ಮೋದಿಯವರ ಅಂತ್ಯದ ಆರಂಭವಾಗಿದೆ : ಸಿಂಗ್ ವ್ಯಂಗ್ಯ
ನವದೆಹಲಿ, ಜನವರಿ 11 : ಅಪನಗದೀಕರಣದ ವಿರುದ್ಧ ಕಾಂಗ್ರೆಸ್ ಆಯೋಜಿಸಿರುವ ಜನ ವೇದನಾ ಸಮ್ಮೇಳನದಲ್ಲಿ ರಾಹುಲ್ ಗಾಂಧಿ ಮತ್ತು ಪಿ ಚಿದಂಬರಂ ನಂತರ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ಆರಂಭಿಸಿದ್ದಾರೆ.
ಭಾರತದ ಹಣಕಾಸು ವ್ಯವಸ್ಥೆಯನ್ನು ಬದಲಾಯಿಸುವುದಾಗಿ ನರೇಂದ್ರ ಮೋದಿ ವಾಗ್ದಾನ ನೀಡಿದ್ದರು. ಆದರೆ, ಈಗ ಅವರದೇ ಅಂತ್ಯ ಆರಂಭವಾಗಿರುವುದು ವಿಪರ್ಯಾಸ ಎಂದು ಮನಮೋಹನ ಸಿಂಗ್ ಅವರು ಬುಧವಾರ ವ್ಯಂಗ್ಯವಾಡಿದರು.[ನರೇಂದ್ರ ಮೋದಿ ವಿರುದ್ಧ ದೇವೇಗೌಡರು ಗುಡುಗಿದ್ದೇಕೆ?]
ಅಪನಗದೀಕರಣದಿಂದ ಭಾರತಕ್ಕೆ ಭಾರೀ ಹೊಡೆತ ಬಿದ್ದಿದೆ. ಕಳೆದ ಕೆಲ ತಿಂಗಳಲ್ಲಿ ಕೆಟ್ಟ ಪರಿಸ್ಥಿತಿ ಇನ್ನಷ್ಟು ವಿಷಮಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ರಾಷ್ಟ್ರದ ಆದಾಯ ಹೆಚ್ಚಾಗುತ್ತದೆ ಎಂಬ ಮೋದಿಯವರ ಆಲೋಚನೆ ತಳಹದಿ ಇಲ್ಲದ್ದು ಎಂದು ಅವರು ಕಿಡಿಕಾರಿದರು.
ಭಾರತದ ಜಿಡಿಪಿ ಶೇ.6.3ಕ್ಕೆ ಇಳಿಯಲಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಇದರಿಂದ ಅಪನಗದೀಕರಣ ಎಂಥ ಅನಾಹುತ ಮಾಡಿದೆ ಎಂಬುದನ್ನು ಊಹಿಸಿಕೊಳ್ಳಬಹುದು ಎಂದು ಮಾಜಿ ಪ್ರಧಾನಿ ವಿಶ್ಲೇಷಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಯುವ ನೇತಾರ ಸಚಿನ್ ಪೈಲಟ್ ಅವರು, ಪ್ರಧಾನ ಮಂತ್ರಿಯವರಿಗೆ ಪದ್ಮಾಸನ ಮಾಡುವ ಅವಶ್ಯಕತೆಯೇ ಇಲ್ಲ. ಅವರು ಇಡೀ ಹಿಂದೂಸ್ತಾನದ ಶಿರ್ಸಾಸನ ಮಾಡಿದ್ದಾರೆ ಎಂದು ಮಾತಿನ ಚಾಟಿ ಬೀಸಿದರು.[ಪ್ರಿಂಟಿಂಗ್ ಪ್ರೆಸ್ ನಿಂದ ನೇರ ಕಾಳಧನಿಕರ ಮನೆ ತಲುಪಿವೆ ಹೊಸ ನೋಟುಗಳು!]
ಅಪನಗದೀಕರಣವನ್ನು ತೀವ್ರವಾಗಿ ಟೀಕಿಸಿರುವ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರು, ನವೆಂಬರ್ 8ರಂದು ಸಂಪುಟ ಸಭೆ ನಡೆದ ಯಾವುದೇ ದಾಖಲೆಗಳಿಲ್ಲ. ಅಪನಗದೀಕರಣವನ್ನು ಘೋಷಿಸುವ ಸಮಯದಲ್ಲಿ ನರೇಂದ್ರ ಮೋದಿಯವರು ಎಲ್ಲ ಮಂತ್ರಿಗಳನ್ನು ಕೈದಿಗಳನ್ನಾಗಿಸಿದ್ದರು ಎಂದು ಮಾರ್ಮಿಕವಾಗಿ ನುಡಿದರು.
ಅಪನಗದೀಕರಣ ಪ್ರಕಟಿಸುವ ಸಮಯದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಷ್ಟು ನಿರ್ದೇಶಕರಿಗೆ ನೋಟೀಸ್ ನೀಡಿತ್ತು? ಅವರಿಗೆ ಎಷ್ಟು ಸಮಯ ನೀಡಲಾಗಿತ್ತು ಎಂದು 2012ರಿಂದ 2014ರ ನಡುವೆ ಯುಪಿಎ ಸರಕಾರದಲ್ಲಿ ವಿತ್ತ ಸಚಿವರಾಗಿದ್ದ ಪಿ ಚಿದಂಬರಂ ಅವರು ಖಾರವಾಗಿ ನುಡಿದರು.