ಕೇರಳ: ನರ್ಸ್ ನಿರ್ಲಕ್ಷ್ಯ ಆರೋಪ, ಶೌಚಾಲಯದಲ್ಲೇ ಮಗುವಿಗೆ ಜನ್ಮ
ಮಲಪ್ಪುರಂ, ಜನವರಿ 1: ದಲಿತ ಮಹಿಳೆಯೊಬ್ಬರು ಇಲ್ಲಿನ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ತನಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ಮಹಿಳೆ ಹೇಳಿದ ಮಾತನ್ನು ಗಣನೆಗೆ ತೆಗೆದುಕೊಳ್ಳದ ನರ್ಸ್ ನಡವಳಿಕೆಯಿಂದ ಇಂಥ ಅನಾಹುತ ಆಗಿದೆ ಎಂದು ಮಹಿಳೆಯ ಸಂಬಂಧಿಕರು ದೂರಿದ್ದಾರೆ.
ಹೆರಿಗೆಯಾದ ಮಹಿಳೆಯ ಸಂಬಂಧಿಕರು ಹೇಳುವ ಪ್ರಕಾರ, ಮಂಜೇರಿ ಮೆಡಿಕಲ್ ಕಾಲೇಜಿನಲ್ಲಿ ಮಹಿಳೆಯನ್ನು ದಾಖಲಿಸಲಾಗಿತ್ತು. ಅಲ್ಲಿನ ಸಿಬ್ಬಂದಿ ಆಕೆಯ ಜೊತೆಗೆ ವಿಚಿತ್ರವಾಗಿ ವರ್ತಿಸಿದರು. ತನಗೆ ವಿಪರೀತವಾದ ನೋವು ಕಾಣಿಸಿಕೊಂಡಿದೆ ಎಂದು ಆಕೆ ನರ್ಸ್ ಬಳಿ ಹೇಳಿಕೊಂಡರೆ, ಮೂತ್ರ ವಿಸರ್ಜನೆ ಮಾಡಿದರೆ ನೋವು ತಗ್ಗುತ್ತದೆ ಎಂದು ಆ ನರ್ಸ್ ಸೂಚಿಸಿದ್ದಾಗಿ ಮಹಿಳೆಯ ಹತ್ತಿರದ ಸಂಬಂಧಿಯೊಬ್ಬರು ತಿಳಿಸಿದ್ದಾರೆ.[ಗಂಡು ಮಗು ಬೇಕಿದ್ದರೆ ದನದ ಮಾಂಸ ತಿನ್ನಬೇಕಂತೆ!]
ಆಕೆ ಶೌಚಾಲಯಕ್ಕೆ ಹೋದರು. ಅಲ್ಲಿ ಕೂರಲಿಕ್ಕೂ ಆಗದೆ ಮತ್ತು ನೋವಿನಿಂದ ಅಳುವುದಕ್ಕೆ ಆರಂಭಿಸಿದರು. ಆಕೆಯನ್ನು ನೋಡಿಕೊಳ್ಳುತ್ತಿದ್ದವರೊಬ್ಬರು ತಕ್ಷಣವೇ ಶೌಚಾಲಯಕ್ಕೆ ತೆರಳಿದರು. ಅ ತಕ್ಷಣವೇ ಮಗುವನ್ನು ಹೊರತೆಗೆದರು ಎಂದು ಆ ಸಂಬಂಧಿಕರು ಮಾಹಿತಿ ನೀಡಿದ್ದಾರೆ. ಆ ನಂತರ ಮಗು-ತಾಯಿಯನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ.[18ರ ಯುವತಿಯನ್ನು ತಾಯಿ ಮಾಡಿದ 12ರ ಬಾಲಕ!]
ಈ ಘಟನೆಗೆ ಮಾಜಿ ಮುಖ್ಯಮಂತ್ರಿ ಉಮನ್ ಚಾಂಡಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಕೇರಳದ ಆರೋಗ್ಯ ಸಚಿವರು ಘಟನೆ ಬಗ್ಗೆ ಸಂಪೂರ್ಣ ವರದಿ ಸಲ್ಲಿಸುವಂತೆ ಸೂಚನೆಯನ್ನು ನೀಡಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.