ಮಾನಹಾನಿ: ಅರ್ನಬ್, ರಿಪಬ್ಲಿಕ್ ಟಿವಿಗೆ ದೆಹಲಿ ಹೈಕೋರ್ಟ್ ನೋಟಿಸ್
ನವದೆಹಲಿ, ಮೇ 29 : ಕಾಂಗ್ರೆಸ್ ಸಂಸದ ಶಶಿ ತರೂರ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಅರ್ನಬ್ ಗೋಸ್ವಾಮಿ ಹಾಗೂ ಅವರ ರಿಪಬ್ಲಿಕ್ ಟಿವಿಗೆ ನೋಟಿಸ್ ಜಾರಿ ಮಾಡಿರುವ ದೆಹಲಿ ಹೈಕೋರ್ಟ್, ಆಗಸ್ಟ್ 16ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.
ಶಶಿ ತರೂರ್ ಅವರು ತಮ್ಮ ಪತ್ನಿ ಸುನಂದಾ ಪುಷ್ಕರ್ ಸಾವಿನ ಕುರಿತಾದ ಸುದ್ದಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಅರ್ನಬ್ ಗೋಸ್ವಾಮಿ ಹಾಗೂ ಅವರ ರಿಪಬ್ಲಿಕ್ ಟಿವಿ ವಿರುದ್ಧ ಸಿವಿಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.[ತರೂರ್ ಪತ್ನಿ ಸುನಂದಾ ಪುಷ್ಕರ್ ಸಾವು: ರಿಪಬ್ಲಿಕ್ ಟಿವಿ ಸಿಡಿಸಿದ ಬಾಂಬ್]
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮನಮೋಹನ್ ಅವರು, ನೀವು ನಿಮ್ಮ ವಾಕ್ಚಾತುರ್ಯವನ್ನು ತೋರಿಸಬಹುದು. ನಿಮ್ಮ ಕಥೆಯನ್ನು ಪ್ರಕಟಿಸಬಹದು. ವಾಸ್ತಾಂಶಗಳನ್ನು ನೀವು ಪ್ರಕಟಿಸಬಹುದು.
ಆದರೆ, ನೇರವಾಗಿ ಹೆಸರುಗಳನ್ನು ಪ್ರಸ್ತಾಪಿಸುವಂತಿಲ್ಲ ಎಂದು ಹೇಳಿ ಅರ್ನಬ್ ಗೋಸ್ವಾಮಿ ಹಾಗೂ ಅವರ ಟಿವಿಗೆ ನೋಟಿಸ್ ನೀಡಿ, ವಿಚಾರಣೆಯನ್ನು ಆಗಸ್ಟ್ 16ಕ್ಕೆ ಮುಂದೂಡಿದ್ದಾರೆ.
ಮೇ 8 ರಿಂದ 13ರವರೆಗೆ ರಿಪಬ್ಲಿಕ್ ಚಾನೆಲ್ನಲ್ಲಿ ಸುನಂದಾ ಪುಷ್ಕರ್ ಸಾವಿನ ಕುರಿತಾದ ವರದಿ ಬಿತ್ತರಿಸಲಾಗಿತ್ತು. ಈ ವೇಳೆ ತಮ್ಮ ಘನತೆಗೆ ಧಕ್ಕೆ ಬರುವ ರೀತಿಯಲ್ಲಿ ಟೀಕೆಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ತರೂರ್, ಅರ್ನಬ್ ಗೋಸ್ವಾಮಿ, ರಿಪಬ್ಲಿಕ್ ನ್ಯೂಸ್ ಚಾನೆಲ್ ವಿರುದ್ಧ ದೆಹಲಿ ಹೈಕೋರ್ಟ್ ನಲ್ಲಿ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು
ಅಲ್ಲದೇ, ತಮ್ಮ ಘನತೆಗೆ ಧಕ್ಕೆ ತಂದ ಕಾರಣ 2 ಕೋಟಿ ರು. ನಷ್ಟ ಪರಿಹಾರ ತುಂಬಬೇಕೆಂದು ಶಶಿ ತರೂರ್ ಒತ್ತಾಯಿಸಿದ್ದಾರೆ.