ಅಪನಗದೀಕರಣ ಅಸಂಘಟಿತ ವಲಯದ ಮೇಲಿನ ದಾಳಿ: ರಾಹುಲ್ ಗಾಂಧಿ ವಾಗ್ದಾಳಿ
ನವದೆಹಲಿ, ಸೆಪ್ಟೆಂಬರ್ 3: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಪನಗದೀಕರಣ ನಿರ್ಧಾರವನ್ನು ಟೀಕಿಸುವ ಹೊಸ ವಿಡಿಯೋವನ್ನು ಕಾಂಗ್ರೆಸ್ ಹಿರಿಯ ಮುಖಂಡ ರಾಹುಲ್ ಗಾಂಧಿ ಬಿಡುಗಡೆ ಮಾಡಿದ್ದಾರೆ. ದೇಶದ ಬಡ ಜನರು ಮತ್ತು ಅಸಂಘಟಿತ ವಲಯದ ಮೇಲಿನ ದಾಳಿ ಎಂದು ಅವರು ಅಪನಗದೀಕರಣವನ್ನು ವ್ಯಾಖ್ಯಾನಿಸಿದ್ದಾರೆ.
2016ರಲ್ಲಿ ಅಧಿಕ ಮೌಲ್ಯದ 500 ಮತ್ತು 1,000 ರೂ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಪ್ರಧಾನಿ ನರೇಂದ್ರ ಮೋದಿ ಆದೇಶ ಹೊರಡಿಸಿದ್ದರು. ಇದು ಸಣ್ಣ ಉದ್ದಿಮೆಗಳ ಮಾಲೀಕರು, ರೈತರು ಹಾಗೂ ದೇಶದ ಅಸಂಘಟಿತ ವಲಯಕ್ಕೆ ಭಾರಿ ಪ್ರಮಾಣದ ಹಾನಿ ಮಾಡಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
"ಜೆಇಇ, ನೀಟ್ ಪರೀಕ್ಷೆ ಬಗ್ಗೆ ಮಾತನಾಡಲಿಲ್ಲವೇಕೆ ಪ್ರಧಾನಿ ಮೋದಿ?"
ಮೋದಿ ಅವರ 'ನಗದು ಮುಕ್ತ' ಭಾರತವು ವಾಸ್ತವವಾಗಿ 'ಕಾರ್ಮಿಕ-ರೈತ-ಸಣ್ಣ ಉದ್ಯಮಿಗಳ ಮುಕ್ತ ಭಾರತ'ವಾಗಿದೆ. 2016ರ ನವೆಂಬರ್ 8ರಂದು ದಾಳಗಳನ್ನು ಎಸೆಯಲಾಗಿತ್ತು. ಅದರ ಭೀಕರ ಪರಿಣಾಮ 2020ರ ಆಗಸ್ಟ್ 31ಕ್ಕೆ ಬಂದಿದೆ ಎಂದು ರಾಹುಲ್ ಗಾಂಧಿ ಟೀಕಿಸಿದರು.
ಅಪನಗದೀಕರಣವು ತನ್ನ ಉದ್ದೇಶವನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಅದರಿಂದ ಕಪ್ಪುಹಣದ ನಿರ್ಮೂಲನೆಯ ಫಲಿತಾಂಶ ಸಾಧ್ಯವಾಗಿಲ್ಲ. ಮಿಗಿಲಾಗಿ ಇದು ದೇಶದ ಬಡ ಜನರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಿಲ್ಲ. ಈ ನಡೆಯು ದೇಶದ ಕೇವಲ ಅತಿ ಶ್ರೀಮಂತ ಕೋಟ್ಯಧಿಪತಿಗಳಿಗೆ ಸಹಾಯ ಮಾಡಿದೆ. ಸಾರ್ವಜನಿಕರು ಠೇವಣಿ ಇರಿಸಿದ್ದ ಹಣವನ್ನು ಶ್ರೀಮಂತರ ಸಾಲವನ್ನು ಮನ್ನಾ ಮಾಡಲು ಬಳಸಲಾಗಿದೆ ಎಂದು ಆರೋಪಿಸಿದರು.
ಸಾಮಾನ್ಯ ಜನರ ಜೇಬಿನಲ್ಲಿದ್ದ ಹಣವನ್ನು ಶ್ರೀಮಂತರ ಸಾಲ ಪಾವತಿಸಲು ಬಳಸಲಾಗಿದೆ. ಅಪನಗದೀಕರಣದ ಏಕೈಕ ಉದ್ದೇಶ ಇದೊಂದೇ ಆಗಿತ್ತು ಎಂದು ಟೀಕಿಸಿದರು.
ಕೊರೊನಾ ಲಸಿಕೆ ಬರಮಾಡಿಕೊಳ್ಳಲು ಸರ್ಕಾರ ಸಿದ್ಧವಾದಂತಿಲ್ಲ: ರಾಹುಲ್ ಗಾಂಧಿ
ನೋಟು ರದ್ದತಿಯಿಂದ ಹಾನಿ ಅನುಭವಿಸಿದವರು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು, ರೈತರು ಹಾಗೂ ದೇಶದ ಅತಿ ದೊಡ್ಡ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಮಾತ್ರ. ನಗದು ಹಣವನ್ನೇ ಅವಲಂಬಿಸಿದ್ದ ಈ ವಲಯದ ಜನರು ನೋಟು ರದ್ದತಿಯಿಂದ ತೀವ್ರ ಸಂಕಷ್ಟಕ್ಕೆ ಒಳಗಾದರು ಎಂದು ರಾಹುಲ್ ಗಾಂಧಿ ಆರೋಪಿಸಿದರು.