ಕೊರೊನಾ ವೈರಸ್ ಲಸಿಕೆ ವೈಫಲ್ಯ: ಸೆರಮ್ ಸಂಸ್ಥೆಗೆ ಡಿಸಿಜಿಐ ನೋಟಿಸ್
ನವದೆಹಲಿ, ಸೆಪ್ಟೆಂಬರ್ 9: ಕೇಂದ್ರ ಔಷಧ ನಿಯಂತ್ರಣ ನಿಯಂತ್ರಕವು 'ಕೋವಿಶೀಲ್ಡ್ ಲಸಿಕೆ' ಉತ್ಪಾದಿಸುತ್ತಿರುವ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ (ಎಸ್ಐಐ) ಬುಧವಾರ ಶೋಕಾಸ್ ನೋಟಿಸ್ ನೀಡಿದೆ.
ಕೋವಿಡ್ 19ರ ವಿರುದ್ಧ ಅಭಿವೃದ್ಧಿಪಡಿಸಿದ ಆಕ್ಸ್ಫರ್ಡ್ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ಔಷಧ ದಿಗ್ಗಜ ಆಸ್ಟ್ರಾಜೆನಿಕಾ ಬೇರೆ ದೇಶಗಳಲ್ಲಿ ತಡೆಹಿಡಿದಿದೆ ಎಂಬ ಬಗ್ಗೆ ಮಾಹಿತಿ ನೀಡದ ಹಾಗೂ ಗಂಭೀರ ಅಡ್ಡ ಪರಿಣಾಮ ಉಂಟಾದ ವರದಿಗಳ ವಿಶ್ಲೇಷಣೆಯನ್ನು ತನಗೆ ಸಲ್ಲಿಸದ ಕಾರಣಕ್ಕಾಗಿ ಈ ನೋಟಿಸ್ ಜಾರಿ ಮಾಡಿದೆ.
ಭಾರತದಲ್ಲಿ ಕೊವಿಡ್-19 ಲಸಿಕೆ ಸಂಶೋಧನೆ ಯಾವ ಹಂತದಲ್ಲಿದೆ?
ಅತ್ಯಂತ ಭರವಸೆ ಮೂಡಿಸಿದ್ದ ಆಕ್ಸ್ಫರ್ಡ್ ಲಸಿಕೆಯ ಮಾನವ ಪ್ರಯೋಗಗಳಲ್ಲಿ ಅಡ್ಡಪರಿಣಾಮ ಉಂಟಾದ ವರದಿ ಬಂದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸುತ್ತಿರುವ ಈ ಲಸಿಕೆಯ ಮಾನವ ಪ್ರಯೋಗಕ್ಕೆ ಬ್ರಿಟನ್ ತಡೆ ನೀಡಿದೆ. ಆಕ್ಸ್ಫರ್ಡ್ನ ಈ ಲಸಿಕೆಯನ್ನು ಭಾರತದ ಸೆರಮ್ ಸಂಸ್ಥೆಯು ಆಸ್ಟ್ರಾಜೆನಿಕಾದ ಸಹಯೋಗದೊಂದಿಗೆ ಭಾರತದಲ್ಲಿ ತಯಾರಿಸುತ್ತಿದೆ. ಮುಂದೆ ಓದಿ.
ಅನುಮತಿ ಅಮಾನತು ಮಾಡಿರಲಿಲ್ಲ
ರೋಗಿಯ ಸುರಕ್ಷತೆಯ ಬಗ್ಗೆ ಯಾವುದೇ ಖಾತರಿ ಬರುವವರೆಗೂ ದೇಶದಲ್ಲಿ ಲಸಿಕೆಯ ಎರಡು ಮತ್ತು ಮೂರನೇ ಹಂತದ ಪ್ರಯೋಗಕ್ಕೆ ನೀಡಲಾಗಿದ್ದ ಅನುಮತಿಯನ್ನು ಏಕೆ ಅಮಾನತು ಮಾಡಿರಲಿಲ್ಲ ಎಂದು ಎಸ್ಐಐಗೆ ಶೋಕಾಸ್ ನೋಟಿಸ್ ನೀಡಿರುವುದಾಗಿ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ (ಡಿಸಿಜಿಐ) ಡಾ. ವಿ.ಜಿ. ಸೋಮಾನಿ ತಿಳಿಸಿದ್ದಾರೆ.
ಏಕೆ ಮಾಹಿತಿ ನೀಡಿಲ್ಲ?
ಆಸ್ಟ್ರಾಜೆನಿಕಾವು ಬೇರೆ ದೇಶಗಳಲ್ಲಿ ನಡೆಸುತ್ತಿದ್ದ ಕ್ಲಿನಿಕಲ್ ಪ್ರಯೋಗಗಳನ್ನು ತಡೆಹಿಡಿದಿರುವ ಬಗ್ಗೆ ಕೇಂದ್ರ ಪರವಾನಗಿ ಪ್ರಾಧಿಕಾರಕ್ಕೆ ಪುಣೆಯಲ್ಲಿನ ಸೆರಮ್ ಸಂಸ್ಥೆ ಇದುವರೆಗೂ ಮಾಹಿತಿ ನೀಡಿಲ್ಲ. ಅಲ್ಲದೆ, ಸುರಕ್ಷತೆಯ ಕಾರಣದ ಹಿನ್ನೆಲೆಯಲ್ಲಿ ದೇಶದಲ್ಲಿ ಲಸಿಕೆಯ ಎರಡು ಮತ್ತು ಮೂರನೇ ಹಂತದ ಪ್ರಯೋಗ ಮುಂದುವರಿಸುವ ಮುನ್ನ, ಲಸಿಕೆಯ ಪರಿಣಾಮದಿಂದ ಉಂಟಾದ ಹಾನಿಯ ವಿಶ್ಲೇಷಣೆಯನ್ನು ಏಕೆ ಸಲ್ಲಿಸಿಲ್ಲ ಎಂದು ಸೆರಮ್ ಸಂಸ್ಥೆಯನ್ನು ಪ್ರಶ್ನಿಸಲಾಗಿದೆ.
ಪ್ರಯೋಗ ತಡೆ ಹಿಡಿಯಬೇಕಿತ್ತು
ಲಸಿಕೆಯನ್ನು ಪ್ರಯೋಗಿಸುತ್ತಿರುವ ವ್ಯಕ್ತಿಯ ಸುರಕ್ಷತೆಯು ಸಂಪೂರ್ಣವಾಗಿ ಖಾತರಿಯಾಗುವವರೆಗೂ ಮುಂದಿನ ಹಂತದ ಪ್ರಯೋಗವನ್ನು ತಡೆಹಿಡಿಯಬೇಕಿತ್ತು. ಆದರೆ ಆಗಸ್ಟ್ 2ರಂದು ನೀಡಲಾದ ಅನುಮತಿಯನ್ನು ತಡೆಹಿಡಿಯುವ ಗೋಜಿಗೆ ಹೋಗಿಲ್ಲ. ಹೀಗಾಗಿ ನ್ಯೂ ಡ್ರಗ್ಸ್ ಮತ್ತು ಕ್ಲಿನಿಕಲ್ ಟ್ರಯಲ್ ನಿಯಮ 2019 ಅಡಿಯ ರೂಲ್ 30ರ ಅಡಿ ನೋಟಿಸ್ ನೀಡಲಾಗುತ್ತಿದೆ ಎಂದು ನೋಟಿಸ್ನಲ್ಲಿ ಹೇಳಲಾಗಿದೆ.
Recommended Video
ಕಠಿಣ ಕ್ರಮದ ಎಚ್ಚರಿಕೆ
ಅಮೆರಿಕ, ಬ್ರಿಟನ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ನಡೆಸಲಾಗುತ್ತಿದ್ದ ಕ್ಲಿನಿಕಲ್ ಪ್ರಯೋಗಗಳನ್ನು ತಡೆಹಿಡಿಯಲಾಗಿದೆ. ಆದರೆ ಭಾರತದಲ್ಲಿ ಪ್ರಯೋಗ ಮುಂದುವರಿಸಲಾಗಿದೆ. ಇದಕ್ಕೆ ಸೂಕ್ತ ವಿವರಣೆಯನ್ನು ನೀಡದೆ ಹೋದರೆ ನಿಮ್ಮ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶೋಕಾಸ್ ನೋಟಿಸ್ನಲ್ಲಿ ಎಚ್ಚರಿಕೆ ನೀಡಲಾಗಿದೆ.