ಕೊನೆಗೂ ಪ್ರತಿಭಟನೆ ಹಿಂಪಡೆದ ಅರವಿಂದ ಕೇಜ್ರಿವಾಲ್
ನವದೆಹಲಿ, ಜೂನ್ 19: ದೆಹಲಿ ಉಪ ರಾಜ್ಯಪಾಲ ಅನಿಲ್ ಬೈಜಾಲ್ ಅವರ ನಿವಾಸದಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೈ ಬಿಟ್ಟಿದ್ದಾರೆ. ಜೂನ್ 11 ರಿಂದ ಅವರು ಬೈಜಾಲ್ ನಿವಾಸದ ವೇಯ್ಟಿಂಗ್ ರೂಂ ನಲ್ಲಿ ಪ್ರತಿಭಟನೆ ಕೂತಿದ್ದರು.
ಇಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅರವಿಂದ ಕೇಜ್ರಿವಾಲ್ ಅವರಿಗೆ ಪತ್ರವೊಂದನ್ನು ಬರೆದಿದ್ದರು. ಪತ್ರದಲ್ಲಿ ತಕ್ಷಣ ಅಧಿಕಾರಿಗಳನ್ನು ಸಚಿವಾಲಯದಲ್ಲಿ ಭೇಟಿಯಾಗುವಂತೆ ಸಿಎಂಗೆ ಅವರು ಮನವಿ ಮಾಡಿಕೊಂಡಿದ್ದರು. ಇದರಿಂದ ಎರಡೂ ಕಡೆಯವರ ಅಸಮಧಾನ ಮತ್ತು ಕಾಳಜಿಯನ್ನು ಮಾತುಕತೆ ಮೂಲಕ ಪರಿಹರಿಸಲು ಸಾಧ್ಯವಾಗುತ್ತದೆ. ದೆಹಲಿ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಭೇಟಿಯಾಗುವಂತೆ ಅವರು ಪತ್ರ ಬರೆದಿದ್ದರು.
ಎಎಪಿ, ಬಿಜೆಪಿ ಧರಣಿ ನಾಟಕದಲ್ಲಿ ದೆಹಲಿಗರು ಅತಂತ್ರ: ರಾಹುಲ್
ಇದಕ್ಕೂ ಮೊದಲು ಬೈಜಾಲ್ ಅವರನ್ನು ಭೇಟಿಯಾಗಲು ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಇತರ ಸಚಿವರು ಕಳೆದ ಸೋಮವಾರದಿಂದ ಯತ್ನಿಸುತ್ತಿದ್ದರು. ಆದರೆ ಭೇಟಿಗೆ ಅನುಮತಿ ನೀಡಿರಲಿಲ್ಲ. 'ಅಧಿಕಾರಿಗಳ ಪ್ರತಿಭಟನೆ ಕೊನೆಗೊಳಿಸಲು ಲೆಫ್ಟಿನೆಂಟ್ ಗವರ್ನರ್ ಮಧ್ಯ ಪ್ರವೇಶ ಮಾಡಬೇಕು. ಇದಲ್ಲದೆ ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆಗೆ ಅನುಮತಿ ನೀಡಬೇಕು' ಎಂಬುದು ಕೇಜ್ರಿವಾಲ್ ಸರಕಾರದ ಬೇಡಿಕೆಯಾಗಿತ್ತು.
ಬೈಜಾಲ್ ಭೇಟಿಗೆ ಅವಕಾಶ ನೀಡದೇ ಇದ್ದ ಹಿನ್ನೆಲೆಯಲ್ಲಿ, ಅವರೆಲ್ಲಾ ಬೈಜಾಲ್ ಕಚೇರಿಯ ವೇಯ್ಟಿಂಗ್ ರೂಂನಲ್ಲೇ ಜೂನ್ 11ರಿಂದ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂಬಂಧ ಮಧ್ಯ ಪ್ರವೇಶ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ಮೋದಿ ಸ್ಪಂದಿಸಿಲ್ಲ.
ಅರವಿಂದ್ ಕೇಜ್ರಿವಾಲ್ ಧರಣಿಗೆ ದೆಹಲಿ ಹೈಕೋರ್ಟ್ ಛೀಮಾರಿ!
ಕೇಜ್ರಿವಾಲ್ ಜೊತೆಗೆ ಧರಣಿ ಕೂತಿದ್ದ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಆರೋಗ್ಯ ಸಚಿವ ಸತ್ಯೇಂದ್ರನಾಥ್ ಉಪವಾಸ ಧರಣಿಯನ್ನೂ ನಡೆಸುತ್ತಿದ್ದರು. ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರಿಬ್ಬರೂ ಕ್ರಮವಾಗಿ ಸೋಮವಾರ ಮತ್ತು ಭಾನುವಾರ ಆಸ್ಪತ್ರೆ ಸೇರಿದ್ದರು.
ಕೊನೆಗೆ ಅನಿಲ್ ಬೈಜಾಲ್ ಅವರ ನಿವಾಸದ ವೇಯ್ಟಿಂಗ್ ರೂಂನಲ್ಲಿ ಉಳಿದಿದ್ದ ಅರವಿಂದ ಕೇಜ್ರಿವಾಲ್ ಮತ್ತು ಗೋಪಾಲ್ ರೈ ತಮ್ಮ ಪ್ರತಿಭಟನೆ ಮುಂದುವರಿಸಿದ್ದರು. ಇದೀಗ ಅವರೂ ತಮ್ಮ ಪ್ರತಿಭಟನೆ ಹಿಂದಕ್ಕೆ ಪಡೆದಿದ್ದಾರೆ.