ಕೊಚ್ಚಿಹೋಗಿದ್ದ ಶಿವನ ಚಿನ್ನದ ಕಿರೀಟ ಸಿಕ್ಕಿತು!
ಲಕ್ಷಾಂತರ ರೂಪಾಯಿ ಬೆಲೆಬಾಳುವ ಸುಮಾರು ಅರ್ಧ ಕೆಜಿಗೂ ಹೆಚ್ಚು ತೂಕದ ಅಮೂಲ್ಯ ಚಿನ್ನದ ಕಿರೀಟವು ಹಿಮಾಲಯ ಸುನಾಮಿ ವೇಳೆ ನಾಪತ್ತೆಯಾಗಿತ್ತು. ಅದೀಗ ಕೇದಾರನಾಥ ದೇವಸ್ಥಾನದ ಸಿಬ್ಬಂದಿಯ ವಿಶ್ರಾಂತಿ ಗೃಹದಲ್ಲಿ ಪತ್ತೆಯಾಗಿದೆ ಎಂದು Badrinath-Kedarnath Mandir Samiti ಅಧ್ಯಕ್ಷ ಗಣೇಶ್ ಗೊಡಿಯಾಳ್ ಅವರು ತಿಳಿಸಿದ್ದಾರೆ.
ಕೇದಾರನಾಥದ ಗರ್ಭಗುಡಿಯಲ್ಲಿರುವ ಶಿವಲಿಂಗದ ಮೇಲೆ ಈ ಕಿರೀಟ ತೊಡಿಸಲಾಗುತ್ತಿತ್ತು. ಪ್ರತಿ ರಾತ್ರಿ ಪೂಜಾ ಸಮಯದಲ್ಲಿ (ಆರತಿ ಎತ್ತುವಾಗ) ಇದನ್ನು ವಿಶೇಷವಾಗಿ ಬಳಸಲಾಗುತ್ತಿತ್ತು. ಆದರೆ ಸುನಾಮಿಯಲ್ಲಿ ಕೊಚ್ಚಿಹೋಗಿದ್ದ ಚಿನ್ನದ ಕಿರೀಟವು ದೇವಸ್ಥಾನದ ವಿಶ್ರಾಂತಿ ಗೃಹವನ್ನು ಸ್ವಚ್ಛಗೊಳಿಸುವಾಗ ಸಿಬ್ಬಂದಿಯ ಕಣ್ಣಿಗೆ ಬಿದ್ದಿದೆ.
ಸರಿಯಾಗಿ 2 ತಿಂಗಳ ಹಿಂದೆ, ಪುರಾಣಪ್ರಸಿದ್ಧ ಕೇದಾರನಾಥ ಹಿಮಾಲಯ ಸುನಾಮಿಯಲ್ಲಿ ಜಲಪ್ರಳಯದಿಂದ ಅಕ್ಷರಶಃ ಕೊಚ್ಚಿಹೋದ ನಂತರ ಕೇದಾರನಾಥ ಕ್ಷೇತ್ರವನ್ನು ಶುಚಿಗೊಳಿಸುವ ವೇಳೆ ಅವಶೇಷಗಳ ನಡುವೆ ಹೂತುಹೋಗಿದ್ದ ಸ್ಥಳೀಯ SBI ಶಾಖೆಯ ಲಾಕರ್ ಮತ್ತು ಅದರಲ್ಲಿದ್ದ 1.90 ಕೋಟಿ ರೂ. ನಗದು ಸಿಕ್ಕಿತ್ತು.