'ಕಾಂಗ್ರೆಸ್ ಇಲ್ಲದೆ ಬಿಜೆಪಿ ಸೋಲು ಕನಸು': ಮಮತಾಗೆ ಕೆಸಿ ವೇಣುಗೋಪಾಲ್ ತಿರುಗೇಟು
ಸಾರ್ವತ್ರಿಕ ಚುನಾವಣೆಗೆ ಎರಡು ವರ್ಷಗಳು ಬಾಕಿ ಇರುವಾಗಲೇ ಬಿಜೆಪಿಯನ್ನು ಮಣಿಸಲು ವಿರೋಧಪಕ್ಷಗಳು ಜತೆಗೂಡುತ್ತಿವೆ. ಆದರೆ ಈ ವಿಪಕ್ಷ ಪಾಳೆಯದಿಂದ ಕಾಂಗ್ರೆಸ್ ಅನ್ನು ಹೊರಗಿಡಲಾಗುತ್ತಿದೆ ಎನ್ನುವ ಅನುಮಾನ ದಟ್ಟವಾಗುತ್ತಿದೆ. ಮುಖ್ಯವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಹೊರತಾದ ಪ್ರಬಲ ತಂಡವನ್ನು ಕಟ್ಟಲು ಮುಂದಾಗುತ್ತಿದ್ದಾರೆ. ಜತೆಗೆ ಕಾಂಗ್ರೆಸ್ ವಿರುದ್ಧ ತೀಕ್ಷ್ಣ ವಾಗ್ದಾಳಿಯನ್ನೂ ನಡೆಸಿದ್ದಾರೆ. ಪ್ರಬಲ ಮೈತ್ರಿಕೂಟ ರಚನೆಯ ಭಾಗವಾಗಿ ಮುಂಬಯಿಗೆ ತೆರಳಿರುವ ಮಮತಾ ಬ್ಯಾನರ್ಜಿ, ಎನ್ಸಿಪಿ ಮುಖಂಡ ಶರದ್ ಪವಾರ್ ಅವರನ್ನು ಬುಧವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ, 'ಯುಪಿಎ ಎಂದರೇನು? ಯಾವ ಯುಪಿಎ ಕೂಡ ಇಲ್ಲ' ಎಂದು ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಅಸ್ತಿತ್ವದಲ್ಲಿಯೇ ಇಲ್ಲ ಎಂಬಂತೆ ಪ್ರತಿಕ್ರಿಯೆ ನೀಡಿದರು.
ಮಮತಾ ಹೇಳಿಕೆಗೆ ಕಿಡಿಕಾರಿದ ಕೆಸಿ ವೇಣುಗೋಪಾಲ್ ಅವರು "ಭಾರತೀಯ ರಾಜಕೀಯದ ವಾಸ್ತವತೆ ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್ ಇಲ್ಲದೆ ಯಾರಾದರೂ ಬಿಜೆಪಿಯನ್ನು ಸೋಲಿಸಬಹುದು ಎಂದು ಯೋಚಿಸುವುದು ಕೇವಲ ಕನಸು" ಎಂದು ಮಮತಾ ವಿರುದ್ದ ಹರಿಹಾಯ್ದಿದ್ದಾರೆ.
'ಶಾರುಖ್ ಖಾನ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ 'ಮುಂಬೈನಲ್ಲಿ ಮಮತಾ
ಮಮತಾ ಬ್ಯಾನರ್ಜಿ ಅವರು ಮಹಾರಾಷ್ಟ್ರಕ್ಕೆ ಭೇಟಿ ನೀಡುತ್ತಿದ್ದಾರೆ, ಅಲ್ಲಿ ಅವರು ವಿರೋಧ ಪಕ್ಷದ ನಾಯಕರೊಂದಿಗೆ ಬ್ಯಾಕ್ ಟು ಬ್ಯಾಕ್ ಸಭೆಗಳನ್ನು ನಡೆಸುತ್ತಿದ್ದಾರೆ. ಮುಂಬೈನಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಾಯಕ ಶರದ್ ಪವಾರ್ ಅವರನ್ನು ಭೇಟಿಯಾದ ನಂತರ ಅವರು "ಈಗ ಯಾವ ಯುಪಿಎ ಇಲ್ಲ" ಎಂದು ನಿಖರವಾಗಿ ಹೇಳಿದರು. ಈ ಹೇಳಿಕೆ ಕಾಂಗ್ರೆಸ್ ಪಾಳೆಯದಲ್ಲಿ ಕೆಂಗೆಣ್ಣಿಗೆ ಗುರಿಯಾಗಿದೆ.
ಜೊತೆಗೆ "ಕಾಂಗ್ರೆಸ್ ಬಂಗಾಳದಲ್ಲಿ ಸ್ಪರ್ಧಿಸುತ್ತಿದ್ದರೆ, ನಾನು ಗೋವಾದಲ್ಲಿ ಏಕೆ ಸ್ಪರ್ಧೆ ಮಾಡಬಾರದು?" ಎಂದು ಮುಂಬೈನಲ್ಲಿ ನಾಗರಿಕ ಸಮಾಜದ ಸದಸ್ಯರೊಂದಿಗೆ ಸಂವಾದದಲ್ಲಿ ಮಮತಾ ಬ್ಯಾನರ್ಜಿ ಹೇಳಿದರು. ಬಿಜೆಪಿ ವಿರುದ್ಧ ಹೋರಾಡುವುದು ಮುಖ್ಯ, ಇಲ್ಲದಿದ್ದರೆ ಅವರು ನಿಮ್ಮನ್ನು ಬೌಲ್ ಔಟ್ ಮಾಡುತ್ತಾರೆ. "ರಾಜಕೀಯವಾಗಿ ಬಿಜೆಪಿಯನ್ನು ಈ ದೇಶದಿಂದ ಹೊರಗಿಡಬೇಕೆಂದು ನಾನು ಬಯಸುತ್ತೇನೆ. ಎಲ್ಲಾ ಪ್ರಾದೇಶಿಕ ಪಕ್ಷಗಳು ಒಟ್ಟಾಗಿದ್ದರೆ ಬಿಜೆಪಿಯನ್ನು ಸೋಲಿಸುವುದು ಸುಲಭ. ರಾಜ್ಯದಲ್ಲಿ ಪರಿಸ್ಥಿತಿ ಚೆನ್ನಾಗಿದ್ದರೂ ನಾನು ಬಂಗಾಳದಿಂದ ಹೊರನಡೆಯಬೇಕಾಯಿತು. ಇದರಿಂದ ಇತರರು ಸಹ ಹೊರಗೆ ಹೋಗುತ್ತಾರೆ ಮತ್ತು ಇದಕ್ಕೆ ಕಠಿಣ ಸ್ಪರ್ಧೆ ನೀಡಬೇಕು"ಎಂದು ಅವರು ಹೇಳಿದರು. ಬುಧವಾರ, ಟಿಎಂಸಿ ವರಿಷ್ಠರು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿಯಾದರು. ಮಂಗಳವಾರ ಅವರು ಶಿವಸೇನೆ ನಾಯಕರಾದ ಆದಿತ್ಯ ಠಾಕ್ರೆ ಮತ್ತು ಸಂಜಯ್ ರಾವತ್ ಅವರನ್ನು ಭೇಟಿಯಾದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಇಂದಿನ ಸನ್ನಿವೇಶದಲ್ಲಿ ಸಮಾನ ಮನಸ್ಕ ಶಕ್ತಿಗಳು ರಾಷ್ಟ್ರಮಟ್ಟದಲ್ಲಿ ಒಂದುಗೂಡಬೇಕು ಮತ್ತು ಸಾಮೂಹಿಕ ನಾಯಕತ್ವ ರಚಿಸಬೇಕು. ಕಾಂಗ್ರೆಸ್ ಇರಲಿ, ಅಥವಾ ಇತರೆ ಯಾವುದೇ ಪಕ್ಷ ಇರಲಿ. ಬಿಜೆಪಿ ವಿರುದ್ಧ ಯಾರೇ ಇದ್ದರೂ ಜತೆಗೆ ಬಂದರೆ ಒಟ್ಟಿಗೆ ಸಾಗುತ್ತೇವೆ ಎಂದು ಹೇಳಿದರು. 'ಕೇಂದ್ರದ ನಾಯಕತ್ವಕ್ಕೆ ಪ್ರಬಲ ಪರ್ಯಾಯವನ್ನು ನಾವು ಒದಗಿಸಬೇಕಿದೆ. ನಮ್ಮ ಆಲೋಚನೆ ಈ ದಿನಕ್ಕೆ ಮಾತ್ರ ಇಲ್ಲ. ಆದರೆ ಚುನಾವಣೆವರೆಗೆ ಇದನ್ನು ಸ್ಥಾಪಿಸಬೇಕು. ಈ ಉದ್ದೇಶದಿಂದಲೇ ಮಮತಾ ಅವರು ಇಲ್ಲಿಗೆ ಬಂದಿದ್ದಾರೆ. ನಮ್ಮೆಲ್ಲರ ಜತೆಗೆ ಸಕಾರಾತ್ಮಕ ಮಾತುಕತೆ ನಡೆದಿದೆ' ಎಂದು ಪವಾರ್ ತಿಳಿಸಿದರು. ಕಾಂಗ್ರೆಸ್ ಈ ಗುಂಪಿನ ಭಾಗವಾಗಲಿದೆಯೇ ಎಂಬ ಪ್ರಶ್ನೆಗೆ ಪವಾರ್, 'ಅದು ಕಾಂಗ್ರೆಸ್ ಇರಲಿ ಅಥವಾ ಬೇರೆ ಯಾವುದೇ ಪಕ್ಷ ಇರಲಿ. ಬಿಜೆಪಿ ವಿರುದ್ಧ ಯಾರು ಇದ್ದಾರೆ ಎನ್ನುವುದು ನಮಗೆ ಮುಖ್ಯ. ಅವರು ಜತೆಯಾಗಿ ಬಂದರೆ ಅವರನ್ನು ಸ್ವಾಗತಿಸುತ್ತೇವೆ' ಎಂದರು.