ಶರಣಾಗುತ್ತಾನಂತೆ ದಾವೂದ್ ಇಬ್ರಾಹಿಂ, ಆದರೆ ಷರತ್ತುಗಳು ಅನ್ವಯ!
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾರತಕ್ಕೆ ವಾಪಸಾಗುವ ಇಚ್ಛೆ ವ್ಯಕ್ತಪಡಿಸಿದ್ದಾನೆ. ಅರ್ಥಾತ್ ಶರಣಾಗುವ ಮಾತನಾಡಿದ್ದಾನೆ. ಇಂಥದ್ದೊಂದು ಸುದ್ದಿ ಹರಿದಾಡುತ್ತಿರುವುದು ಇದೇ ಮೊದಲೇನಲ್ಲ. ಆದರೆ ಆತನದು ಕೆಲವು ಪೂರ್ವ ಷರತ್ತುಗಳಿವೆ ಎಂಬುದನ್ನು ಕ್ರಿಮಿನಲ್ ವಕೀಲರಾದ ಶ್ಯಾಮ್ ಕೇಸ್ವಾನಿ ತಿಳಿಸಿದ್ದಾರೆ. ಆದರೆ ಆತನ ಕೆಲವು ಷರತ್ತುಗಳು ಕೇಂದ್ರ ಸರಕಾರ ಒಪ್ಪುವ ಸಾಧ್ಯತೆ ಇಲ್ಲ.
ದಾವೂದ್ ಇಬ್ರಾಹಿಂನ ಸೋದರ ಇಕ್ಬಾಲ್ ಇಬ್ರಾಹಿಂ ಕಸ್ಕರ್ ಪರವಾಗಿ ಥಾಣೆ ಕೋರ್ಟ್ ನಲ್ಲಿ ವಾದ ಮಂಡಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ವಕೀಲರು, ಮುಂಬೈನ ಆರ್ಥರ್ ರಸ್ತೆಯಲಿರುವ ಅತಿ ಹೆಚ್ಚು ಸುರಕ್ಷಿತವಾಗಿರುವ ಜೈಲಿನಲ್ಲೇ ಇರಿಸಬೇಕು ಎಂಬ ಅಂಶವು ದಾವೂದ್ ಇಬ್ರಾಹಿಂನ ಷರತ್ತುಗಳಲ್ಲಿ ಒಂದು.
ಬೆಂಗಳೂರಿನಲ್ಲಿ ಬೆಳೆದ ದಾವೂದ್ ಇಬ್ರಾಹಿಂ ರಹಸ್ಯ ಮಗ ಮತ್ತೊಮ್ಮೆ ನೆನಪು
ಖ್ಯಾತ ವಕೀಲರಾದ ರಾಮ್ ಜೇಠ್ಮಲಾನಿ ಮೂಲಕ ತಾನು ಭಾರತಕ್ಕೆ ಹಿಂತಿರುಗುವ ಬಗ್ಗೆ ಕೆಲ ವರ್ಷಗಳ ಹಿಂದೆ ಸಂದೇಶ ರವಾನಿಸಿದ್ದ ದಾವೂದ್ ಇಬ್ರಾಹಿಂ. ಆದರೆ ಆಗ ಅಧಿಕಾರದಲ್ಲಿದ್ದ ಸರಕಾರವು ಪೂರ್ವ ಷರತ್ತುಗಳನ್ನು ಒಪ್ಪಿರಲಿಲ್ಲ ಎಂದು ವಕೀಲ ಶ್ಯಾಮ್ ಕೇಸ್ವಾನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆರ್ಥರ್ ರೋಡ್ ಜೈಲಿನಲ್ಲಿ ಇರಿಸಬೇಕು
ಅಂದಹಾಗೆ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲೇ ಪಾಕಿಸ್ತಾನದ ಭಯೋತ್ಪಾದಕ ಅಜ್ಮಲ್ ಕಸಬ್ ನನ್ನು ಇರಿಸಲಾಗಿತ್ತು. ನವೆಂಬರ್ 2008ರಲ್ಲಿ ಮುಂಬೈ ಮೇಲಿನ ದಾಳಿ ಪ್ರಕರಣದ ಅಪರಾಧಿ ಆಗಿದ್ದ ಆತನನ್ನು ಗಲ್ಲಿಗೇರಿಸುವ ಮುನ್ನ ನಾಲ್ಕು ವರ್ಷಗಳ ಕಾಲ ಇದೇ ಜೈಲಿನಲ್ಲಿ ಇರಿಸಲಾಗಿತ್ತು.
ಆರು ತಿಂಗಳ ಮೊದಲೇ ರಾಜ್ ಠಾಕ್ರೆ ಬಹಿರಂಗ ಪಡಿಸಿದ್ದರು
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾರತಕ್ಕೆ ಹಿಂತಿರುಗುವ, ಶರಣಾಗುವ ಇರಾದೆ ಇಟ್ಟುಕೊಂಡಿದ್ದಾನೆ ಎಂದು ಮಹಾರಾಷ್ಟ್ರದ ನವ್ ನಿರ್ಮಾಣ್ ಸೇನಾದ ಅಧ್ಯಕ್ಷ ರಾಜ್ ಠಾಕ್ರೆ ಆರು ತಿಂಗಳ ಹಿಂದೆ ತಿಳಿಸಿದ್ದರು. ಇದೀಗ ಕ್ರಿಮಿನಲ್ ವಕೀಲರಾದ ಶ್ಯಾಮ್ ಕೇಸ್ವಾನಿ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ.
'ಸೆಟ್ಲ್ ಮೆಂಟ್' ಬಯಸಿದ್ದಾನೆ ಭೂಗತ ಪಾತಕಿ
ಸ್ಫೋಟಕ ವಿಚಾರವನ್ನು ಬಹಿರಂಗ ಪಡಿಸಿದ್ದ ರಾಜ್ ಠಾಕ್ರೆ, ದಾವೂದ್ ಇಬ್ರಾಹಿಂ ಭಾರತಕ್ಕೆ ಹಿಂತಿರುಗುವುದಕ್ಕೆ ಮಾತ್ರವಲ್ಲ, ಮೋದಿ ಸರಕಾರದ ಜತೆಗೆ "ಸೆಟ್ಲ್ ಮೆಂಟ್" ಮಾಡಿಕೊಳ್ಳಲಿ ಬಯಸಿದ್ದಾನೆ. ದಾವೂದ್ ಇಬ್ರಾಹಿಂ ಭಾರತದಲ್ಲಿ ತನ್ನ ಕೊನೆ ದಿನಗಳನ್ನು ಕಳೆಯಲು ಬಯಸಿದ್ದಾನೆ ಎಂದಿದ್ದರು.
ಹಫ್ತಾ ವಸೂಲಿ ಪ್ರಕರಣ
ಕಟ್ಟಡ ನಿರ್ಮಾತೃವೊಬ್ಬರಿಂದ ಹಫ್ತಾ ವಸೂಲಿ ಮಾಡುವ ಸಂದರ್ಭದಲ್ಲಿ ದಾವೂದ್ ಇಬ್ರಾಹಿಂನ ಸಹೋದರ ಇಕ್ಬಾಲ್ ಇಬ್ರಾಹಿಂನನ್ನು ಮುಂಬೈನ ಥಾಣೆ ಪೊಲೀಸರು ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಬಂಧಿಸಿದ್ದರು. ಆತನ ಇಬ್ಬರು ಸೋದರರಾದ ದಾವೂದ್ ಹಾಗೂ ಅನೀಸ್ ನನ್ನು (ಇಬ್ಬರೂ ತಲೆ ಮರೆಸಿಕೊಂಡಿದ್ದಾರೆ) ಸಹ ಆರೋಪಿಗಳಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.