ದೇವ್ರಿಯಾ ಬಾಲಿಕಾಗೃಹ ಘಟನೆ: ತನಿಖೆ ಸಿಬಿಐಗೆ ವರ್ಗ
ಲಕ್ನೋ, ಆಗಸ್ಟ್ 8: ದೇವ್ರಿಯಾದ ಬಾಲಿಕಾಗೃಹದ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿರುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರಕಟಿಸಿದ್ದಾರೆ.
'ನಾವು ದೇವ್ರಿಯಾ ಬಾಲಿಕಾಗೃಹದ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುತ್ತಿದ್ದೇವೆ. ಅಪರಾಧ ದಳದ ಹೆಚ್ಚುವರಿ ಮಹಾ ನಿರ್ದೇಶಕರ ನೇತೃತ್ವದಲ್ಲಿ ವಿಶೇಷ ತನಿಖಾ ದಳವನ್ನು ರಚಿಸಲಾಗುವುದು' ಎಂದು ಯೋಗಿ ತಿಳಿಸಿದ್ದಾರೆ.
ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಹೊರಬಿದ್ದ ಭಯಾನಕ ಸತ್ಯಗಳು!
ಸಿಬಿಐ 2015-16ರಲ್ಲಿಯೇ ಇಲ್ಲಿ ಹಣಕಾಸು ಅವ್ಯವಹಾರಗಳು ನಡೆದಿರುವ ಬಗ್ಗೆ ಹೇಳಿತ್ತು. ನಾವು 2017ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅವುಗಳನ್ನು ಮುಚ್ಚುವಂತೆ ಆದೇಶಿಸಿದೆವು.
ಜಿಲ್ಲಾಡಳಿತ ಸೂಕ್ತ ಸಮಯಕ್ಕೆ ಸರಿಯಾಗಿ ಕೆಲಸ ನಿರ್ವಹಿಸಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿಯನ್ನು ವರ್ಗಾಯಿಸಿ ಅವರ ವಿರುದ್ಧ ದೋಷಾರೋಪ ನಿಗದಿಪಡಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಬಾಲಿಕಾಗೃಹದ ಬಾಲಕಿಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ನಾಲ್ವರನ್ನು ಬಂಧಿಸಲಾಗಿದೆ.
ಅಲ್ಲದೆ, ಜಿಲ್ಲಾ ಪ್ರೊಬೇಷನ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.