12ರ ಬಾಲಕನ ಪ್ರಾಣ ತಂದೆ ಹೆಗಲ ಮೇಲೆ ಹೋಯಿತು...
ಕಾನ್ಪುರ್. ಆಗಸ್ಟ್ 30: ಇದು ನೆನಪಿನ ಗಾಯ ಮಾಯುವ ಮುನ್ನವೇ ಆದ ಮತ್ತೊಂದು ಗಾಯ. ಈಚೆಗೆ ಒಡಿಶಾದ ಆಸ್ಪತ್ರೆಯಲ್ಲಿ ಮಹಿಳೆಯ ಶವ ಸಾಗಿಸಲು ಆಸ್ಪತ್ರೆ ವಾಹನ ಒದಗಿಸದೆ, ಆಕೆಯ ಪತಿ ಶವವನ್ನು ಹತ್ತು ಕಿಲೋಮೀಟರ್ ಹೆಗಲ ಮೇಲೆ ಹೊತ್ತೊಯ್ದ ಘಟನೆ ನೆನಪಿನಲ್ಲಿ ಇರುವಾಗಲೇ ಅಂಥದೇ ಸನ್ನಿವೇಶದಲ್ಲಿ ವ್ಯಕ್ತಿಯೊಬ್ಬರು ತನ್ನ ಮಗನನ್ನು ಕಳೆದುಕೊಂಡಿದ್ದಾರೆ.
ಕಾನ್ಪುರದ ಲಾಲಾ ಲಜಪತ್ ರಾಯ್ ಆಸ್ಪತ್ರೆಯಲ್ಲಿ ಹನ್ನೆರಡು ವರ್ಷದ ಹುಡುಗ ಅಂಶ್ ಮೃತಪಟ್ಟವನು. ಆತನ ತಂದೆ ಸುನೀಲ್ ಕುಮಾರ್ ಎಷ್ಟೇ ಅಂಗಲಾಚಿದರೂ ಆಸ್ಪತ್ರೆಯವರು ಸ್ಟ್ರೆಚರ್ ನೀಡಿಲ್ಲ. ಆಸ್ಪತ್ರೆಯಿಂದ ಮಕ್ಕಳ ಚಿಕಿತ್ಸಾ ಕೇಂದ್ರಕ್ಕೆ 250 ಮೀಟರ್ ದೂರವಿತ್ತು. ಕಡೆಗೆ ಹೆಗಲ ಮೇಲೆ ಹೊತ್ತೊಯ್ಯುವಷ್ಟರಲ್ಲಿ ಆ ಹುಡುಗನ ಪ್ರಾಣ ಹೋಗಿದೆ.[ಮಾನವಂತ ಪೊಲೀಸ್ಗೆ ಹೃದಯತುಂಬಿದ ಅಭಿನಂದನೆ!]
'ನನ್ನ ಮಗನ ಸ್ಥಿತಿ ಗಂಭೀರವಾಗಿದೆ. ದಯವಿಟ್ಟು ಪರೀಕ್ಷೆ ಮಾಡಿ, ಅಡ್ಮಿಟ್ ಮಾಡಿಕೊಳ್ಳಿ ಅಂತ ಡಾಕ್ಟರ್ ಗಳನ್ನ ಬೇಡಿಕೊಂಡೆ. ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳೋದಿಕ್ಕೆ ಮೂವತ್ತು ನಿಮಿಷ ತಗೊಂಡರು' ಎಂದು ಸುನೀಲ್ ಕುಮಾರ್ ಹೇಳಿದ್ದಾರೆ. ಅಂಶ್ ನನ್ನು ಹೆಗಲ ಮೇಲೆ ಹೊತ್ತು ಮಕ್ಕಳ ಚಿಕಿತ್ಸಾ ಕೇಂದ್ರಕ್ಕೆ ಹೋಗುವಾಗಲೇ ಪ್ರಾಣ ಹೊರಟುಹೋಗಿದೆ.
ಅಂಶ್ ಆರನೇ ಕ್ಲಾಸ್ ಓದುತ್ತಿದ್ದ. ಬಹಳ ಬುದ್ಧಿವಂತನಿದ್ದ. ಲೋಕಲ್ ಆಸ್ಪತ್ರೆಗೆ ಒಂಬತ್ತು ನಿಮಿಷದಲ್ಲಿ ಕರೆದುಕೊಂಡು ಹೋದೆ. ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂದರು ಎಂದು ಸುನೀಲ್ ತಿಳಿಸಿದ್ದಾರೆ. ಯಾರೂ ಸುನೀಲ್ ಸಹಾಯಕ್ಕೆ ಬಂದಿಲ್ಲ. ಕಡೆಗೆ ಮಗನ ಶವವನ್ನ ಬಟ್ಟೆಯಲ್ಲಿ ಸುತ್ತಿಕೊಂಡು, ಹೆಗಲ ಮೇಲಿಟ್ಟುಕೊಂಡು ಮನೆಗೆ ಹೋಗಿದ್ದಾರೆ.[ವಾಹನಕ್ಕೆ ಹಣ ಹೊಂದಿಸಲಾಗದೆ ಹೆಂಡತಿ ಶವ ಹೊತ್ತು 10 ಕಿ.ಮೀ. ನಡೆದ]
ಆದರೆ, ಆಸ್ಪತ್ರೆ ಅಧಿಕಾರಿಗಳು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಇಲ್ಲಿಗೆ ಆ ಹುಡುಗನನ್ನ ಕರೆದುಕೊಂಡು ಬರೋದರೊಳಗೆ ಹೃದಯ ಬಡಿತ ಇರಲಿಲ್ಲ. ಆಗಿನ ಸ್ಥಿತಿಯಲ್ಲೇ ಹೇಳಬಹುದಿತ್ತು: ಇಲ್ಲಿಗೆ ಬರುವ ಎರಡು-ಮೂರು ಗಂಟೆಯೇ ಪ್ರಾಣ ಹೋಗಿತ್ತು ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಆರ್.ಸಿ.ಗುಪ್ತಾ ಹೇಳಿದ್ದಾರೆ.