ಇನ್ನು ಮುಂದೆ ರೈಲ್ವೇ ನಿಲ್ದಾಣದಲ್ಲೂ ಜನೌಷಧಿ ಕೇಂದ್ರ -ಸುರೇಶ್ ಪ್ರಭು
ನವದೆಹಲಿ, ಜೂನ್ 13: ಇನ್ನು ಮುಂದೆ ರೈಲ್ವೇ ನಿಲ್ದಾಣದಲ್ಲಿ ಜನೌಷಧಿಯೂ ಸಿಗಲಿದೆ. ರೈಲ್ವೇ ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಫಾರ್ಮಸೆಟುಕಲ್ ಸಚಿವ ಅನಂತ್ ಕುಮಾರ್ ನೀಡಿದ್ದ ಮನವಿಗೆ ರೈಲ್ವೇ ಸಚಿವ ಸುರೇಶ್ ಪ್ರಭು ಸ್ಪಂದಿಸಿದ್ದಾರೆ.
ಇಂದು ಅನಂತ್ ಕುಮಾರ್ ರಾಜ್ಯ ದರ್ಜೆ ಸಚಿವ ಮನ್ಸುಕ್ ಲಾಲ್ ಮಾಂಡವಿಯಾ ಜತೆ ರೈಲ್ವೇ ಸಚಿವ ಸುರೇಶ್ ಪ್ರಭು ಭೇಟಿಯಾಗಿ ರೈಲ್ವೇ ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರ ತೆರೆಯುವಂತೆ ಮನವಿ ಸಲ್ಲಿಸಿದ್ದರು. ಅನಂತ್ ಕುಮಾರ್ ಮನವಿಯ ಮೇರೆಗೆ ರೈಲ್ವೇ ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆಯಯುವ ನಿರ್ಧಾರವನ್ನು ಸುರೇಶ್ ಪ್ರಭು ತೆಗೆದುಕೊಂಡಿದ್ದಾರೆ.
ಭೇಟಿ ನಂತರ ಮಾತನಾಡಿದ ಅನಂತ್ ಕುಮಾರ್ "ನಾವು ರೈಲ್ವೇಯ ವಿಸ್ತರಿತ ಜಾಲವನ್ನು ಕಡಿಮೆ ಬೆಲೆಯ ಉತ್ತಮ ಗುಣಮಟ್ಟದ ಜನರಿಕ್ ಔಷಧಗಳನ್ನು ಸಾಮಾನ್ಯ ಜನರಿಗೆ ತಲುಪಿಸಲು ಬಳಸಿಕೊಳ್ಳಲಿದ್ದೇವೆ," ಹೇಳಿದ್ದಾರೆ.
ಈಗಾಗಲೇ ಪ್ರಧಾನ್ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನ (ಪಿಎಂಬಿಜೆಪಿ) ಯೋಜನೆಯಡಿ ದೇಶದಾದ್ಯಂತ 450 ಜಿಲ್ಲೆಗಳಲ್ಲಿ 1600 ಜನೌಷಧಿ ಕೇಂದ್ರಗಳು ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಕೇಂದ್ರಗಳು ಆರಂಭವಾಗಲಿವೆ.