ಚೀನಾ ಗಡಿಯಲ್ಲಿ ಶಸ್ತ್ರಪೂಜೆ ನೆರವೇರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ನವದೆಹಲಿ, ಅಕ್ಟೋಬರ್ 25: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ಸೇನಾ ಅಧಿಕಾರಿಗಳು ಮತ್ತು ಯೋಧರೊಂದಿಗೆ, ಸಿಕ್ಕಿಂನ ಶೆರಾಥಾಂಗ್ ನ ನೈಜ ನಿಯಂತ್ರಣ ರೇಖೆಯಿಂದ 2 ಕಿ.ಮೀ ದೂರದಲ್ಲಿ ದಸರಾ ಹಬ್ಬದ ಪ್ರಯುಕ್ತವಾಗಿ ಶಸ್ತ್ರಾಸ್ತ್ರಗಳಿಗೆ "ಶಸ್ತ್ರ ಪೂಜೆ'ಯನ್ನು ಭಾನುವಾರ ನೆರವೇರಿಸಿದರು.
ಅರ್ಚಕರು ಸಂಸ್ಕೃತದಲ್ಲಿ ಪ್ರಾರ್ಥನೆ ಮಾಡುತ್ತಿದ್ದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶಸ್ತ್ರಾಸ್ತ್ರಗಳು, ಉಪಕರಣಗಳು ಮತ್ತು ಶಸ್ತ್ರಸಜ್ಜಿತ ವಾಹನಗಳಿಗೆ ಪೂಜೆ ಸಲ್ಲಿಸಿದರು. ಅರ್ಚಕರು "ಭಾರತದ ಗಡಿಗಳ ಸುರಕ್ಷತೆ' ಯ ಪ್ರಾರ್ಥನೆಯೊಂದಿಗೆ ಸಮಾರಂಭವನ್ನು ಮುಕ್ತಾಯಗೊಳಿಸಿದರು. ಪೂರ್ವ ಲಡಾಖ್ ನಲ್ಲಿ ಚೀನಾದೊಂದಿಗಿನ ಭಿನ್ನಾಭಿಪ್ರಾಯದ ಮಧ್ಯೆಯೇ ಭಾರತದ ಡಿ-ಫ್ಯಾಕ್ಟರ್ ಗಡಿಯ ಸಮೀಪದಲ್ಲಿ "ಶಸ್ತ್ರ ಪೂಜೆ' ಮಾಡಲಾಗಿದ್ದು, 2020ರ ಮೇ ತಿಂಗಳ ಆರಂಭದಲ್ಲಿ ಉತ್ತರ ಸಿಕ್ಕಿಂನಲ್ಲಿ ಭಾರತೀಯ ಸೇನೆ ಮತ್ತು ಚೀನಾದ ಸೈನಿಕರ ನಡುವೆ ಘರ್ಷಣೆ ನಡೆದಿತ್ತು.
ಪಾಕ್ ಬೆನ್ನಲ್ಲೇ ಗಡಿ ವಿವಾದ ಸೃಷ್ಟಿಸುತ್ತಿರುವ ಚೀನಾ: ರಾಜನಾಥ್ ಸಿಂಗ್
|
ಶಸ್ತ್ರಾಸ್ತ್ರ ಪೂಜಾ ಸಮಾರಂಭದಲ್ಲಿ ಸಹ ಭಾಗವಹಿಸುತ್ತೇನೆ
ಭಾನುವಾರ ಮುಂಜಾನೆ ಸಚಿವ ರಾಜನಾಥ್ ಸಿಂಗ್ ಅವರು ಟ್ವಿಟ್ಟರ್ ನಲ್ಲಿ ದಸರಾ ಶುಭಾಶಯಗಳನ್ನು ತಿಳಿಸಿದ್ದರು. "ವಿಜಯದಶಮಿಯ ಹಬ್ಬದಂದು ಎಲ್ಲಾ ದೇಶವಾಸಿಗಳಿಗೆ ಶುಭಾಶಯಗಳು. ಈ ಶುಭ ಸಂದರ್ಭದಲ್ಲಿ ಇಂದು ನಾನು ಸಿಕ್ಕಿಂನ ನಾಥುಲಾ ಪ್ರದೇಶಕ್ಕೆ ಭೇಟಿ ನೀಡುತ್ತೇನೆ ಮತ್ತು ಭಾರತೀಯ ಸೇನೆಯ ಸೈನಿಕರನ್ನು ಭೇಟಿಯಾಗುತ್ತೇನೆ ಹಾಗೂ ಶಸ್ತ್ರಾಸ್ತ್ರ ಪೂಜಾ ಸಮಾರಂಭದಲ್ಲಿ ಸಹ ಭಾಗವಹಿಸುತ್ತೇನೆ' ಎಂದು ಬರೆದುಕೊಂಡಿದ್ದರು.
ಸೇನಾ ಪಡೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ರಕ್ಷಣಾ ಸಚಿವರು ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ರಾಜ್ಯಗಳಿಗೆ ಎರಡು ದಿನಗಳ ಕಾಲ ಪ್ರವಾಸದಲ್ಲಿದ್ದು, ಅವರಿಗೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಸಾಥ್ ನೀಡಲಿದ್ದಾರೆ.
ಸೈನಿಕರ ಸಮರ್ಪಣೆಯನ್ನು ಶ್ಲಾಘಿಸಿದರು
ಸಿಕ್ಕಿಂ ಸೆಕ್ಟರ್ ನ ವಾಸ್ತವಿಕ ಗಡಿ ಪ್ರದೇಶದಲ್ಲಿನ ಪರಿಸ್ಥಿತಿಯ ಬಗ್ಗೆ ಶನಿವಾರ ರಕ್ಷಣಾ ಸಚಿವರು ಮತ್ತು ಸೇನಾ ಮುಖ್ಯಸ್ಥರಿಗೆ ವಿವರವಾಗಿ ತಿಳಿಸಲಾಯಿತು. ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ ಚೀನಾದೊಂದಿಗೆ ಸುಮಾರು 3,500 ಕಿ.ಮೀ ಉದ್ದದ ವಾಸ್ತವಿಕ ಗಡಿಯಲ್ಲಿ ಭಾರತೀಯ ಸೇನೆಯು ತನ್ನ ಸೈನ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಗಮನಾರ್ಹವಾಗಿ ಬಲಪಡಿಸಿದೆ.
ಸೇನಾ ಸಿಬ್ಬಂದಿಯೊಂದಿಗಿನ ಸಂವಾದದಲ್ಲಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದಸರಾ ಸಂದರ್ಭದಲ್ಲಿ ಯೋಧರಿಗೆ ಶುಭಾಶಯಗಳನ್ನು ತಿಳಿಸಿದರು ಹಾಗೂ ಗಡಿಗಳನ್ನು ಭದ್ರಪಡಿಸುವಲ್ಲಿ ಸೈನಿಕರ ಸಮರ್ಪಣೆಯನ್ನು ಶ್ಲಾಘಿಸಿದರು.
ಯೋಧರು ತಮ್ಮ ಪ್ರಾಣವನ್ನು ತ್ಯಾಗ ಮಾಡಬೇಕಾಯಿತು
""ಭಾರತವು ತನ್ನ ಎಲ್ಲಾ ನೆರೆಯ ರಾಷ್ಟ್ರಗಳೊಂದಿಗೆ ಯಾವಾಗಲೂ ಉತ್ತಮ ಸಂಬಂಧ ಬೆಳೆಸಲು ಬಯಸುತ್ತದೆ, ನಾವು ಯಾವಾಗಲೂ ಅದಕ್ಕಾಗಿ ಪ್ರಯತ್ನವನ್ನು ಮಾಡಿದ್ದೇವೆ. ಆದರೆ ನಮ್ಮ ಗಡಿಗಳು, ಸಮಗ್ರತೆ ಮತ್ತು ಸಾರ್ವತ್ರಿಕತೆಯನ್ನು ರಕ್ಷಿಸಲು ನಮ್ಮ ಯೋಧರು ಕಾಲಕಾಲಕ್ಕೆ ತಮ್ಮ ಪ್ರಾಣವನ್ನು ತ್ಯಾಗ ಮಾಡಬೇಕಾಯಿತು. ಸೈನಿಕರಿಂದಾಗಿ ರಾಷ್ಟ್ರದ ಗಡಿಗಳು ಸುರಕ್ಷಿತವಾಗಿವೆ'' ಎಂದು ರಕ್ಷಣಾ ಸಚಿವರು ಶನಿವಾರ ಹೇಳಿದ್ದರು.
ರಫೇಲ್ ಫೈಟರ್ ಜೆಟ್ಗಳಿಗೆ ಶಸ್ತ್ರಪೂಜೆ
ಕಳೆದ ಎನ್ಡಿಎ ಸರ್ಕಾರದಲ್ಲಿ ಕೇಂದ್ರ ಗೃಹ ಸಚಿವರಾಗಿದ್ದ ಅವಧಿಯಲ್ಲೂ ಒಳಗೊಂಡಂತೆ ರಾಜನಾಥ್ ಸಿಂಗ್ ಅವರು ಕಳೆದ ಹಲವಾರು ವರ್ಷಗಳಿಂದ ದಸರಾ ಪ್ರಯುಕ್ತವಾಗಿ ""ಶಸ್ತ್ರ ಪೂಜೆ'' ನಡೆಸಿಕೊಂಡು ಬಂದಿದ್ದಾರೆ.
ಕಳೆದ ವರ್ಷ ರಕ್ಷಣಾ ಸಚಿವರು ಫ್ರೆಂಚ್ ಬಂದರು ನಗರವಾದ ಬೋರ್ಡೆಕ್ಸ್ ನಲ್ಲಿ ಔಪಚಾರಿಕವಾಗಿ ರಫೇಲ್ ಫೈಟರ್ ಜೆಟ್ಗಳನ್ನು ಸ್ವೀಕರಿಸಿ, ಶಸ್ತ್ರಪೂಜೆ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು.