ರಾಮನಾಮ ಜಪಿಸುವ ನಮ್ಮ ಪ್ರಧಾನಿ, ಅಯೋಧ್ಯೆ ಕಡೆ ತಲೆಹಾಕಲೇ ಇಲ್ಲ!
ಶ್ರೀರಾಮ, ಅಯೋಧ್ಯೆ, ರಾಮಮಂದಿರ ಮತ್ತು ಬಿಜೆಪಿಯ ನಡುವೆ ಅವಿನಾವಭಾವ ಸಂಬಂಧ. ಅದಕ್ಕೆ ಕಾರಣ ಇಲ್ಲದಿಲ್ಲ. ಎಲ್ಲೋ ಇದ್ದ ಬಿಜೆಪಿಯನ್ನು ಈ ವಿಚಾರ, ಇಂದು ಸತತವಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿ ತಂದು ಕೂರಿಸಿದೆ ಅಂದರೆ ಅದಕ್ಕೆ ಶ್ರೀರಾಮನೂ ಕಾರಣ.
ಎರಡು ಸೀಟಿನಿಂದ 83ಸ್ಥಾನಕ್ಕೆ ಬಿಜೆಪಿ ಜಿಗಿದದ್ದು ಅಡ್ವಾಣಿಯವರ ರಾಮ ರಥಯಾತ್ರೆಯಿಂದ. ಅಲ್ಲಿಂದ ಹಿಂದಿರುಗಿ ನೋಡದ ಬಿಜೆಪಿ, ಈಗ ರಾಷ್ಟ್ರೀಯ ಪಕ್ಷವಾಗಿ ದೇಶದ ಚುಕ್ಕಾಣಿ ಹಿಡಿದಿದೆ.
2019ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯ ಪ್ರಣಾಳಿಕೆಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭರವಸೆಯಿತ್ತು. ಸರ್ವೋಚ್ಚ ನ್ಯಾಯಾಲಯವೀಗ, ಈ ವಿಚಾರಕ್ಕೆ ಸಂಬಂಧಿಸಿದಂತೆ, ವಿಚಾರಣೆಯನ್ನು ಮುಕ್ತಾಯಗೊಳಿಸಿ, ತೀರ್ಪನ್ನು ಕಾಯ್ಡಿರಿಸಿದೆ.
ಅಯೋಧ್ಯಾ ಪ್ರಕರಣ Timeline : 1528 ರಿಂದ 2019ರ ತನಕ ಕಾಲಾನುಕ್ರಮದಲ್ಲಿ
ವಿಶ್ವದ ಜನಪ್ರಿಯ ನಾಯಕರಲ್ಲಿ ಒಬ್ಬರಾದ ಮತ್ತು ಹಾಲೀ ಪ್ರಧಾನಿ ಮೋದಿ, ಚುನಾವಣೆಗೆ ಮುನ್ನ ಮತ್ತು ನಂತರ, ಅದೆಷ್ಟು ಬಾರಿ ಅಯೋಧ್ಯೆಯ ರಾಮಲಲ್ಲ ಮಂದಿರ ಮತ್ತು ವಿವಾದಿತ ಸ್ಥಳಕ್ಕೆ ಭೇಟಿ ನೀಡಿದ್ದಾರೆ? ಮುಂದುವರಿಯುತ್ತಾ..
ಮೋದಿ, ಒಮ್ಮೆಯೂ ಅಯೋಧ್ಯೆಗೆ ಭೇಟಿ ಕೊಡಲಿಲ್ಲ
ನರೇಂದ್ರ ಮೋದಿ ಪ್ರಧಾನಿಯಾಗುವ ಮುನ್ನ ಮತ್ತು ನಂತರ ಕೂಡಾ ಒಮ್ಮೆಯೂ ಅಯೋಧ್ಯೆಗೆ ಭೇಟಿ ಕೊಡಲಿಲ್ಲ. ಇದರ ವಿಚಾರಣೆ ಈಗ, ಸುಪ್ರೀಂಕೋರ್ಟ್ ನಲ್ಲಿ ಇರುವುದರಿಂದ, ಅಂತಿಮ ತೀರ್ಪು ಬಂದ ನಂತರ, ಮೋದಿ ರಾಮಲಲ್ಲಾಗೆ ಭೇಟಿ ನೀಡಿ ಪೂಜೆ ಸಲ್ಲಿಸಬಹುದೇನೋ?. ಜೊತೆಗೆ, ಸುಪ್ರೀಂ ತೀರ್ಪು ಹಿಂದೂಗಳ ಪರವಾಗಿ ಬಂದರೆ, ದೇವಾಲಯದ ಶಿಲಾನ್ಯಾಸಕ್ಕೆ ಮೋದಿ ಹೋಗಬಹುದು. ಅದು ಒಂದು ಕಡೆ...
ಲೋಕಸಭಾ ಚುನಾವಣೆಯ ಪ್ರಚಾರ
ಕಳೆದ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ, ಅಯೋಧ್ಯೆಯ ವಿವಾದಿತ ಸ್ಥಳದ ಕೇವಲ 25 ಕಿ.ಮೀ ದೂರದಲ್ಲಿ (ಅಂಬೇಡ್ಕರ್ ನಗರ - ಅಯೋಧ್ಯ ಗಡಿ) ಮೋದಿ ಸಾರ್ವಜನಿಕ ಸಭೆ ನಡೆಸಿದ್ದರು. ಸಭೆಯಲ್ಲಿ ರಾಮಮಂದಿರದ ಬಗ್ಗೆ ಮೋದಿ ಮಾತನಾಡಿದರೂ, ರಾಮಲಲ್ಲಾಗೆ ಭೇಟಿ ನೀಡಿರಲಿಲ್ಲ.
25 ವರ್ಷಗಳ ಬಾಬ್ರಿ ಮಸೀದಿ ವಿವಾದ, ಟೈಮ್ ಲೈನ್
ರಾಮ ಮಂದಿರದ ಬಗ್ಗೆ ಸೊಲ್ಲೆತ್ತಿರಲಿಲ್ಲ
ಇನ್ನು, 2014ರ ಲೋಕಸಭಾ ಚುನಾವಣೆಯ ವೇಳೆಯೂ, ಫೈಸಾಬಾದ್ (ಅಯೋಧ್ಯೆ ವ್ಯಾಪ್ತಿಯ ಲೋಕಸಭಾ ಕ್ಷೇತ್ರ) ಸಭೆಯಲ್ಲಿ ಮೋದಿ ಭಾಗವಹಿಸಿದ್ದರು. ಆ ವೇಳೆ, ರಾಮರಾಜ್ಯದ ಬಗ್ಗೆ ಮಾತನಾಡಿದ್ದ ಮೋದಿ, ರಾಮ ಮಂದಿರದ ಬಗ್ಗೆ ಸೊಲ್ಲೆತ್ತಿರಲಿಲ್ಲ. ಆ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ (ಲಲ್ಲೂ ಸಿಂಗ್) ಜಯಭೇರಿ ಬಾರಿಸಿದ್ದರು.
ಅಡ್ವಾಣಿ, ಜೋಷಿ, ಉಮಾಭಾರತಿ
ಇದಕ್ಕೂ ಮುನ್ನ, ಅಂದರೆ, ಮೋದಿ ಗುಜರಾತ್ ಮುಖ್ಯಮಂತಿಯಾಗಿದ್ದಾಗಲೂ, ಅಯೋಧ್ಯೆ ವ್ಯಾಪ್ತಿಯ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಂದಿದ್ದರೂ, ವಿವಾದಿತ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಆದರೆ, ಆ ಚುನಾವಣೆಯಲ್ಲಿ ಬಿಜೆಪಿ ಇಲ್ಲಿಂದ ಸೋಲುಂಡಿತ್ತು. ಅಯೋಧ್ಯೆ ಚಳುವಳಿಯ ವಿಚಾರದಲ್ಲಿ ಮಂಚೂಣಿಯಲ್ಲಿ ಬರುವ ಹೆಸರುಗಳೆಂದರೆ, ಅಡ್ವಾಣಿ, ಜೋಷಿ, ಉಮಾಭಾರತಿ, ಕಲ್ಯಾಣ್ ಸಿಂಗ್, ಕತಿಯಾರ್ ಮುಂತಾದ ನಾಯಕರು. ಈ ಚಳುವಳಿಯಲ್ಲಿ ಮೋದಿ ಅಷ್ಟಾಗಿ ತಮ್ಮನ್ನು ತೊಡಗಿಸಿಕೊಂಡಿರಲಿಲ್ಲ ಎನ್ನುವುದು ವಾಸ್ತವತೆ.
ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪಿನ ಹಂತಕ್ಕೆ
ಅಭಿವೃದ್ದಿಯ ಜೊತೆಗೆ, ಹಿಂದುತ್ವದ ಹೆಸರನ್ನೂ ಹೇಳಿಕೊಂಡು ಬಂದು ರಾಜಕೀಯ ಮಾಡಿಕೊಂಡು ಬಂದಿರುವ ಮೋದಿ, ಅಯೋಧ್ಯೆ ವಿಚಾರವನ್ನು ಅಷ್ಟಾಗಿ ಬಳಸಿಕೊಂಡಿಲ್ಲ ಎನ್ನುವುದು ಕೂಡಾ ಅಷ್ಟೇ ಸತ್ಯ. ಸದ್ಯ, ಅತ್ಯಂತ ಸೂಕ್ಷ್ಮ ವಿಚಾರ ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪಿನ ಹಂತಕ್ಕೆ ಬಂದು ನಿಂತಿರುವುದರಿಂದ, ಪ್ರಧಾನಿ ಮೋದಿ, ಅಳೆದುತೂಗಿ, ಜಾಗರೂಕತೆಯಿಂದ ಹೆಜ್ಜೆಯನ್ನು ಇಡಬೇಕಿದೆ.