ರಫೇಲ್ ಒಪ್ಪಂದದಲ್ಲಿ ಭಾರತದ ಮಧ್ಯವರ್ತಿಗೆ 1 ಮಿಲಿಯನ್ ಯುರೋ ಹಣ: ಫ್ರಾನ್ಸ್ ಪತ್ರಿಕೆ ಸ್ಫೋಟಕ ವರದಿ
ನವದೆಹಲಿ, ಏಪ್ರಿಲ್ 5: ಭಾರತಕ್ಕೆ ರಫೇಲ್ ಯುದ್ಧ ವಿಮಾನಗಳನ್ನು ಮಾಡಿಕೊಡುತ್ತಿರುವ ಫ್ರಾನ್ಸ್ನ ವಿಮಾನ ತಯಾರಕ ಸಂಸ್ಥೆ ಡಸಾಲ್ಟ್, ಭಾರತ-ಫ್ರಾನ್ಸ್ ನಡುವೆ 36 ರಫೇಲ್ ಯುದ್ಧ ವಿಮಾನಕ್ಕೆ ಒಪ್ಪಂದ ನಡೆದ ಕೆಲವೇ ಸಮಯದ ಬಳಿಕ ಭಾರತದಲ್ಲಿನ ಮಧ್ಯವರ್ತಿಯೊಬ್ಬರಿಗೆ ಒಂದು ಮಿಲಿಯನ್ ಯುರೋ ಹಣ ನೀಡಿತ್ತು ಎಂದು ಫ್ರಾನ್ಸ್ನ 'ಮೀಡಿಯಾಪಾರ್ಟ್' ಆನ್ಲೈನ್ ಪತ್ರಿಕೆ ವರದಿ ಮಾಡಿದೆ.
ಈ ಮಧ್ಯವರ್ತಿಯು ಮತ್ತೊಂದು ರಕ್ಷಣಾ ಒಪ್ಪಂದದಲ್ಲಿ ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ ನಡೆಸಿದ ಆರೋಪ ಎದುರಿಸುತ್ತಿದ್ದಾನೆ ಎಂದು ವರದಿ ತಿಳಿಸಿದೆ. ರಫೇಲ್ ಜೆಟ್ನ 50 ಪಡಿಯಚ್ಚುಗಳನ್ನು ತಯಾರಿಸಲು ಹಣ ಪಾವತಿಸಿರುವುದಾಗಿ ಡಸಾಲ್ಟ್ ಹೇಳಿದೆ.
ರಫೇಲ್ ಯುದ್ಧವಿಮಾನ ಒಪ್ಪಂದದ ಆಳ-ಅಗಲದ ಸಂಪೂರ್ಣ ಚಿತ್ರಣ!
'ರಫೇಲ್ ಜೆಟ್ಗಳ 50 ಬೃಹತ್ ಪಡಿಯಚ್ಚುಗಳನ್ನು ತಯಾರಿಸುವ ಸಲುವಾಗಿ ಈ ಹಣವನ್ನು ಪಾವತಿ ಮಾಡಲಾಗಿದೆ ಎಂದು ಕಂಪೆನಿ ತಿಳಿಸಿದೆ. ಆದರೆ ಈ ಮಾದರಿಗಳನ್ನು ನಿರ್ಮಿಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆ ದೊರಕಿಲ್ಲ' ಎಂಬುದಾಗಿ ಮೀಡಿಯಾಪಾರ್ಟ್ ತಿಳಿಸಿದೆ.
ಭಾರತದ ಡೆಫ್ಸಿಸ್ ಸಲ್ಯೂಷನ್ಸ್ ಎಂಬ ಸುಶೇನ್ ಗುಪ್ತಾ ಮಾಲೀಕತ್ವದ ಕಂಪೆನಿಯಿಂದ ಪಡೆದ ಇನ್ವಾಯ್ಸ್ ಅನ್ನು ಫ್ರಾನ್ಸ್ನ ತನಿಖಾಧಿಕಾರಿಗಳಿಗೆ ವಹಿಸಲಾಗಿದೆ. ಗುಪ್ತಾ ಅವರನ್ನು ಯುಪಿಎ ಅವಧಿಯಲ್ಲಿ ನಡೆದ ವಿವಿಐಪಿ ಹೆಲಿಕಾಪ್ಟರ್ ಖರೀದಿಯ ಅಗಸ್ಟಾ ವೆಸ್ಟ್ಲ್ಯಾಂಡ್ ಪ್ರಕರಣದಲ್ಲಿ ಸಿಬಿಐ ಮತ್ತು ಇ.ಡಿ ವಿಚಾರಣೆ ನಡೆಸುತ್ತಿವೆ.
ಡೆಫ್ಸಿಸ್ ಸಲ್ಯೂಷನ್ಸ್, ಡಸಾಲ್ಟ್ನ ಭಾರತೀಯ ಸಬ್ ಕಂಟ್ರಾಕ್ಟರ್ಗಳಲ್ಲಿ ಒಂದಾಗಿದೆ. ಹೆಲಿಕಾಪ್ಟರ್ ಹಗರಣದಲ್ಲಿ ಸುಶೇನ್ ಗುಪ್ತಾ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. 2017ರ ಮಾರ್ಚ್ 30ರಂದು ಡೆಫ್ಸಿಸ್ ಸಲ್ಯೂಷನ್ಸ್ ನೀಡಿದ ಇನ್ವಾಯ್ಸ್ ಅನ್ನು ಮುಂದಿಟ್ಟುಕೊಂಡು 'ಸಾಮಾನ್ಯ ಉಡುಗೊರೆಗಿಂತ ದೊಡ್ಡದಾದ ಕೊಡುಗೆ'ಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದೆ ಎಂದು ಫ್ರಾನ್ಸ್ನ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಎಎಫ್ಎ ವರದಿಯನ್ನು ಪತ್ರಿಕೆ ಉಲ್ಲೇಖಿಸಿದೆ.
ಮಧ್ಯವರ್ತಿಗೆ ನೀಡಿದ ಹಣವನ್ನು ತಮ್ಮ ಖಾತೆಯಲ್ಲಿ 'ಗ್ರಾಹಕರಿಗೆ ಉಡುಗೊರೆ' ಎಂದು ಉಲ್ಲೇಖಿಸಿರುವುದು ಏಕೆ, ಮತ್ತು ರಫೇಲ್ನ ಪಡಿಯಚ್ಚು ಮಾದರಿಗಳನ್ನು ತಯಾರಿಸಲಾಗಿದೆಯೇ ಎಂಬ ಪ್ರಶ್ನೆಗಳಿಗೆ ಪುರಾವೆ ಅಥವಾ ಉತ್ತರ ಒದಗಿಸಲು ಡಸಾಲ್ಟ್ಗೆ ಸಾಧ್ಯವಾಗಿಲ್ಲ.
ರಫೇಲ್ ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ಮತ್ತೆ ಕ್ಲೀನ್ ಚಿಟ್
ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅನೇಕ ಬಾರಿ ಆರೋಪಿಸಿದ್ದರು. ಆದರೆ ಈ ಬಗ್ಗೆ ಮೊದಲ ಬಾರಿಗೆ ಪತ್ರಿಕೆಯೊಂದರಲ್ಲಿ ವರದಿ ಪ್ರಕಟವಾಗಿದೆ.
''ಫ್ರಾನ್ಸ್ನ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಎಎಫ್ಎ ನಡೆಸಿದ ತನಿಖೆಯು, 2016ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಡಸಾಲ್ಟ್ ಕಂಪೆನಿಯು ಡೆಫ್ಸಿಸ್ ಸಲ್ಯೂಷನ್ಸ್ ಎಂಬ ಮಧ್ಯವರ್ತಿಗೆ 1.1 ಮಿಲಿಯನ್ ಯುರೋ ಹಣವನ್ನು ಪಾವತಿಸಿದೆ. ಇದು 'ಗ್ರಾಹಕರಿಗೆ ನೀಡಿದ ಉಡುಗೊರೆ' ಎಂದು ಡಸಾಲ್ಟ್ನ ವೆಚ್ಚದಲ್ಲಿ ನಮೂದಿಸಲಾಗಿದೆ. ಭಾರತದ ಅತಿ ದೊಡ್ಡ ರಕ್ಷಣಾ ಒಪ್ಪಂದದಲ್ಲಿ ವಾಸ್ತವವಾಗಿ ಎಷ್ಟು ಪ್ರಮಾಣದ ಲಂಚ ಮತ್ತು ಕಮಿಷನ್ ವ್ಯವಹಾರ ನಡೆದಿದೆ ಎಂಬುದನ್ನು ತಿಳಿಯಲು ಸಂಪೂರ್ಣ ಮತ್ತು ಸ್ವತಂತ್ರ ತನಿಖೆ ಅಗತ್ಯವಿಲ್ಲವೇ? ಹಣ ಪಾವತಿಸಲಾಗಿದೆಯೇ, ಆಗಿದ್ದರೆ ಭಾರತ ಸರ್ಕಾರದಲ್ಲಿ ಯಾರಿಗೆ ಪಾವತಿಸಲಾಗಿದೆ? ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಹೇಳಿದ್ದಾರೆ.