ರಾಜಸ್ಥಾನದಲ್ಲಿ ಬಿಜೆಪಿಗೆ ಬಹುದೊಡ್ಡ ತಲೆನೋವಾಗಲಿರುವ ರಾಮ್ ರಹೀಮ್!
ಜೈಪುರ, ಅಕ್ಟೋಬರ್ 26: ರಾಜಸ್ಥಾನದಲ್ಲಿ ಈ ಡಿಸೆಂಬರ್ ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಡೇರಾ ಸಚ್ಚಾ ಸೌದ ಬಹುದೊಡ್ಡ ಪಾತ್ರ ವಹಿಸಲಿದೆಯಾ?
ಅತ್ಯಾಚಾರದ ಆರೋಪದಲ್ಲಿ ದೋಷಿಯಾಗಿ ಜೈಲುಪಾಲಾಗಿರುವ ಡೇರಾ ಮುಖ್ಯಸ್ಥ ರಾಮ್ ರಹೀಮ್ ಜೈಲಿನಲ್ಲಿದ್ದುಕೊಂಡೇ ಬಿಜೆಪಿಯನ್ನು ಆಟ ಆಡಿಸುತ್ತಾರಾ? ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೆಲವು ಬೆಳವಣಿಗೆಗಳು ಈ ಎಲ್ಲಾ ಅನುಮಾನಗಳಿಗೆ ಪುಷ್ಠಿ ನೀಡಿವೆ.
ಹಿರಿಯ ನಾಯಕರ ಕೈಯಲ್ಲಿ ಅಭ್ಯರ್ಥಿಗಳ ಪಟ್ಟಿ, ರಾಹುಲ್ ಗೆ ತಲೆನೋವು?!
ಹರ್ಯಾಣ ಮಾತ್ರವಲ್ಲದೆ, ರಾಜಸ್ಥಾನದಲ್ಲೂ ಡೇರಾ ಸಚ್ಚಾ ಸೌದವು ಸಾಕಷ್ಟು ಬೆಂಬಲಿಗರನ್ನು ಹೊಂದಿದೆ. ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಕಟ್ಟಿದ ಪಂಥವೇ ಡೇರಾ ಸಚ್ಚಾ ಸೌದ. ಇದು ರಾಜಸ್ಥಾನದಲ್ಲಿ ಸಾಕಷ್ಟು ಖ್ಯಾತಿ ಪಡೆದಿದ್ದು, ಬಿಜೆಪಿಗೆ ತಲೆನೋವಾಗುವುದು ಖಂಡಿತ ಎನ್ನಿಸಿದೆ
ಬಿಜೆಪಿ ವಿರುದ್ಧ ತಿರುಗಿಬಿದ್ದ ಡೇರಾ
ಹರ್ಯಾಣ ಮಾತ್ರವಲ್ಲದೆ ರಾಜಸ್ಥಾನದಲ್ಲೂ ಸಾಕಷ್ಟು ಜನ ಡೇರಾ ಅನುಯಾಯಿಗಳಿದ್ದಾರೆ. ಗುರ್ಮೀತ್ ರಾಮ್ ರಹೀಮ್ ಸಿಂಗ್ ನನ್ನು ಅತ್ಯಾಚಾರದ ಆರೋಪದಲ್ಲಿ ದೋಷಿ ಎಂದು ಪರಿಗಣಿಸಿ ಬಂಧಿಸುವ ಸಂದರ್ಭದಲ್ಲಿ ಹರ್ಯಾಣ ಮತ್ತು ರಾಜಸ್ಥಾನ ಎರಡೂ ಕಡೆ ಇದ್ದಿದ್ದು ಬಿಜೆಪಿ ಸರ್ಕಾರ. ಆದ್ದರಿಂದ ಬಿಜೆಪಿ ಸರ್ಕಾರ ತಮ್ಮ ನಾಯಕನನ್ನು ಜೈಲುಶಿಕ್ಷೆಯಿಂದ ಪಾರುಮಾಡಲು ಯಾವುದೇ ರೀತಿಯಲ್ಲೂ ನೆರವಾಗಿಲ್ಲ ಎಂಬ ಬೇಸರ ಡೇರಾ ಅನುಯಾಯಿಗಳಲ್ಲಿದೆ. ಇದರಿಂದಾಗಿ ಅವರು ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ದಾರೆ.
35 ಕ್ಷೇತ್ರಗಳಲ್ಲಿ ಡೇರಾ ಪ್ರಾಬಲ್ಯ
ಡೇರಾ ಸಚ್ಚಾ ಸೌದ ಅನುಯಾಯಿಗಳಲ್ಲಿ ಬಹುತೇಕ ಜನ ಕಳೆದ ಚುನಾಚಣೆಯವರೆಗೂ ಬಿಜೆಪಿಯ ಮತದಾರರಾಗಿದ್ದವರು. ಸುಮಾರು 35 ಕ್ಷೇತ್ರಗಳಲ್ಲಿ ತನ್ನ ಪ್ರಾಬಲ್ಯ ಹೊಂದಿರುವ ಡೇರಾವನ್ನು ಬಿಜೆಪಿ ಕಡೆಗಣಿಸಿದರೆ ನಷ್ಟ ಬಿಜೆಪಿಗೇ. ಹಾಗಂತ ಅತ್ಯಾಚಾರದ ಆರೋಪದ ಮೇಲೆ ಜೈಲು ಸೇರಿರುವ ರಾಮ್ ರಹೀಮ್ ನ ಅನುಯಾಯಿಗಳನ್ನು ಓಲೈಸುವ ಕೆಲಸ ಮಾಡುವುದೂ ಬಿಜೆಪಿಯ ವರ್ಚಸ್ಸಿಗೆ ಧಕ್ಕೆಯನ್ನುಂಟುಮಾಡಬಹುದು.
ರಾಜಸ್ಥಾನದಲ್ಲಿ ಬಿಜೆಪಿಗೆ ಶಾಪವಾಗಲಿದೆ ಬಂಡಾಯದ ಬಿಸಿ!
ಸತ್ಸಂಗದ ನೆಪದಲ್ಲಿ ಜನರನ್ನು ಒಟ್ಟುಗೂಡಿಸುತ್ತಿರುವ ಡೇರಾ!
ಸದ್ಯಕ್ಕೆ ಸತ್ಸಂಗದ ನೆಪದಲ್ಲಿ ಜನರನ್ನು ಒಂದೆಡೆ ಸೇರಿಸಿ ಬಿಜೆಪಿ ವಿರುದ್ಧ ಪ್ರಚಾರ ನಡೆಸುತ್ತಿದ್ದಾರೆ ಡೇರಾ ಅನುಯಾಯಿಗಳು. ಸುಮಾರು ಎಂಟು ಜನರನ್ನು ಹೊಂದಿರುವ ರಾಜಕೀಯ ಸಂಘಟನೆಯೊಂದನ್ನು ಡೇರಾ ನಾಯಕರು ಹುಟ್ಟುಹಾಕಿಕೊಂಡಿದ್ದು, ಈ ಮೂಲಕ ರಾಜಕೀಯ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಆದರೆ ಯಾವುದೇ ನಿರ್ದಿಷ್ಟ ಪಕ್ಷಕ್ಕೂ ತಾವು ಬೆಮಬಲ ನೀಡುವುದಿಲ್ಲ ಎಂದೂ ಸ್ಪಷ್ಟಪಡಿಸಿರುವುದು ಬಿಜೆಪಿಗೆ ಕೊಂಚ ಮಟ್ಟಿಗೆ ನಿರಾಳತೆಯನ್ನು ಒದಗಿಸಿದೆ. ಹಾಗಾದರೆ ಡೇರಾ ತನ್ನದೇ ಪಕ್ಷದೊಂದಿಗೆ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತದಾ ಎಂಬುದನ್ನು ಕಾದು ನೋಡಬೇಕು!
ರಾಜಸ್ಥಾನ ಸಿಎಂ ಸಮೀಕ್ಷೆ : ವಸುಂಧರಾಗಿಂತ ಸಚಿನ್ ಪೈಲಟ್ ಮುಂದೆ
ರಾಜಸ್ಥಾನದಲ್ಲಿದೆ ರಾಮ್ ರಹೀಮ್ ಜನ್ಮಸ್ಥಳ!
ಡೇರಾ ಸಂಸ್ಥಾಪಕ ರಾಮ್ ರಹೀಮ್ ಹುಟ್ಟಿದ್ದು ರಾಜಸ್ಥಾನದ ಗಂಗಾನಗರದ ಗುರುಸಾರ್ ಮೋದಿಯಾ ಎಂಬ ಹಳ್ಳಿಯಲ್ಲಿ. ಸ್ವಯಂಘೋಷಿತ ದೇವಮಾನವನಾಗಿ ಬೆಳೆದ ರಾಮ್ ರಹೀಮ್, ಹರ್ಯಾಣದಲ್ಲಿ ಡೇರಾ ಎಂಬ ಸಾಮ್ರಾಜ್ಯ ಕಟ್ಟಿಕೊಂಡು, ಸಹಸ್ರಾರು ಅನುಯಾಯಿಗಳನ್ನು ಪಡೆದರು. ನಂತರ ತನ್ನದೇ ಎರಡು ಭಕ್ತೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ದೋಷಿ ಎಂದು ಪರಿಗಣಿಸಿ, ಇಪ್ಪತ್ತು ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿದ್ದಾರೆ. 2017 ರ ಆಗಸ್ಟ್ 25 ರಂದು ಸಿಬಿಐ ವಿಶೇಷ ನ್ಯಾಯಾಲಯ ರಾಮ್ ರಹೀಮ್ ನನ್ನು ಅಪರಾಧಿ ಎಂದು ಪರಿಗಣಿಸಿತ್ತು. ಶಿಕ್ಷೆ ಘೋಷಣೆಯಾಗುತ್ತಿದ್ದಂತೆಯೇ ಹರ್ಯಾಣದ ಪಂಚಕುಲದಲ್ಲಿ ಆತನ ಅನುಯಾಯಿಗಳು ನಡೆಸಿದ ಗಲಭೆಯಲ್ಲಿ ಒಟ್ಟು 41 ಜನ ಮೃತರಾಗಿದ್ದರು.
ಚುನಾವಣೆ ಯಾವಾಗ?
ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ. 200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಪಕ್ಷವೊಂದು ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 101. ಪ್ರಸ್ತುತ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ.