ಹಿಂದಿಯಲ್ಲೇ ಭಾಷಣ: ರಾಷ್ಟ್ರಪತಿ ಆದೇಶ ಹುಟ್ಟುಹಾಕಿದ ಚರ್ಚೆ
ಭಾರತದ ಪ್ರಾಂತೀಯ ಭಾಷೆಗಳನ್ನು ನುಂಗಿಹಾಕುತ್ತದೆ ಎಂಬುದಾಗಿ ಹಬ್ಬಿದ್ದ ಕೆಲವಾರು ಭೀತಿ ಈಗ ನಿಜವಾಗುವ ಕಾಲ ಬಂದಿದೆಯೇ ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ.
ನವದೆಹಲಿ, ಏಪ್ರಿಲ್ 18: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಲಾಖಾ ಅಧಿಕಾರಿಗಳು ಹಾಗೂ ಕೇಂದ್ರ ಸಚಿವರು ಇನ್ನು ಹಿಂದಿಯಲ್ಲೇ ಭಾಷಣ ಮಾಡಬೇಕೆಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ನಿರ್ದೇಶನ ನೀಡಿರುವುದು ಚಿಂತಕರ ಚಾವಡಿಯಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ರಾಷ್ಟ್ರಪತಿಯವರ ಸೂಚನೆಯನ್ನು ಡೈಲಿ ಒ ಅಂತರ್ಜಾಲ ವೆಬ್ ಸೈಟ್ ತನ್ನ ಅಂಕಣವೊಂದರಲ್ಲಿ ಪ್ರಶ್ನಿಸಿದ್ದು, ರಾಷ್ಟ್ರಪತಿಯವರು ಈ ಸೂಚನೆ ನೀಡುವುದಕ್ಕೂ ಮುನ್ನ ಭಾರತದ ಭಾಷಾ ವೈವಿಧ್ಯತೆಯತ್ತ ಒಮ್ಮೆ ಯೋಚಿಸಬೇಕಿತ್ತು ಎಂದು ಹೇಳಿದೆ. ಹೀಗೆ, ಕೆಲವಾರು ಅಂತರ್ಜಾಲ ಮಾಧ್ಯಮಗಳು ತಮ್ಮದೇ ಆದ ಯೋಚನಾ ಲಹರಿ ಹರಿಯಬಿಟ್ಟಿವೆ.
ಕೆಲವಾರು ಬುದ್ಧಿಜೀವಿಗಳು ಹಿಂದಿ ಭಾಷೆಯು ಕಣ್ಮುಚ್ಚಿ ಕಣ್ಣು ತೆರೆಯುವುದರೊಳಗೆ ಭಾರತದ ಪ್ರಾಂತೀಯ ಭಾಷೆಗಳನ್ನು ನುಂಗಿಹಾಕುತ್ತದೆ ಎಂಬುದಾಗಿ ಹಬ್ಬಿದ್ದ ಕೆಲವಾರು ಭೀತಿ ಈಗ ನಿಜವಾಗುವ ಕಾಲ ಬಂದಿದೆಯೇ ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ.
ಆದರೆ, ರಾಷ್ಟ್ರಪತಿಯವರ ಈ ಸೂಚನೆಯನ್ನು ತುಂಬಾ ಗೊಂದಲಮಯವಾಗಿಸಿಕೊಳ್ಳುವ ಅಗತ್ಯವಿಲ್ಲವೆಂದು ಕೆಲವರು ಸ್ಪಷ್ಟೀಕರಣ ನೀಡಿದ್ದಾರೆ. ಕೇಂದ್ರದ ಸಚಿವರು, ಅಧಿಕಾರಿಗಳಿಗೆ ಹಿಂದಿ ಬಂದರೆ ಮಾತ್ರ ಹಿಂದಿಯಲ್ಲಿ ಮಾತನಾಡಬೇಕೆಂದು ಸೂಚನೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅಲ್ಲದೆ, ಇದು ರಾಜ್ಯ ಸರ್ಕಾರಗಳಿಗೆ ಅನ್ವಯವಾಗುವುದಿಲ್ಲ ಎಂದೂ ತಿಳಿಸಿದ್ದಾರೆ.