ಪುಟ್ಟ ಕಂದಮ್ಮನ ನಿರೀಕ್ಷೆಯಲ್ಲಿ ಐದು ವರ್ಷದ ಸುದೀರ್ಘ ಕಾಲ ಕಾದಿದ್ದ ದಿನಗೂಲಿ ನೌಕರ ಕಾರ್ತಿಕೇಯನ್ ಮತ್ತು ತಾರ್ಕೋಡಿ ದಂಪತಿ ಪಾಲಿಗೆ ಖುಷಿ ನೀಡಿದ್ದು ಮಗಳು ವೈಷ್ಣವಿಯ ಜನನ. ಮುದ್ದಾದ ಹೆಣ್ಣುಮಗುವನ್ನು ಕಂಡು ಈ ದಂಪತಿ ಸ್ವರ್ಗವೇ ಧರೆಗಳಿದಂತೆ ಸಂಭ್ರಮಿಸಿದ್ದರು.
ಮದುವೆಯಾದ ಒಂದು ವರ್ಷದಲ್ಲೇ ತಾರ್ಕೋಡಿ ಗರ್ಭಿಣಿಯಾಗಿದ್ದಾಗಲೂ ಇದೇ ರೀತಿಯ ಸಡಗರ ಆ ಕುಟುಂಬವನ್ನು ಆವರಿಸಿತ್ತು. ಕೆಲವೇ ತಿಂಗಳಲ್ಲಿ ಖುಷಿ ಮರೆಯಾಗಿ ಆತಂಕದ ಕಾರ್ಮೋಡ ಕವಿದಿತ್ತು. ಗರ್ಭದಲ್ಲಿದ್ದ ಮಗುವಿಗೆ ಹೃದಯದ ತೊಂದರೆ ಇದ್ದಿದ್ದರಿಂದ ಅನಿವಾರ್ಯವಾಗಿ ಗರ್ಭಪಾತ ಮಾಡಿಸಬೇಕಾಯಿತು.
ಕಾಲ ಉರುಳಿತು. ತಾರ್ಕೋಡಿ ಮತ್ತೆ ತಾಯಿಯಾಗುವ ಘಳಿಗೆ ಕೂಡಿಬಂದಿತು. ಈ ಬಾರಿ ಮಗುವೂ ಜಗತ್ತನ್ನು ನೋಡಲು ಕಣ್ತೆರೆಯಿತು. ಆದರೆ, ಈ ಸಂಭ್ರಮದ ಘಳಿಗೆಗೆ ಸಾಕ್ಷಿಯಾಗಲು ಆ ಕಂದನ ಹೃದಯಕ್ಕೆ ಇಷ್ಟವಿಲ್ಲವೇನೋ? ಸಣ್ಣನೆ ನಗುವ, ಮತ್ತೊಮ್ಮೆ ಅಳುವ ಮಗುವಿನ ಪ್ರಾಂಜಲ ಮನಸ್ಸಿನ ಬಯಕೆಗಳಿಗೆ ಹೃದಯ ಸ್ಪಂದಿಸುತ್ತಿಲ್ಲ. ಅದನ್ನು ಕಂಡು ಆ ಬಡ ದಂಪತಿಯ ಹೃದಯಗಳೂ ಆಘಾತಕ್ಕೆ ಒಳಗಾಗಿವೆ.
ಈ ಮೊದಲು ಗರ್ಭಿಣಿಯಾಗಿದ್ದ ತಾರ್ಕೋಡಿ, ಜೀವಕ್ಕೆ ಅಪಾಯವಾಗುವ ಸ್ಥಿತಿ ಎದುರಾದಾಗ ಗರ್ಭಪಾತಕ್ಕೆ ಒಳಗಾಗುವ ಅನಿವಾರ್ಯತೆಗೆ ಸಿಲುಕಿದ್ದರು. 'ಹೀಗೆಯೇ ಮುಂದುವರಿದರೆ ನನ್ನ ಮತ್ತು ಮಗುವಿನ ಜೀವಕ್ಕೆ ತೊಂದರೆಯಾಗಲಿದೆ ಎಂದು ಡಾಕ್ಟರ್ ಹೇಳಿದಾಗ ಅತ್ಯಂತ ಕಠಿಣ ನಿರ್ಧಾರ ನನ್ನ ಮುಂದಿತ್ತು. ಮುಂದಿನ ಐದು ವರ್ಷದವರೆಗೆ ಗರ್ಭಧಾರಣೆಯೂ ಸಾಧ್ಯವಾಗಲಿಲ್ಲ. ನಮ್ಮನ್ನು ದೇವರು ಶಿಕ್ಷಿಸುತ್ತಿದ್ದಾನೆ ಎಂದು ಅನಿಸಿತ್ತು' ಎನ್ನುವ ತಾರ್ಕೋಡಿ ಕಂಗಳಲ್ಲಿ ಕಂಬನಿ ತುಳುಕಾಡುತ್ತಿರುತ್ತದೆ.
ಮಗು ಹುಟ್ಟಲಿಲ್ಲ ಎಂಬ ಕಾರಣಕ್ಕೆ 5 ವರ್ಷಗಳ ಕಾಲ ಆ ದಂಪತಿ ಕುಟುಂಬದವರ ಕೋಪ, ಹೀಯಾಳಿಕೆಗಳಿಗೆ ತುತ್ತಾಗಬೇಕಾಯಿತು. ತಾರ್ಕೋಡಿ ಎಲ್ಲರ ಮುಂದೆ ತಪ್ಪಿತಸ್ಥೆಯಂತಾದರು. ಸಂಬಂಧಿಕರಿಂದ ಕೆಟ್ಟ ಬೈಗುಳ, ಮೂದಲಿಕೆಗಳನ್ನು ಕೇಳಬೇಕಾಯಿತು. ಇನ್ನು ಕೆಲವರು ಅವರ ಮದುವೆಯ ಕುರಿತೇ ಪ್ರಶ್ನೆ ಕೇಳತೊಡಗಿದರು. ಐದು ವರ್ಷದ ಸುದೀರ್ಘ ಕಾಯುವಿಕೆಯ ಭರವಸೆ ವೈಷ್ಣವಿಯ ಆಗಮನದೊಂದಿಗೆ ಕೊನೆಗೂ ಈಡೇರಿತು.
'ಈ ಸಂದರ್ಭದಲ್ಲಿ ನಾವು ತುಂಬಾ ಎಚ್ಚರಿಕೆಯಿಂದಿದ್ದೆವು. ಆರೋಗ್ಯಯುತ ಆಹಾರವನ್ನು ಸೇವಿಸಿದೆ. ನಿರಂತರವಾಗಿ ತಪಾಸಣೆಗೆ ಹೋಗುತ್ತಿದ್ದೆವು. ನಮ್ಮ ಮಗುವಿಗೆ ಏನಾಗುತ್ತದೆಯೋ ಎಂದು ಪ್ರತಿ ಕ್ಷಣ ಭಯದಿಂದಲೇ ಇರುತ್ತಿದ್ದೆವು' ಎಂದು ತಾರ್ಕೋಡಿ ವಿವರಿಸಿದರು.
ಅವರ ಆಸೆಯಂತೆ ಆರೋಗ್ಯವಂತಳಾದ ವೈಷ್ಣವಿ ಹುಟ್ಟಿದಳು. ಮಗು ಆರೋಗ್ಯವಾಗಿದೆಯೇ ಎಂದು ತಾರ್ಕೋಡಿ ಪದೇ ಪದೇ ವೈದ್ಯರನ್ನು ಕೇಳುತ್ತಿದ್ದರು. ಅವರಿಂದ ಹೌದು ಎಂಬ ಉತ್ತರ ಬರುತ್ತಿದ್ದಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು ತಾರ್ಕೋಡಿ.
ಆದರೆ, ಎರಡು ದಿನಗಳ ಬಳಿಕ ವೈಷ್ಣವಿ ಜೋರಾಗಿ ಉಸಿರಾಡತೊಡಗಿದಳು. ತಾರ್ಕೋಡಿಗೆ ಮಗುವಿನಲ್ಲಿ ಏನೋ ಸಮಸ್ಯೆ ಇದೆ ಎನಿಸತೊಡಗಿತು. ಆಕೆ ತೀವ್ರ ಕಾಯಿಲೆಗೆ ಬಿದ್ದಳು. ಜೋರಾಗಿ ಅಳುತ್ತಿದ್ದಳು. ಅದು ಜಾಂಡೀಸ್ ಎಂದು ತೀರ್ಮಾನಿಸಿದ ವೈದ್ಯರು ಚಿಕಿತ್ಸೆ ನೀಡತೊಡಗಿದರು. ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಚೆನ್ನೈನಿಂದ ಆಕೆಯನ್ನು ಪುದುಚೇರಿಗೆ ಕರೆದೊಯ್ಯಲಾಯಿತು. ಅಲ್ಲಿ ಪರೀಕ್ಷೆ ಮಾಡಿದ ವೈದ್ಯರು ಹೇಳಿದ್ದು, ಆ ಪುಟ್ಟ ಮಗುವಿಗೆ ಹೃದಯದ ಕಾಯಿಲೆ ಇದೆ ಎಂದು.
ದಿನಗೂಲಿ ನೌಕರನಾಗಿರುವ ಕಾರ್ತಿಕೇಯನ್ ಮತ್ತು ಆತನ ಹೆಂಡತಿ ತಾರ್ಕೋಡಿಗೆ ಆಕಾಶವೇ ಕಳಚಿಬಿದ್ದಂತಾಗಿತ್ತು. ಕಾರ್ತಿಕೇಯನ್ ತಿಂಗಳಿಗೆ ಹೆಚ್ಚೆಂದರೆ 6000-8000 ರೂಪಾಯಿ ದುಡಿಯಬಲ್ಲರು. ಮಗಳ ಚಿಕಿತ್ಸೆಗಾಗಿ ಕೂಡಲೇ ಭೂಮಾಲೀಕರಿಂದ ಬಡ್ಡಿ ರೂಪದಲ್ಲಿ ಒಂದು ಲಕ್ಷ ರೂಪಾಯಿ ಸಾಲ ಪಡೆದುಕೊಂಡರು.
ಎಲ್ಲ ತಪಾಸಣೆಗಳ ನಂತರ ಮಗುವಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲು ಮತ್ತು ಎರಡು ವಾರ ಕಾಲ ಔಷಧ ನೀಡಲು 5 ಲಕ್ಷ ರೂಪಾಯಿ ಹೊಂದಿಸುವಂತೆ ವೈದ್ಯರು ಆ ದಂಪತಿಗೆ ಸೂಚಿಸಿದ್ದಾರೆ. ಆದರೆ, ಅಷ್ಟೊಂದು ಆದಾಯವಾದರೂ ಎಲ್ಲಿದೆ? ಆ ಬಡ ಕುಟುಂಬಕ್ಕೆ ಹಣ ಹೊಂದಿಸಲು ಯಾವ ಮಾರ್ಗವೂ ತೋಚುತ್ತಿಲ್ಲ.
ಹಣದ ಕೊರತೆಯ ವಿಷಯ ಮುಂದಿಟ್ಟಾಗ, "ಮಗು ಮುಖ್ಯವೋ ಅಥವಾ ಹಣವೋ ಎಂದು ಡಾಕ್ಟರ್ ನನ್ನನ್ನು ಕೇಳುತ್ತಾರೆ. ನನ್ನ ಮಗುವನ್ನು ಉಳಿಸಿಕೊಳ್ಳಲು ನಾನು ಎಲ್ಲವನ್ನೂ ಮಾಡಬೇಕಿದೆ ಎನ್ನುವುದು ನನಗೆ ಗೊತ್ತು. ಆದರೆ, ನನ್ನ ಬಳಿ ಹಣವಿಲ್ಲ. ಮಾರಲು ಆಸ್ತಿಯೂ ಇಲ್ಲ" ಎಂದು ದುಃಖತಪ್ತ ಕಾರ್ತಿಕೇಯನ್ ಕಣ್ಣೀರಿಡುತ್ತಾ ಹೇಳುತ್ತಾರೆ.
ಸಮಾಜಸೇವಕರೊಬ್ಬರ ಸಹಾಯದಿಂದ ಮಗುವಿನ ಚಿಕಿತ್ಸೆಗೆ ಅಗತ್ಯವಾದ ಹಣ ಹೊಂದಿಸಲು ಆನ್ಲೈನ್ ಫಂಡ್ ರೈಸಿಂಗ್ ಆರಂಭಿಸಲಾಗಿದೆ. ನಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಕಾಲವೂ ಮೀರುತ್ತಿದೆ. ಬದುಕಿಗಾಗಿ ಹೋರಾಡುತ್ತಿರುವ ಒಂದು ತಿಂಗಳ ಮಗು ವೈಷ್ಣವಿಯನ್ನು ನಿಗಾ ಘಟಕದಲ್ಲಿ ಇರಿಸಲಾಗಿದೆ. ಆದರೆ, ಆಕೆಯ ದುರ್ಬಲ ಹೃದಯ ಅದಕ್ಕೆ ಸ್ಪಂದಿಸುತ್ತಿಲ್ಲ.
RECOMMENDED STORIES