ಲೈವ್ ಇನ್ ಸಂಗಾತಿ ಕೊಂದು, ದೇಹ ಕತ್ತರಿಸಲು ಯತ್ನಿಸಿದ ವ್ಯಕ್ತಿ: ಶ್ರದ್ಧಾ ಹತ್ಯೆಯಿಂದ ಪ್ರೇರಿತನಾದನೇ ಆರೋಪಿ?
ನವದೆಹಲಿ: ಶ್ರದ್ಧಾ ವಾಕರ್ ಪ್ರಕರಣ ಇನ್ನೂ ಸುದ್ದಿಯಲ್ಲಿ ಇರುವಾಗಲೇ ದೆಹಲಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಪಶ್ಚಿಮ ದೆಹಲಿಯ ತಿಲಕ್ ನಗರದಲ್ಲಿ ತನ್ನ 35 ವರ್ಷದ ಲಿವ್ ಇನ್ ಸಂಗಾತಿಯನ್ನು ಇರಿದು ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪಂಜಾಬ್ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಿವ್ ಇನ್ ಸಂಗಾತಿ ರೇಖಾ ರಾಣಿಯನ್ನು ಕೊಲೆ ಮಾಡಿದ ಆರೋಪಿ ಮನ್ಪ್ರೀತ್ನನ್ನು ಪಂಜಾಬ್ನಲ್ಲಿ ಬಂಧಿಸಲಾಗಿದೆ.
ಶ್ರದ್ಧಾ ವಾಕರ್ ಪ್ರಕರಣದಿಂದ ಪ್ರೇರಿತನಾದ ಆರೋಪಿ?
ತನ್ನ ಲಿವ್ ಇನ್ ಸಂಗಾತಿ ಶ್ರದ್ಧಾ ವಾಕರ್ಳನ್ನು ಕೊಂದು, ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿದ ಆರೋಪ ಹೊತ್ತಿರುವ ಅಫ್ತಾಬ್ ಪೂನಾವಾಲನಿಂದ ಆರೋಪಿ ಪ್ರೇರಿತನಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಮೃತರಾದ ರೇಖಾ ರಾಣಿ ದೇಹದ ದವಡೆಯ ಮೇಲೆ ಇರಿತದ ಗಾಯಗಳನ್ನು ಹೊಂದಿವೆ. ಆಕೆಯ ದೇಹವನ್ನು ಗಣೇಶ್ ನಗರದ ಬಾಡಿಗೆ ಮನೆಯೊಂದರಲ್ಲಿ ಪತ್ತೆ ಮಾಡಲಾಗಿದೆ. ರೇಖಾ ರಾಣಿ ಅವರು ತಮ್ಮ 16 ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಆರೋಪಿ ಮನ್ಪ್ರೀತ್ ಇಬ್ಬರು ಮಕ್ಕಳ ತಂದೆ
ರೇಖಾ ಅವರನ್ನು ಕೊಂದ ಆರೋಪ ಎದುರಿಸುತ್ತಿರುವ ಮನ್ಪ್ರೀತ್ಗೂ ಇಬ್ಬರು ಮಕ್ಕಳಿದ್ದಾರೆ ಎಂಬುದು ಪೊಲೀಸರ ವಿಚಾರಣೆಯಲ್ಲಿ ತಿಳಿದುಬಂದಿದೆ. 2015 ರಲ್ಲಿ ರೇಖಾ ಅವರೊಂದಿಗೆ ಸಂಬಂಧವನ್ನು ಬೆಳೆಸಿದ್ದ ಮನ್ಪ್ರೀತ್ ದೆಹಲಿಯ ಗಣೇಶ್ ನಗರದಲ್ಲಿ ವಾಸಿಸಲು ಪ್ರಾರಂಭಿಸಿದ್ದರು. ಇವರಿಬ್ಬರು ಸಂಬಂಧ ಇತ್ತಿಚೆಗೆ ಜಟಿಲವಾಗುತ್ತ ಸಾಗಿತ್ತು. ಇದರಿಂದ ತಪ್ಪಿಸಿಕೊಳ್ಳಲು ತನ್ನ ಸಂಗಾತಿಯನ್ನು ಹತ್ಯೆಗೈಯುವುದಕ್ಕಾಗಿ ಮನ್ಪ್ರೀತ್ ಯೋಜನೆ ರೂಪಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಡಿ.1ರ ರಾತ್ರಿ 16 ವರ್ಷದ ಅಪ್ರಾಪ್ತ ಮಗಳಿಗೆ ನಿದ್ದೆ ಮಾತ್ರೆ ನೀಡಿದ್ದ ಮನ್ಪ್ರೀತ್, ಆಕೆ ನಿದ್ದೆಗೆ ಜಾರಿದ ಬಳಿಕ ಚಾಕುವಿನಿಂದ ರೇಖಾಳನ್ನು ಕೊಂದಿದ್ದ. ರೇಖಾಳನ್ನು ಕೊಂದು, ಆಕೆಯ ದೇಹವನ್ನು ತುಂಡರಿಸಲು ಚಾಕು ಖರೀದಿಸಿದ್ದ. ಆದರೆ, ಮಗಳು ಎಚ್ಚರಗೊಳ್ಳಬಹುದು ಎಂಬ ಆತಂಕವಾಗಿದ್ದರಿಂದ ದೇಹವನ್ನು ತುಂಡರಿಸದೇ ಬಿಟ್ಟಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮನ್ಪ್ರೀತ್ ಅನೇಕ ಅಪಹರಣ ಮತ್ತು ಕೊಲೆ ಪ್ರಕರಣಗಳಲ್ಲಿಯೂ ಬೇಕಾಗಿದ್ದಾನೆ ಎಂದು ತಿಳಿದುಬಂದಿದೆ.
ಮಹಿಳೆಯ ಮಗಳ ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 201 (ಅಪರಾಧದ ಪುರಾವೆಗಳು ಕಣ್ಮರೆಯಾಗುವಂತೆ ಮಾಡುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದೇಶವನ್ನೇ ಬೆಚ್ಚಿಬೀಳಿಸಿದ ಶ್ರದ್ಧಾ ಹತ್ಯೆ ಪ್ರಕರಣ
ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದ ಶ್ರದ್ಧಾ ವಕಾರ್ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿತ್ತು. ಮಹಾರಾಷ್ಟ್ರದ ಮುಂಬೈ ಮೂಲಕ ಅಫ್ತಾಬ್ ಅಮೀನ್ ಪೂನಾವಾಲಾ ಮೇ 18 ರಂದು ತನ್ನ ಪ್ರೇಯಸಿ ಶ್ರದ್ದಾ ವಾಕರ್ ಅವರನ್ನು ಕತ್ತು ಹಿಸುಕಿ ಕೊಂದದ್ದನು. ಆ ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದನು. ಹೊಸದಾಗಿ ಖರೀದಿಸಿದ 300-ಲೀಟರ್ ರೆಫ್ರಿಜರೇಟರ್ನಲ್ಲಿ ಆಕೆಯ ದೇಹದ ತುಂಡುಗಳನ್ನು ಸಂಗ್ರಹಿಸಿದ್ದನು. ಆ ಬಳಿಕ ಆಕೆಯ ದೇಹದ ತುಂಡುಗಳನ್ನು ಸತತ 16 ದಿನಗಳ ಕಾಲ ದೆಹಲಿ ಸಮೀಪದ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಎಸೆದಿದ್ದನು.
ಶ್ರದ್ಧಾ ಹಂತಕ ಅಫ್ತಾಬ್ಗೆ ನಾರ್ಕೋ ಪರೀಕ್ಷೆ
ಶ್ರದ್ಧಾ ವಾಕರ್ ಹಂತಕ ಅಫ್ತಾಬ್ ಪೂನಾವಾಲಾಗೆ ಡಿಸೆಂಬರ್ 5 ರಂದು ನಾರ್ಕೋ ಪರೀಕ್ಷೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್ 5 ರಂದು ಎಫ್ಎಸ್ಎಲ್ ನಿರ್ದೇಶಕರ ಮುಂದೆ ಅಫ್ತಾಬ್ ಪೂನಾವಾಲಾ ಅವರನ್ನು ಹಾಜರುಪಡಿಸುವಂತೆ ದೆಹಲಿ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ. ಅಂಬೇಡ್ಕರ್ ಆಸ್ಪತ್ರೆಯಲ್ಲಿ ನಾರ್ಕೋ ಪರೀಕ್ಷೆ ನಡೆಸಬೇಕೆಂಬ ನಿಯಮವಿದೆ. ಆ ಹಿನ್ನೆಲೆಯಲ್ಲಿ ಡಿಸೆಂಬರ್ 5ರಂದು ಪರೀಕ್ಷೆ ನಡೆಯುವ ಸಾಧ್ಯತೆ ಇದೆ.