ಜವಾಬ್ದಾರಿ ಹೊತ್ತ 48 ಗಂಟೆಯೊಳಗೆ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಸಿಯಾಚಿನ್ ನಲ್ಲಿ
ಭಾರತದ ರಕ್ಷಣಾ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ನಲವತ್ತೆಂಟು ಗಂಟೆಯೊಳಗಾಗಿ ರಾಜ್ ನಾಥ್ ಸಿಂಗ್ ಅವರು ಸೋಮವಾರ ಸಿಯಾಚಿನ್ ಗೆ ಭೇಟಿ ನೀಡಿ, ಜಗತ್ತಿನ ಅತಿ ಎತ್ತರದ ಯುದ್ಧ ಭೂಮಿಯಲ್ಲಿ ನಿಯೋಜಿತರಾಗಿರುವ ಸೈನಿಕರೊಂದಿಗೆ ಮಾತುಕತೆ ನಡೆಸಿದ್ದಾರೆ.
"ಮುಂಚೂಣಿ ಸೇನಾ ಠಾಣೆಗೆ ಹಾಗೂ ಸಿಯಾಚಿನ್ ನ ಬೇಸ್ ಕ್ಯಾಂಪ್ ಗೆ ಭೇಟಿ ನೀಡಿದ್ದೆ. 'ಜಗತ್ತಿನ ಅತಿ ಎತ್ತರದ ಯುದ್ಧ ಭೂಮಿ'ಯಲ್ಲಿ ಕಾರ್ಯ ನಿರ್ವಹಿಸುವ ಸೇನಾ ಸಿಬ್ಬಂದಿ ಜತೆಗೆ ಮಾತುಕತೆ ನಡೆಸಿದೆ" ಎಂದು ರಾಜ್ ನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಕೂಡ ರಾಜ್ ನಾಥ್ ಸಿಂಗ್ ಜತೆಯಲ್ಲಿ ಇದ್ದರು. ರಕ್ಷಣಾ ಸಚಿವಾಲಯದ ಕಾರ್ಯ ನಿರ್ವಹಣೆ ಬಗ್ಗೆ ಹಿರಿಯ ಅಧಿಕಾರಿಗಳು ರಾಜ್ ನಾಥ್ ಸಿಂಗ್ ಗೆ ವಿವರಣೆ ನೀಡಿದ್ದರು.
ಆಭರಣ ಮಾರಿ ಸಿಯಾಚಿನ್ ನಲ್ಲಿ ಆಕ್ಸಿಜನ್ ಪ್ಲಾಂಟ್ ರಚಿಸಲು ಹೊರಟ ದಂಪತಿ
"ಸಿಯಾಚಿನ್ ನಲ್ಲಿ ಕಾರ್ಯ ನಿರ್ವಹಿಸುವಾಗ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿದ್ದೇನೆ. ಸಿಯಾಚಿನ್ ನ ರಕ್ಷಣೆ ಮಾಡುವ ಸಮಯದಲ್ಲಿ ಸಾವಿರದನೂರಕ್ಕೂ ಹೆಚ್ಚು ಯೋಧರು ಜೀವ ತ್ಯಾಗ ಮಾಡಿದ್ದಾರೆ. ಅವರ ಸೇವೆ ಹಾಗೂ ತ್ಯಾಗಕ್ಕೆ ದೇಶವು ಅವರಿಗೆ ಋಣಿಯಾಗಿ ಇರುತ್ತದೆ" ಎಂದು ರಾಜ್ ನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಭಾರತದ ವಶದಲ್ಲಿ ಇರುವವರೆಗೆ ಅಪಾಯ ಇಲ್ಲ
ವ್ಯೂಹಾತ್ಮಕ ದೃಷ್ಟಿಯಿಂದ ಎಪ್ಪತ್ತಾರು ಕಿ.ಮೀ. ವ್ಯಾಪ್ತಿಯಲ್ಲಿ ನಿಧಾನಕ್ಕೆ ಸಾಗುವ ಮಂಜುಗಡ್ಡೆಯ ನದಿ ಹಾಗೂ ಈ ನೀರ್ಗಲ್ಲು ಭಾರತಕ್ಕೆ ಬಹಳ ಮಹತ್ವದ್ದು. ಎಲ್ಲಿಯವರೆಗೆ ಈ ಸ್ಥಳ ಭಾರತದ ವಶದಲ್ಲಿ ಇರುತ್ತದೋ ಅಲ್ಲಿಯ ತನಕ ಪಾಕಿಸ್ತಾನಿ ಸೇನೆಯು ಚೀನಾದ ಜತೆ ಸೇರಿ ಲಡಾಖ್ ಭಾಗಕ್ಕೆ ಅಪಾಯಕಾರಿ ಆಗಲು ಸಾಧ್ಯವಿಲ್ಲ.
ಅಗತ್ಯಗಳನ್ನು ಮನವರಿಕೆ ಮಾಡುವುದಕ್ಕೂ ಅನುಕೂಲ
ಚೀನಾದ ಅಡಿಯಲ್ಲಿ ಇರುವ ಶಾಕ್ಸಗಾಮ್ ಹಾಗೂ ಪಾಕಿಸ್ತಾನ ಆಕ್ರಮಿತ ಬಾಲ್ಟಿಸ್ತಾನ್ ಮಧ್ಯೆ ಸಿಯಾಚಿನ್ ಚಿಲುಕ ಹಾಕಿದಂತೆ ಇದೆ. "ರಕ್ಷಣಾ ಮಂತ್ರಿ ಸಿಯಾಚಿನ್ ಗೆ ಭೇಟಿ ನೀಡುವುದು ಸಾಂಕೇತಿಕವಾಗಿ ಅದ್ಭುತವಾದ ವಿಚಾರ. ಸಶಸ್ತ್ರ ಪಡೆಯ ಆಡಳಿತಾತ್ಮಕ ಹಾಗೂ ಕಾರ್ಯಚಟುವಟಿಕೆಗೆ ಬೇಕಾದ ಅಗತ್ಯಗಳನ್ನು ಅವರ ಗಮನಕ್ಕೆ ತರುವುದಕ್ಕೂ ಇದರಿಂದ ಅನುಕೂಲ" ಎಂದು ಏರ್ ವೈಸ್ ಮಾರ್ಷಲ್ ಮನ್ ಮೋಹನ್ ಬಹಾದೂರ್ (ನಿವೃತ್ತ) ಹೇಳಿದ್ದಾರೆ.
ನಿರ್ಮಲಾ, ಮನೋಹರ್ ಪರಿಕರ್ ಭೇಟಿ ನೀಡಿದ್ದರು
ಹಿಂದಿನ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್, ಮನೋಹರ್ ಪರಿಕರ್ ಕೂಡ ಸಿಯಾಚಿನ್ ಗೆ ಭೇಟಿ ನೀಡಿದ್ದರು. ಐದು ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಇಲ್ಲಿನ ಬೇಸ್ ಕ್ಯಾಂಪ್ ನಲ್ಲಿ ಸೈನಿಕರ ಜತೆಗೆ ದೀಪಾವಳಿ ಆಚರಿಸಿದ್ದರು. ಜಾರ್ಜ್ ಫರ್ನಾಂಡಿಸ್ ಅವರು ರಕ್ಷಣಾ ಸಚಿವರಾಗಿದ್ದಾಗ ಮೂವತ್ತಕ್ಕೂ ಹೆಚ್ಚು ಬಾರಿ ಸಿಯಾಚಿನ್ ಗೆ ಭೇಟಿ ನೀಡಿದ್ದರು.
ಸೇನಾ ನಿಯೋಜನೆಗೆ ಪಾಕಿಸ್ತಾನ ವಿರೋಧ
ಇಲ್ಲಿ ಸೇನಾ ನಿಯೋಜನೆಯನ್ನು ಪಾಕಿಸ್ತಾನ ವಿರೋಧಿಸುತ್ತಾ ಬಂದಿದೆ. ಅಂದ ಹಾಗೆ ಭಾರತದ ಮೂರು ಸಾವಿರ ಸೈನಿಕರನ್ನು ಇಲ್ಲಿ ನೇಮಿಸಲಾಗಿದೆ. ಕೆಲ ಬಾರಿ ಮೈನಸ್ ಅರವತ್ತು ಡಿಗ್ರಿಗೂ ತಾಪಮಾನ ಕುಸಿದು ಹೋಗುತ್ತದೆ. ಈ ನೀರ್ಗಲ್ಲಿನ ಬಹಳ ದೂರದ ಪ್ರದೇಶ ತಲುಪಲು ತಿಂಗಳ ಕಾಲ ಸೈನಿಕರು ಚಾರಣ ಮಾಡಬೇಕಾಗುತ್ತದೆ. ಈ ಜಾಗದಲ್ಲಿ ನಿಯೋಜನೆ ಆಗಿರುವ ಹುದ್ದೆಗಳ ಪೈಕಿ ಶೇಕಡಾ ಎಂಬತ್ತು ಮಂದಿ ಹದಿನಾರು ಸಾವಿರ ಅಡಿಗೂ ಎತ್ತರದಲ್ಲಿ ಇದ್ದಾರೆ. ಉಳಿದವರು ಇಪ್ಪತ್ತೊಂದು ಸಾವಿರದ ಏಳುನೂರು ಅಡಿಗೂ ಮೇಲ್ಪಟ್ಟ ಜಾಗದಲ್ಲಿ ಇದ್ದಾರೆ.