ಡೇರಾ ಸಚ್ಚಾ ಸೌಧ ವಕ್ತಾರ ಪವನ್ ಇನ್ಸಾನ್ ಬಂಧನ
ಚಂಡೀಗಢ, ನವೆಂಬರ್ 21 : ಸ್ವಯಂಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಂ ಅವರ ಬಂಧನದ ವೇಳೆ ಪಂಚಕುಲದಲ್ಲಿ ಗಲಭೆ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡೇರಾ ಸಚ್ಚಾ ಸೌಧದ ವಕ್ತಾರ ಪವನ್ ಇನ್ಸಾನ್ ಅವರನ್ನು ಸೋಮವಾರ (ನ.20)ರಂದು ಹರಿಯಾಣ ಪೊಲೀಸರು ಬಂಧಿಸಿದ್ದಾರೆ.
ಜೈಲಿನಲ್ಲೂ ರಾಮ್ ರಹೀಮ್ ಐಷಾರಾಮಿ ಬದುಕು ನಡೆಸುತ್ತಿದ್ದಾನಾ!?
ಪವನ್ ಇನ್ಸಾನ್ ನನ್ನು ಪಂಚಾಬ್ ರಾಜ್ಯದ ಲಲ್ಲೂ ಎನ್ನುವ ಪ್ರದೇಶದಲ್ಲಿ ಬಂಧನಕ್ಕೊಳಪಡಿಸಲಾಗಿದೆ, ಕಳೆದ ಎರೆಡು ತಿಂಗಳಿನಿಂದ ಪವನ್ ಇನ್ಸಾನ್ ನಾಪತ್ತೆಯಾಗಿದ್ದ ಎಂದ ಪಂಚಕುಲದ ಉಪ ಪೊಲೀಸ್ ಆಯುಕ್ತ ಮನ್ಬೀರ್ ಸಿಂಗ್ ಅವರು ಹೇಳಿದ್ದಾರೆ.
ಚಂಡೀಘಡದಿಂದ 30 ಕಿ.ಮೀ ದೂರದಲ್ಲಿರುವ ಪ್ರದೇಶದಲ್ಲಿ ಹರಿಯಾಣ ರಾಜ್ಯದ ವಿಶೇಷ ಪೊಲೀಸ್ ತನಿಖಾ ತಂಡ ಬಂಧಿಸಿದೆ. ಬಂಧನಕ್ಕೊಳಗಾಗಿರುವ ಪವನ್ ಇನ್ಸಾನ್, ಗುರ್ಮಿತ್ ರಾಮ್ ರಹೀಂದನ ಮಾಜಿ ಮಾಧ್ಯಮ ವಕ್ತಾರನಾಗಿದ್ದ, ಗುರ್ಮೀತ್ ಮತ್ತೊಬ್ಬ ಬಂಟ ಆದಿತ್ಯ ಇನ್ಸಾನ್ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಹನಿಪ್ರೀತ್ ಗೆ 6 ದಿನ ಪೊಲೀಸ್ ಕಸ್ಟಡಿ: ಪಂಚಕುಲ ನ್ಯಾಯಾಲಯ ಆದೇಶ
ಏನದು ಪ್ರಕರಣ: ಚಂಡೀಗಢದಿಂದ ಸುಮಾರು 260 ಕಿಲೋಮೀಟರ್ ದೂರದಲ್ಲಿರುವ ಸಿರ್ಸಾದ ಡೇರಾದಲ್ಲಿ ಗುರ್ಮಿತ್ ರಾಮ್ ರಹೀಂ ಸಿಂಗ್ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಇದಾಗಿದೆ. ಈ ಸಂಬಂಧ ಸಿಬಿಐ 2002ರಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು. 2008ರ ಸುಮಾರಿಗೆ ಇದರ ವಿಚಾರಣೆ ಆರಂಭವಾಗಿತ್ತು. ತೀರ್ಪು ಪ್ರಕಟವಾಗಿದ್ದು ರಾಮ್ ರಹೀಮ್ ಸಿಂಗ್ ದೋಷಿ ಎಂದು ನ್ಯಾಯಾಲಯ ಈಗಾಗಲೇ ತೀರ್ಪು ನೀಡಿದೆ.