ಕರಾಚಿಯಲ್ಲಿ ದಾವೂದ್ ಇಬ್ರಾಹಿಂ; ವಿಶ್ವಾಸಾರ್ಹ ಮಾಹಿತಿ ಎಂದ ಭಾರತ
ಭಾರತದ ಮೋಸ್ಟ್ ವಾಂಟೆಡ್, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲೇ ಇದ್ದಾನೆ ಎಂಬ ಬಗ್ಗೆ ವಿಶ್ವಾಸಾರ್ಹ ಹಾಗೂ ನಂಬಲರ್ಹ ಮಾಹಿತಿ ಇದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಗುರುವಾರ ತಿಳಿಸಿದ್ದಾರೆ. ಇದರ ಜತೆಗೆ ದಾವೂದ್ ಇರುವ ಸ್ಥಳವು ರಹಸ್ಯವಾಗೇನೂ ಉಳಿದಿಲ್ಲ ಎಂದಿದ್ದಾರೆ.
ಪಾಕಿಸ್ತಾನದಲ್ಲಿ ಇರುವ ಭಾರತದ ಮೋಸ್ಟ್ ವಾಂಟೆಡ್ ಗಳ ಪಟ್ಟಿಯನ್ನು ನಾವು ಈಗಾಗಲೇ ನೀಡಿದ್ದೇವೆ. ಇನ್ನು ಪದೇ ಪದೇ ಆತನ ಹಸ್ತಾಂತರಕ್ಕಾಗಿ ಕೇಳಿದ್ದೇವೆ. ಮುಂಬೈ ಸ್ಫೋಟ ಪ್ರಕರಣದಲ್ಲಿ ಆತನ ಕೈವಾಡ ಇರುವುದು ನಿಚ್ಚಳವಾಗಿದೆ ಎಂದು ರವೀಶ್ ಕುಮಾರ್ ಹೇಳಿದ್ದಾರೆ.
ಮತ್ತೊಮ್ಮೆ ಮೋದಿ, ದಾವೂದ್ ಇಬ್ರಾಹಿಂ ಎದೆಯಲ್ಲಿ ಢವಢವ!
ಭಯೋತ್ಪಾದನೆ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಪಾಕಿಸ್ತಾನ ಮುಂಚಿನಿಂದಲೂ ಹೇಳಿಕೊಂಡು ಬರುತ್ತಿದೆ. ಆದರೆ ಇಬ್ಬಗೆ ನೀತಿಯನ್ನು ಅನುಸರಿಸುತ್ತಿದೆ. ಕ್ರಮ ತೆಗೆದುಕೊಳ್ಳುವುದಾಗಿ ಹೇಳುವ ಪಾಕಿಸ್ತಾನ, ನಾವು ಜನರ ವಿರುದ್ಧ ಕ್ರಮಕ್ಕೆ ಒತ್ತಾಯಿಸುವಾಗ ನಿರಾಕರಿಸುತ್ತಾ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಸಮುದಾಯಗಳ ಎದುರು ಭಯೋತ್ಪಾದನೆ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಪಾಕ್ ತೋರಿಸಿಕೊಳ್ಳುತ್ತದೆ. ಇದು ಇಬ್ಬಗೆ ನೀತಿ ಅನ್ನೋದರಲ್ಲಿ ಅನುಮಾನ ಬೇಡ. ಭಯೋತ್ಪಾದಕರ ವಿರುದ್ಧ ಕಠಿಣವಾಗಿ ನಡೆದುಕೊಳ್ಳುತ್ತಿದ್ದೇವೆ ಎಂದು ಹೇಳಿಕೊಳ್ಳುವ ಪಾಕಿಸ್ತಾನ ಏನು ಎಂಬುದು ಈಗ ಬಯಲಾಗಿದೆ ಎಂದು ರವೀಶ್ ಕುಮಾರ್ ಹೇಳಿದ್ದಾರೆ.