ಗಲ್ಲು ಶಿಕ್ಷೆಗೀಡಾಗಿರುವ ನಿರ್ಭಯಾ ಹಂತಕರ ಮುಂದಿನ ದಾರಿಯೇನು?
ನವದೆಹಲಿ, ಜುಲೈ 09 : "ನನ್ನ ಮೇಲೆ ಅತ್ಯಾಚಾರ ಮಾಡಿದವರನ್ನು ಗಲ್ಲಿಗೇರಿಸಬೇಕು ಅಥವಾ ಜೀವಂತ ಸುಟ್ಟು ಹಾಕಬೇಕು" ಇದು 2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ 'ನಿರ್ಭಯಾ' ಮ್ಯಾಜಿಸ್ಟ್ರೇಟ್ ಎದಿರು ಹೇಳಿರುವ ಕಟ್ಟಕಡೆಯ ಮಾತು.
ಗಲ್ಲಿಗೇರಿಸುವುದಲ್ಲ, ಅವರನ್ನು ನಿಂತ ನಿಂತಲ್ಲೇ ಸುಟ್ಟು ಭಸ್ಮ ಮಾಡಬೇಕು ಎಂಬಂಥ ಆಕ್ರೋಶ ಇಡೀ ದೇಶದಲ್ಲಿ ಉಂಟಾಗಿತ್ತು. ನಿರ್ಭಯಾಳನ್ನು ಉಳಿಸಲು ಶತಾಯಗತಾಯ ಯತ್ನಿಸಿದ, ನುರಿತ ವೈದ್ಯರು ಕೂಡ ದಂಗಾಗಿ ಹೋಗುವಂತೆ ನಿರ್ಭಯಾಳ ಗುಪ್ತಾಂಗವನ್ನು, ಕರುಳನ್ನು ಬಗೆದು ಹಾಕಿದ್ದರು 6 ದುರುಳರು.
ನಿರ್ಭಯಾ ಕೇಸ್ : 3 ಅಪರಾಧಿಗಳಿಗೆ ಗಲ್ಲು ಶಿಕ್ಷೆ ಖಾಯಂ
ಹೀಗೆ ಘೋಷ ಹಲ್ಲೆ ನಡೆಸಿ ಆಕೆಯ ಸಾವಿಗೆ (2012ರ ಡಿಸೆಂಬರ್ 29, ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ) ಕಾರಣರಾದವರಿಗೆ ಸರ್ವೋಚ್ಚ ನ್ಯಾಯಾಲಯ ಯಾವುದೇ ಕರುಣೆಯನ್ನು ತೋರದೆ ಗಲ್ಲು ಶಿಕ್ಷೆಗೆ ಅಂಕಿತ ಹಾಕಿದೆ. ಈ ಐತಿಹಾಸಿಕ ತೀರ್ಪಿನಿಂದ ಇಡೀ ದೇಶದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ನಿರ್ಭಯಾಳ ಮೇಲೆ ಹಲ್ಲೆ ನಡೆಸಿದವರು
ರಾಮ್ ಸಿಂಗ್ (ಈತ ತಿಹಾರ್ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡ), ಪವನ್ ಗುಪ್ತಾ (31), ವಿನಯ್ ಶರ್ಮಾ (25) ಮತ್ತು ಮುಕೇಶ್ ಸಿಂಗ್ (31), ಅಕ್ಷಯ್ ಠಾಕೂರ್. ಮತ್ತೊಬ್ಬ ಆರೋಪಿ 17 ವರ್ಷ ಮೊಹಮ್ಮದ್ ಅಫ್ರೋಜ್ ನನ್ನು ಬಾಲಾಪರಾಧಿ ಎಂದು ಪರಿಗಣಿಸಿ, ಮೂರು ವರ್ಷ ಜೈಲು ಶಿಕ್ಷೆ ಅನುಭವಿಸುವಂತೆ ಮಾಡಿ ಬಿಡುಗಡೆ ಮಾಡಲಾಗಿದೆ.
ಕ್ಯೂರೆಟೀವ್ ಅರ್ಜಿ
"ಮಾಧ್ಯಮಗಳ ಒತ್ತಾಯಕ್ಕೆ ಮಣಿದು ಸರ್ವೋಚ್ಚ ನ್ಯಾಯಾಲಯ, ನಿರ್ಭಯಾ ಹಂತಕರ ರಿವ್ಯೂ ಅರ್ಜಿಯನ್ನು ತಿರಸ್ಕರಿಸಿದೆ" ಎಂದು ಆರೋಪಿಗಳ ಪರ ವಕೀಲರು ಪ್ರತಿಕ್ರಿಯಿಸಿದ್ದಾರೆ. ಆರೋಪಿಗಳಿಗೆ ಬದುಕುವ ಸಹಜ ನ್ಯಾಯವನ್ನು ತಿರಸ್ಕರಿಸಲಾಗಿರುವುದರಿಂದ ತಾವು ಸರ್ವೋಚ್ಚ ನ್ಯಾಯಾಲಯದ ಮುಂದೆ ಕ್ಯೂರೆಟೀವ್ ಅರ್ಜಿ ಸಲ್ಲಿಸುವುದಾಗಿ ವಕೀಲರು ಹೇಳಿದ್ದಾರೆ.
ನಿರ್ಭಯಾ ದೌರ್ಜನ್ಯಕ್ಕೆ 4 ವರ್ಷ, ಎಲ್ಲಿದೆಯೋ ನ್ಯಾಯ?
ಏನಿದು ಕ್ಯೂರೆಟೀವ್ ಅರ್ಜಿ?
ಯಾವುದೇ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ಸಹಜ ನ್ಯಾಯದಾನವನ್ನು ನಿರಾಕರಿಸಲಾಗಿದೆ ಎಂದು ಕಂಡುಬಂದಲ್ಲಿ, ಅದನ್ನು ಕ್ಯೂರೇಟ್ ಮಾಡಲೆಂದು, ಅಂದರೆ ತೀರ್ಪನ್ನು ಸರಿ ಮಾಡಲೆಂದು ಕ್ಯೂರೆಟೀವ್ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ, ವಕೀಲರು ನ್ಯಾಯದಾನ ನಿರಾಕರಿಸಲಾಗಿದೆ ಎಂಬುದನ್ನು ನಿಖರವಾಗಿ ತಿಳಿಸಬೇಕಾಗುತ್ತದೆ ಮತ್ತು ಆ ಅರ್ಜಿಗೆ ಹಿರಿಯ ವಕೀಲರಿಂದ ಸಹಿ ಹಾಕಿಸಿಕೊಳ್ಳಬೇಕಾಗುತ್ತದೆ. ಆ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದ ಮೂವರು ಸೀನಿಯರ್ ನ್ಯಾಯಮೂರ್ತಿಗಳು ಮತ್ತು ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಕಳುಹಿಸಲಾಗುತ್ತದೆ.
ಕ್ಷಮಾದಾನಕ್ಕೆ ಅರ್ಜಿ
ಸರ್ವೋಚ್ಚ ನ್ಯಾಯಾಲಯದ ದಾರಿಗಳೆಲ್ಲ ಬಂದ್ ಆಗಿರುವುದರಿಂದ ಈಗ ಈ ನಾಲ್ವರಿಗೆ ಇರುವ ಒಂದೇ ಒಂದು ದಾರಿಯೆಂದರೆ, ಭಾರತದ ರಾಷ್ಟ್ರಪತಿಯನ್ನು ಕರುಣೆ ತೋರಿ ಎಂದು ಅರ್ಜಿ ಸಲ್ಲಿಸುವುದು. ರಾಷ್ಟ್ರಪತಿಗಳು ಕರುಣೆ ತೋರಿ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಆದೇಶಿಸಿದರೆ, ಸುಪ್ರೀಂ ಕೋರ್ಟ್ ಮತ್ತೆ ವಿಚಾರಣೆ ನಡೆಸಿ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಬಹುದು.
'ನಿರ್ಭಯಾ 13 ದಿನ ಬದುಕುಳಿದಿದ್ದೇ ದೊಡ್ಡ ಪವಾಡ'!
ಅದು ಸಾಧ್ಯವೆ?
ಈ ಪ್ರಕರಣವನ್ನು ಅಪರೂಪದಲ್ಲಿ ಅಪರೂಪದ ಪ್ರಕರಣವೆಂದು ತೀರ್ಮಾನಿಸಿ, ನಿರ್ಭಯಾಳನ್ನು ಅಮಾನುಷವಾಗಿ ಅತ್ಯಾಚಾರವೆಸಗಿದ್ದಲ್ಲದೆ, ಬೆತ್ತಲಾಗಿಸಿ ಓಡುತ್ತಿದ್ದ ಬಸ್ಸಿನಿಂದಲೇ ಬಿಸಾಕಿ ಹೋಗಿದ್ದ ದುರುಳರಿಗೆ ನೀಡಲಾಗಿರುವ ಗಲ್ಲು ಶಿಕ್ಷೆಯನ್ನು ಇಳಿಸುವ ಸಾಧ್ಯತೆ ಕ್ಷೀಣಿಸಿದೆ. ನಿಮ್ಮ ಅಭಿಮತವೇನು? ನಿರ್ಭಯಾ ಅತ್ಯಾಚಾರಿಗಳಿಗೆ ಕ್ಷಮಾದಾನ ನೀಡಬೇಕಾ?