ವಿದ್ಯಾರ್ಥಿ ರೋಹಿತ್ ಸಾವು, ಸ್ಮೃತಿ ರಾಜೀನಾಮೆಗೆ ಆಗ್ರಹ
ಬೆಂಗಳೂರು, ಜ.19: ಹೈದರಾಬಾದಿನ ಕೇಂದ್ರ ವಿಶ್ವವಿದ್ಯಾಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ಸಾವಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಸ್ಪಷ್ಟಪಡಿಸಿದ್ದಾರೆ. ಈಗ ವಿದ್ಯಾರ್ಥಿಗಳ ಆಕ್ರೋಶ ದತ್ತಾತ್ರೇಯ ನಂತರ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ವಿರುದ್ಧ ತಿರುಗಿದೆ. ಮೈಕ್ರೋ ಬ್ಲಾಗಿಂಗ್ ತಾಣದಲ್ಲಿ ಸ್ಮೃತಿ ಇರಾನಿ ರಾಜೀನಾಮೆಗೆ ಆಗ್ರಹಿಸಿ ಅಭಿಯಾನ ಶುರುವಾಗಿದೆ.
ಹೈದರಾಬಾದ್ ವಿಶ್ವವಿದ್ಯಾಲಯದಿಂದ ಉಚ್ಚಾಟಿತರಾಗಿದ್ದ ಐವರು ದಲಿತ ವಿದ್ಯಾರ್ಥಿಗಳ ಪೈಕಿ ರೋಹಿತ್ ವೇಮುಲ ಅವರು ಭಾನುವಾರ ವಿಶ್ವವಿದ್ಯಾಲಯ ಆವರಣದ ವಸತಿಗೃಹದಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. [ಹೈದರಾಬಾದ್ : ನೊಂದ ದಲಿತ ವಿದ್ಯಾರ್ಥಿ ಆತ್ಮಹತ್ಯೆ, ವಿವಿ ಪ್ರಕ್ಷುಬ್ಧ]
ಎಬಿವಿಪಿ ಹಾಗೂ ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆ ನಡುವಿನ ಕಿತ್ತಾಟದ ಪರಿಣಾಮವಾಗಿ ವಿಶ್ವವಿದ್ಯಾಲಯದಲ್ಲಿ ಪ್ರಕ್ಷುಬ್ದ ವಾತಾವರಣ ಉಂಟಾಗಿದೆ.
ಸಚಿವ ದತ್ತಾತ್ರೇಯ, ಅಪ್ಪಾರಾವ್ ಹಾಗೂ ಎಬಿವಿಪಿ ನಾಯಕರಾದ ಸುಶೀಲ್ ಕುಮಾರ್, ವಿಷ್ಣು ವಿರುದ್ಧ ಅಂಬೇಡ್ಕರ್ ಸ್ಟೂಡೆಂಟ್ಸ್ ಯೂನಿಯನ್ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. [ವಿದ್ಯಾರ್ಥಿ ಸಾವಿಗೂ ಬಿಜೆಪಿಗೂ ಸಂಬಂಧವಿಲ್ಲ: ಸಚಿವ ಬಂಡಾರು]
ದಲಿತ ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದತ್ತಾತ್ರೇಯ ಅವರು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಇದಾದ ಬಳಿಕೆ ಐದಾರು ವಿದ್ಯಾರ್ಥಿಗಳನ್ನು ಕಳೆದ ವರ್ಷ ವಿವಿಯಿಂದ ಹೊರಹಾಕಲಾಗಿತ್ತು.