ದೀಪಿಕಾ ಪಡುಕೋಣೆ, ಡ್ರಗ್ಸ್ ಮತ್ತು ಜೆಎನ್ಯು ಪ್ರತಿಭಟನೆ: ವಿವಾದದ ಹೊಸ ಬೆಸುಗೆ
ನವದೆಹಲಿ, ಸೆಪ್ಟೆಂಬರ್ 23: ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಕೇಳಿಬಂದಿರುವುದು ತೀವ್ರ ಸಂಚಲನ ಮೂಡಿಸಿದೆ. ಬಾಲಿವುಡ್ಗೆ ಆಘಾತ ನೀಡಿರುವ ಡ್ರಗ್ಸ್ ಜಾಲದ ತನಿಖೆ ನಡೆಸುತ್ತಿರುವ ಎನ್ಸಿಬಿ ಶೀಘ್ರದಲ್ಲಿಯೇ ದೀಪಿಕಾ ಪಡುಕೋಣೆ ಮತ್ತು ಅವರ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಅವರಿಗೆ ಸಮನ್ಸ್ ನೀಡುವ ಸಾಧ್ಯತೆ ಇದೆ.
ದೀಪಿಕಾ ಒಡುಕೋಣೆ ಹಾಗೂ ಅವರ ಮ್ಯಾನೇಜರ್ ಮಾತ್ರವಲ್ಲದೆ, ಸಾರಾ ಅಲಿ ಖಾನ್, ರಕೂಲ್ ಪ್ರೀತ್ ಸಿಂಗ್, ಸಿಮೋನ್ ಖಂಬಟ್ಟಾ ಅವರ ವಿರುದ್ಧವೂ ದೆಹಲಿಯ ಎನ್ಸಿಬಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈ ವಾರ ವಿಚಾರಣೆಗೆ ಕರೆಸಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಜತೆಗೆ ಮತ್ತಷ್ಟು ನಟ, ನಟಿಯರ ಹೆಸರು ಕೂಡ ಥಳಕು ಹಾಕಿಕೊಳ್ಳುತ್ತಿದೆ.
ದೀಪಿಕಾ ಪಡುಕೋಣೆ ಸಿನಿಮಾಗಳಿಗೆ ಬಿಜೆಪಿ ಬಹಿಷ್ಕಾರ, ಯಾಕೆ ಗೊತ್ತಾ?
ದೀಪಕಾ ಪಡುಕೋಣೆ ಮತ್ತು ಕರಿಷ್ಮಾ ನಡುವೆ ನಡೆದಿದ್ದು ಎನ್ನಲಾದ ವಾಟ್ಸಾಪ್ ಚಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ನಡುವೆ ದೀಪಿಕಾ ಯಾರ ಕೈಗೂ ಸಿಗದೆ ಗೋವಾಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ದೀಪಿಕಾ ಹೆಸರು ಇಲ್ಲಿ ಕೇಳಿಬಂದಿರುವುದು ಹೊಸ ಆಯಾಮ ಸೃಷ್ಟಿಸಿದೆ. ಏಕೆಂದರೆ ವರ್ಷದ ಆರಂಭದಲ್ಲಿ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ನಡೆಯುತ್ತಿದ್ದ ಪ್ರತಿಭಟನೆಗೆ ದೀಪಿಕಾ ಬೆಂಬಲ ಸೂಚಿಸಿದ್ದು ದೊಡ್ಡ ಪರ-ವಿವಾದದ ಚರ್ಚೆಗೆ ಗ್ರಾಸವಾಗಿತ್ತು. ಮುಂದೆ ಓದಿ...
ನಶೆಯಲ್ಲಿಯೇ ಹೋಗಿದ್ದರು
ಈಗ ಆ ಘಟನೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಜೆಎನ್ಯುದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೂ ದೀಪಿಕಾ ಪಡುಕೋಣೆಗೆ ಬೇರೆ ನಂಟು ಇದೆ. ಅದು ಮಾದಕವಸ್ತುವಿನ ಜಾಲಕ್ಕೆ ಸಂಬಂಧಿಸಿದ್ದು ಎಂದು ಆರೋಪಿಸಲಾಗುತ್ತಿದೆ. ಅಂದು ದೀಪಿಕಾ ಪಡುಕೋಣೆ ಡ್ರಗ್ಸ್ ಸೇವಿಸಿಯೇ ಅಲ್ಲಿಗೆ ಬಂದಿದ್ದರು. ಅಂದು ಅವರು ನಶೆಯಲ್ಲಿಯೇ ಇದ್ದರು ಎಂದು ಬಿಜೆಪಿ ನಾಯಕ ಮನೋಜ್ ತಿವಾರಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
ಬೆಂಬಲ ಸೂಚಿಸಿದ್ದ ದೀಪಿಕಾ
ಜೆಎನ್ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣವನ್ನು ವಿರೋಧಿಸಿ ಜನವರಿಯಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ತೆರಳಿ ದೀಪಿಕಾ ಪಡುಕೋಣೆ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಹತ್ತು ನಿಮಿಷ ಅಲ್ಲಿದ್ದ ದೀಪಿಕಾ, ವಿದ್ಯಾರ್ಥಿಗಳ ಜತೆಗೆ ಮಾತನಾಡಿ ಅವರಿಗೆ ಬೆಂಬಲ ಸೂಚಿಸಿದ್ದರು. ಈ ಹಿಂಸಾಚಾರ ತಮಗೆ ನೋವನ್ನುಂಟು ಮಾಡಿತ್ತು. ಅದು ತೀರಾ ಸಾಮಾನ್ಯ ಸಂಗತಿ ಎಂಬಂತೆ ಆಗದಿರಲಿ ಎಂದು ಪ್ರತಿಭಟನೆಯ ಸ್ವರೂಪವಾಗಿ ಅವರನ್ನು ಬೆಂಬಲಿಸಿದೆ ಎಂದು ದೀಪಿಕಾ ಹೇಳಿಕೊಂಡಿದ್ದರು.
ತುಕ್ಡೆ ತುಕ್ಡೆ ಗ್ಯಾಂಗ್ ಜತೆ ನಿಂತ ದೀಪಿಕಾ ಪಡುಕೋಣೆ: ಸ್ಮೃತಿ ಇರಾನಿ ಕಿಡಿ
ಛಪಾಕ್ಗೆ ಬಹಿಷ್ಕಾರ
ದೀಪಿಕಾ ಈ ಗುಂಪಿನಲ್ಲಿ ಗುರುತಿಸಿಕೊಂಡಿದ್ದು ಬಲಪಂಥೀಯ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. 'ತುಕ್ಡೆ ತುಕ್ಡೆ ಗ್ಯಾಂಗ್' ಪರ ದೀಪಿಕಾ ನಿಂತಿದ್ದಾರೆ. ದೇಶದ್ರೋಹಿಗಳಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಕಿಡಿಕಾರಿದ್ದರು. ಈ ಘಟನೆ ನಡೆದು ಕೆಲವೇ ದಿನಗಳಲ್ಲಿ ದೀಪಿಕಾ ಅಭಿನಯದ 'ಛಪಾಕ್' ಚಿತ್ರ ತೆರೆಕಾಣುವುದರಲ್ಲಿತ್ತು. ದೀಪಿಕಾ ನಡೆ ಅವರ ಸಿನಿಮಾ ಪ್ರಚಾರದ ಉದ್ದೇಶ ಎಂದು ಟೀಕಿಸಲಾಗಿತ್ತು. ಈ ಸಿನಿಮಾವನ್ನು ಬಹಿಷ್ಕರಿಸುವಂತೆ ದೇಶದ ಅನೇಕ ಕಡೆ ವಿವಿಧ ಸಂಘಟನೆಗಳು ಕರೆ ನೀಡಿದ್ದವು. 'ಛಪಾಕ್' ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದರೂ, ಜೆಎನ್ಯು ವಿವಾದದಿಂದಾಗಿ ಸಿನಿಮಾ ಬಾಕ್ಸಾಫೀಸ್ನಲ್ಲಿ ಉತ್ತಮ ಗಳಿಕೆ ಕಾಣಲು ಸಾಧ್ಯವಾಗಲಿಲ್ಲ.
ದೀಪಿಕಾ ರಾಜಕೀಯ ಒಲವು
'ದೀಪಿಕಾ ಪಡುಕೋಣೆ ಅವರ ರಾಜಕೀಯ ನಂಟು ಏನೆಂಬುದು ಈ ಹಿಂದೆಯೇ ನನಗೆ ತಿಳಿದಿತ್ತು. ಸೈದ್ಧಾಂತಿಕವಾಗಿ ಕಣ್ಣಿಗೆ ಕಣ್ಣಿಟ್ಟು ನೋಡದೆ, ಇತರೆ ಯುವತಿಯರ ಮೇಲೆ ಹಲ್ಲೆ ನಡೆಸುವ ಜನರ ಜತೆ ನಿಂತಿರುವ ಅವರ ಹಕ್ಕನ್ನು ನಾನು ನಿರಾಕರಿಸುವುದಿಲ್ಲ. ಅದು ಅವರ ಸ್ವಾತಂತ್ರ್ಯ' ಎಂದು ಆ ಸಮಯದಲ್ಲಿ ಸಚಿವೆ ಸ್ಮೃತಿ ಇರಾನಿ ಲೇವಡಿ ಮಾಡಿದ್ದರು.
ಡ್ರಗ್ಸ್ ಪ್ರಕರಣದಲ್ಲಿ ದೀಪಿಕಾ ಪಡುಕೋಣೆ ಹೆಸರು ಬರಲು ಕಾರಣವೇನು?
'ಅವರು ತಮ್ಮ ರಾಜಕೀಯ ಒಲವನ್ನು 2011ರಲ್ಲಿಯೇ ಪ್ರದರ್ಶಿಸಿದ್ದರು. ಆಗ ಅವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು. ಭಾರತವನ್ನು ತುಂಡು ತುಂಡು ಮಾಡುತ್ತೇವೆ ಎಂದಿದ್ದ ಜನರೊಂದಿಗೆ ನಿಲ್ಲುವುದು ಅವರ ಹಕ್ಕು. ಇದರಿಂದ ಜನರು ಅಚ್ಚರಿಯಾಗಿದ್ದರೆ ಅವರಿಗೆ ಅದು ಅರಿವಿಲ್ಲ ಎಂದೇ ಅರ್ಥ. ಅವರನ್ನು ಮೆಚ್ಚಿಕೊಂಡಿದ್ದ ಅನೇಕರಿಗೆ ಈಗ ಆಕೆಯ ನೈಜ ನಿಲುವು ಅರ್ಥವಾಗಿದೆ' ಎಂದು ಸ್ಮೃತಿ ಹೇಳಿದ್ದರು.
ಹರಿದಾಡುತ್ತಿರುವ ಫೋಟೊಗಳು
ಡ್ರಗ್ಸ್ ಪ್ರಕರಣದಲ್ಲಿ ದೀಪಿಕಾ ಹೆಸರು ಕೇಳಿಬರುತ್ತಿದ್ದಂತೆಯೇ ಜೆಎನ್ಯು ಪ್ರತಿಭಟನೆಯಲ್ಲಿ ಅವರು ಭಾಗಿಯಾಗಿದ್ದ ಚಿತ್ರಗಳು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಹಾಗೂ ಇತರರ ಜತೆ ದೀಪಿಕಾ ಕಾಣಿಸಿಕೊಂಡಿದ್ದರು. ಹಲ್ಲೆಗೊಳಗಾಗಿದ್ದ ಆಯಿಷಿ ಘೋಷ್ಗೆ ಕೈಮುಗಿದಿದ್ದರು. ಈಗ ಇದೆಲ್ಲವೂ ಅವರ ವಿರೋಧಿಗಳಿಗೆ ಪ್ರಬಲ ಅಸ್ತ್ರವಾಗಿ ಸಿಕ್ಕಿದೆ. ಡ್ರಗ್ಸ್ ದಂಧೆಗೂ ಜೆಎನ್ಯು ಪ್ರತಿಭಟನೆಗೂ ಸಂಬಂಧವಿದೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿವೆ. 'ಮಾಲ್ ಹೈ ಕ್ಯಾ' ಎಂದು ದೀಪಿಕಾ ಕೇಳಿದ್ದಾರೆ ಎನ್ನಲಾದ ಪದಗಳು ವೈರಲ್ ಆಗಿವೆ.