ಪಾಕಿಸ್ತಾನದ ಮೇಲೆ ದಾಳಿಗೆ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ನಿರ್ಧರಿಸಿದ್ದರು
ನವದೆಹಲಿ, ಸೆಪ್ಟೆಂಬರ್ 19: ಮುಂಬೈ ಮೇಲೆ ನಡೆದ ರೀತಿಯದ್ದೇ ಮತ್ತೊಂದು ಉಗ್ರರ ದಾಳಿ ನಡೆದರೆ ಪಾಕಿಸ್ತಾನದ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಲು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಉದ್ದೇಶಿಸಿದ್ದರು ಎಂದು ಬ್ರಿಟನ್ನ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರಾನ್ ಬಹಿರಂಗಪಡಿಸಿದ್ದಾರೆ.
ಡೇವಿಡ್ ಕ್ಯಾಮರಾನ್ ಅವರ 'ಫಾರ್ ದಿ ರೆಕಾರ್ಡ್' ಕೃತಿ ಗುರುವಾರ ಬಿಡುಗಡೆಯಾಗಿದ್ದು, ಅದರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು 'ಸಂತ' ಎಂದು ಶ್ಲಾಘಿಸಿದ್ದಾರೆ.
ಆರ್ಥಿಕ ಕುಸಿತ ಎದುರಿಸುವುದು ಹೇಗೆ?: ಮೋದಿಗೆ ಆರು ಸಲಹೆ ನೀಡಿದ ಮನಮೋಹನ್ ಸಿಂಗ್
ಪ್ರಧಾನಿಯಾಗಿದ್ದ ವೇಳೆ 2010-2016ರ ಅವಧಿಯಲ್ಲಿ ಕ್ಯಾಮರಾನ್ ಅವರು ಮೂರು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು. ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬರಲು ಜನಮತಗಣನೆ ನಡೆಯುವ ಸಂದರ್ಭದಲ್ಲಿ ಅವರು ರಾಜೀನಾಮೆ ನೀಡಿದ್ದರು. ತಮ್ಮ ಕೃತಿಯಲ್ಲಿ ಅವರು ಮನಮೋಹನ್ ಸಿಂಗ್ ಅವರ ಕುರಿತು ಹಲವು ಸಲ ಪ್ರಸ್ತಾಪಿಸಿದ್ದಾರೆ.
ಕನ್ಸರ್ವೇಟಿವ್ ಪಕ್ಷದ ಪ್ರಮುಖ ನಾಯಕರಾಗಿದ್ದ ಕ್ಯಾಮರಾನ್, ಭಾರತದೆಡೆಗಿನ ಬ್ರಿಟನ್ ನಡೆಯನ್ನು ವೃದ್ಧಿಸಲು ಹೆಚ್ಚು ಆದ್ಯತೆ ನೀಡಿದ್ದರು. 2010ರಲ್ಲಿ ಅವರ ಪಕ್ಷವು ಅಲ್ಲಿರುವ 1.5 ಮಿಲಿಯನ್ ಭಾರತೀಯ ಸಮುದಾಯದ ಮತಗಳನ್ನು ಪಡೆದುಕೊಂಡು ಅಧಿಕಾರಕ್ಕೆ ಬರಲು ನೆರವಾಗಿತ್ತು.
ಮನಮೋಹನ್ ಸಿಂಗ್ ಒಬ್ಬ ಸಂತ
'ಮನಮೋಹನ್ ಸಿಂಗ್ ಅವರೊಂದಿಗಿನ ನನ್ನ ಬಾಂಧವ್ಯ ಚೆನ್ನಾಗಿತ್ತು. ಅವರೊಬ್ಬ ಸಂತ ವ್ಯಕ್ತಿ. ಆದರೆ ಭಾರತ ಎದುರಿಸುತ್ತಿರುವ ಬೆದರಿಕೆ ವಿಚಾರದಲ್ಲಿ ಅವರು ಕಠಿಣವಾಗಿದ್ದರು. 2011ರ ಜುಲೈನಲ್ಲಿ ಮುಂಬೈ ಮೇಲೆ ನಡೆದಂತಹ ಉಗ್ರರ ದಾಳಿ ಮರುಕಳಿಸಿದರೆ ಪಾಕಿಸ್ತಾನದ ವಿರುದ್ಧ ಭಾರತ ಸೇನಾ ಕಾರ್ಯಾಚರಣೆಯ ಕ್ರಮ ತೆಗೆದುಕೊಳ್ಳಲಿದೆ' ಎಂದು ಸಿಂಗ್ ಹೇಳಿದ್ದಾಗಿ ಕ್ಯಾಮರಾನ್ ಬರೆದಿದ್ದಾರೆ.
ಮೋದಿ ಮೇಲಿದ್ದ ಬಹಿಷ್ಕಾರ ಅಂತ್ಯ
2002ರ ಗೋದ್ರಾ ಗಲಭೆ ಬಳಿಕ ಬ್ರಿಟನ್ ಸರ್ಕಾರವು ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಬಹಿಷ್ಕರಿಸಿತ್ತು. 2013ರಲ್ಲಿ ಪ್ರಧಾನಿಯಾಗಿದ್ದ ಕ್ಯಾಮರಾನ್ ಅವರು ಆ ಬಹಿಷ್ಕಾರವನ್ನು ಅಂತ್ಯಗೊಳಿಸಿದ್ದರು. ಬಳಿಕ 2015ರಲ್ಲಿ ಮೋದಿ ಅವರು ಬ್ರಿಟನ್ಗೆ ಭೇಟಿ ನೀಡಿದ್ದಾಗ ಭವ್ಯ ಸ್ವಾಗತ ನೀಡಿದ್ದರು.
ಆರ್ಥಿಕತೆ ಬಗ್ಗೆ ಮನಮೋಹನ್ ಸಿಂಗ್ ಎಚ್ಚರಿಕೆ ಆಲಿಸಿ: ಶಿವಸೇನೆ
ಭಾರತದೊಂದಿಗೆ ಹೊಸ ಬಾಂಧವ್ಯ
'ಭಾರತದ ವಿಚಾರ ಬಂದಾಗ ನಮಗೆ ಆಧುನಿಕ ಸಹಭಾಗಿತ್ವದ ಅಗತ್ಯವಿದೆ ಎಂದೇ ನಾನು ಪ್ರತಿಪಾದಿಸುತ್ತೇನೆ. ಇದು ವಸಾಹತುಶಾಹಿ ಕಾಲದ ತಪ್ಪಿತಸ್ಥ ಮನೋಭಾವವನ್ನು ಹೊಂದಿರಬಾರದು. ಆದರೆ ಜಗತ್ತಿನ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಮತ್ತು ಅತಿ ದೊಡ್ಡ ಪ್ರಜಾಪ್ರಭುತ್ವಗಳ ನಡುವಿನ ಎಲ್ಲ ಸಾಧ್ಯತೆಗಳನ್ನು ಜೀವಂತಗೊಳಿಸಬೇಕು' ಎಂದು ಕ್ಯಾಮರಾನ್ ಬರೆದಿದ್ದಾರೆ.
ಅಮೆರಿಕ-ಇಂಗ್ಲೆಂಡ್ ಬಾಂಧವ್ಯವನ್ನು 'ವಿಶೇಷ' ಎಂದು ಐತಿಹಾಸಿಕವಾಗಿ ಗುರುತಿಸಲಾಗುತ್ತದೆ. ಆದರೆ ತಾವು ದೇಶದ 'ವಿಶೇಷ ಸಂಬಂಧ' ಮಾತ್ರವಷ್ಟೇ ಬಯಸಿರಲಿಲ್ಲ, ಜತೆಗೆ ಭಾರತ ಮತ್ತು ಚೀನಾದೊಂದಿಗೆ ಅತಿ ವಿಶಿಷ್ಟ ಸಂಬಂಧ ಬೆಳೆಸಲು ಬಯಸಿದ್ದು, ಭಾರತದೊಂದಿಗೆ ಹೊಸ ವಿಶೇಷ ಸಂಬಂಧ ಬಯಸಿದ್ದಾಗಿ ತಿಳಿಸಿದ್ದಾರೆ.
60 ಸಾವಿರ ಜನರ ಮುಂದೆ ಮೋದಿಯೊಂದಿಗೆ...
2015ರ ಮೋದಿ ಭೇಟಿಯ ಬಗ್ಗೆ ಕ್ಯಾಮರಾನ್ ವಿಶೇಷವಾಗಿ ಬರೆದಿದ್ದಾರೆ. 'ಇಂಗ್ಲೆಂಡ್ನ ವೆಂಬ್ಲಿ ಸ್ಟೇಡಿಯಂನಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಭಾರತೀಯ ಸಮೂಹ ನೆರೆದಿದ್ದು ಸೇರಿದಂತೆ ಅನೇಕ ಸ್ಮರಣೀಯ ಗಳಿಗೆಗಳಿವೆ. ಮೋದಿ ಅವರನ್ನು ಪರಿಚಯಿಸುವ ಮುನ್ನ ನಾನು ಸುಮಾರು 60,000 ಮಂದಿಯಿದ್ದ ಜನಸಮೂಹಕ್ಕೆ ಹೇಳಿದೆ, 10 ಡೌನಿಂಗ್ ಸ್ಟ್ರೀಟ್ಗೆ ಬ್ರಿಟಿಷ್-ಭಾರತೀಯ ವ್ಯಕ್ತಿ ಒಂದು ದಿನ ಪ್ರಧಾನಿಯಾಗಿ ಪ್ರವೇಶಿಸುತ್ತಾರೆ ಎಂದು ಊಹಿಸಿದ್ದೆ' ಎಂದು.
'ಅದಕ್ಕೆ ಸಹಮತಿ ಸೂಚಿಸುವಂತೆ ಕೇಳಿಬಂದ ಹರ್ಷೋದ್ಗಾರ ನಂಬಲಸಾಧ್ಯವಾಗಿತ್ತು. ವೇದಿಕೆಯ ಮೇಲೆ ನಾನು ಮತ್ತು ಮೋದಿ ಆಲಂಗಿಸಿದ್ದೆವು. ಅದು ಬ್ರಿಟನ್ ಜಗತ್ತಿನೆಡೆಗೆ ಮುಕ್ತವಾಗಿ ಕೈಚಾಚಿರುವುದರ ಸಂಕೇತದ ಸಣ್ಣ ಗುರುತಷ್ಟೇ ಎಂದು ಭಾವಿಸಿದ್ದೆ' ಎಂದು ವಿವರಿಸಿದ್ದಾರೆ.
ಬ್ರಿಟನ್ನಿನ ಪ್ರಭಾವಿ ಹುದ್ದೆಗೆ ಭಾರತೀಯ ಸಂಜಾತೆ
ಜಲಿಯನ್ ವಾಲಾಬಾಗ್ಗೆ ಮೊದಲ ಭೇಟಿ
2013ರಲ್ಲಿ ಕ್ಯಾಮೆರಾನ್ ಅವರು ಅಮೃತಸರದ ಜಲಿಯನ್ ವಾಲಾಬಾಗ್ಗೆ ಭೇಟಿ ನೀಡಿದ ಮೊದಲ ಬ್ರಿಟಿಷ್ ಪ್ರಧಾನಿ ಎನಿಸಿದರು. 'ಬ್ರಿಟಿಷ್ ಭಾರತೀಯ ಸಮುದಾಯದ ನನ್ನ ಸ್ನೇಹಿತರು, ಸಹೋದ್ಯೋಗಿಗಳು ಸುದೀರ್ಘಕಾಲದಿಂದ ಅಮೃತಸರದ ಸ್ವರ್ಣಮಂದಿರಕ್ಕೆ ಭೇಟಿ ನೀಡುವಂತೆ ಹೇಳುತ್ತಿದ್ದರು. ಈ ಪವಿತ್ರ ಸಿಖ್ ಮಂದಿರವು 1919ರಲ್ಲಿ ಹತ್ಯಾಕಾಂಡಕ್ಕೆ ಸಾಕ್ಷಿಯಾಗಿತ್ತು. ಶಾಂತಿಯುತ ಸಾರ್ವಜನಿಕ ಸಭೆಯ ವೇಳೆ ಬ್ರಿಟಿಷ್ ಇಂಡಿಯನ್ ಸೇನೆ ದಾಳಿ ನಡೆಸಿ ನೂರಾರು ಜನರನ್ನು ಕೊಂದು ಹಾಕಿದ್ದರು. ಯಾವ ಪ್ರಧಾನಿಯೂ ಇಲ್ಲಿಗೆ ಭೇಟಿ ನೀಡಿರಲಿಲ್ಲ. ಬದಲಾಗಿ ಘಟನೆ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದರು' ಎಂದು ಬರೆದಿದ್ದಾರೆ.
ನಾಚಿಕೆಗೇಡಿನ ಘಟನೆ
'ಈ ಎರಡೂ ವಿಷಯಗಳನ್ನು ನಾನು ಬದಲಿಸಲು ಬಯಸಿದ್ದೆ. ವ್ಯಾಪಾರ ಯೋಜನೆಯ ಬಳಿಕ ಅದಕ್ಕೆ ಮುಂದಾಗಿದ್ದೆ. 2013ರ ಫೆಬ್ರವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದೆ. ನನ್ನ ಭೇಟಿಗೂ ಮುನ್ನ ಆಂತರಿಕವಾಗಿ ನಾನು ಕ್ಷಮೆ ಕೋರಬೇಕೇ ಎಂಬ ವಿಚಾರ ಮನಸ್ಸನ್ನು ಕೊರೆಯುತ್ತಿತ್ತು. ಆದರೆ, ಅಂತಿಮವಾಗಿ ನಾನು ಸ್ಮಾರಕದ ಪುಸ್ತಕದಲ್ಲಿ 'ಪಶ್ಚಾತ್ತಾಪ' ವ್ಯಕ್ತಪಡಿಸಲು ನಿರ್ಧರಿಸಿದೆ. ಅದು ಬ್ರಿಟಿಷ್ ಇತಿಹಾಸದ ಅತ್ಯಂತ ಅವಮಾನಕರ ಘಟನೆ ಎನ್ನುವುದು ಸೂಕ್ತವಾಗಿತ್ತು. ತಮ್ಮ ಪ್ರಧಾನಿಯು ಈ ರೀತಿ ನಡೆ ಪ್ರದರ್ಶಿಸುವುದು ಬ್ರಿಟಿಷ್ ಸಿಖ್ಖರಿಗೆ ಎಷ್ಟು ಮುಖ್ಯ ಎನ್ನುವುದು ತಿಳಿದಿತ್ತು. ಮತ್ತು ನಾನು ಅದನ್ನು ಮಾಡಿದ್ದೆ' ಎಂದಿದ್ದಾರೆ.