ಇರಾನ್ ನಿಂದ ಮತ್ತೆ ತೈಲ ಖರೀದಿ ಆರಂಭಿಸಬೇಕೆ ಎಂಬ ನಿರ್ಧಾರ ಮೇ 23ರ ನಂತರ
ನವದೆಹಲಿ, ಮೇ 14: ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಬೇಕೋ ಬೇಡವೋ ಎಂಬ ಬಗ್ಗೆ ಲೋಕಸಭೆ ಚುನಾವಣೆ ನಂತರ ನಿರ್ಧಾರ ಮಾಡುವುದಾಗಿ ಸರಕಾರದ ಮೂಲಗಳು ತಿಳಿಸಿವೆ. ಇದೇ ತಿಂಗಳ ಅಂದರೆ ಮೇ ಇಪ್ಪತ್ಮೂರನೇ ತಾರೀಕು ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟ ಆಗಲಿದೆ. ಆ ನಂತರ ಭಾರತದ ಆರ್ಥಿಕ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಧರಿಸಲಾಗುತ್ತದೆ ಎನ್ನಲಾಗಿದೆ.
ಕೊಡು-ಕೊಳ್ಳುವ ವ್ಯವಹಾರದಲ್ಲಿ ಗೆದ್ದ ಅಮೆರಿಕ; ಅಡಕತ್ತರಿಯಲ್ಲಿ ಸಿಕ್ಕಿದ ಇರಾನ್ ನ ಸಚಿವರು ಭಾರತಕ್ಕೆ
ಇರಾನ್ ನ ವಿದೇಶಾಂಗ ಸಚಿವ ಜಾವದ್ ಝರೀಫ್ ಅವರು ಮಂಗಳವಾರ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜತೆಗೆ ಈ ಸಂಬಂಧವಾಗಿ ಮಾತುಕತೆ ನಡೆಸಿದರು. ಮೇ ಒಂದನೇ ತಾರೀಕಿನಿಂದ ಭಾರತವು ಇರಾನ್ ನಿಂದ ಯಾವುದೇ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದೆ. ಅಮೆರಿಕವು ನೀಡಿದ್ದ ವಿನಾಯಿತಿಯನ್ನು ಮೇ ತಿಂಗಳಿಗೆ ನಿಲ್ಲಿಸಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಭಾರತದ ವಾಣಿಜ್ಯ ಹಾಗೂ ಆರ್ಥಿಕ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಇರಾನ್ ನಿಂದ ತೈಲ ಖರೀದಿ ಮಾಡಬೇಕೆ ಎಂಬುದನ್ನು ತೀರ್ಮಾನ ಮಾಡಲಾಗುವುದು. ಇಂಧನ ಭದ್ರತೆ, ಆರ್ಥಿಕ ಹಿತಾಸಕ್ತಿ ಮತ್ತಿತರ ಅಂಶಗಳು ಈ ನಿರ್ಧಾರದಲ್ಲಿ ಅಡಗಿವೆ ಎಂದು ಸರಕಾರದ ಮೂಲಗಳು ಮಾಹಿತಿ ನೀಡಿವೆ.