿಗೆ ವಿಮಾನವು ಸೋಮವಾರ ಅಫ್ಘಾನಿಸ್ತಾನದಿಂದ ಕೆಲವು ಸಿಬ್ಬಂದಿಯನ್ನು ಮರಳಿ ಕರೆತಂದಿತು
Recommended Video
(ಒನ್ ಇಂಡಿಯಾ)