ಮೇಲ್ವರ್ಗದವರ ಜತೆ ಊಟ ಮಾಡಿದ್ದಕ್ಕಾಗಿ ಹಲ್ಲೆ: ದಲಿತ ಯುವಕ ಸಾವು
ನ್ಯೂ ತೆಹ್ರಿ (ಉತ್ತರಾಖಂಡ), ಮೇ 6: ಮದುವೆ ಆರತಕ್ಷತೆ ಸಮಾರಂಭದಲ್ಲಿ ಮೇಲ್ವರ್ಗದವರ ಜತೆ ಊಟ ಮಾಡಿದ್ದಕ್ಕಾಗಿ ಹಲ್ಲೆಗೆ ಒಳಗಾಗಿ ಗಾಯಗೊಂಡಿದ್ದ 23 ವರ್ಷದ ದಲಿತ ಯುವಕ ಚಿಕಿತ್ಸೆ ಫಲಿಸದೆ ಭಾನುವಾರ ಮೃತಪಟ್ಟಿದ್ದಾರೆ.
ಉತ್ತರಾಖಂಡದ ತೆಹ್ರಿ ಜಿಲ್ಲೆಯಲ್ಲಿ ಭಾನುವಾರ ಈ ಅಮಾನವೀಯ ಘಟನೆ ನಡೆದಿತ್ತು. ಕೆಳವರ್ಗದವನಾಗಿದ್ದರೂ ಮೇಲ್ವರ್ಗದವರು ಇದ್ದಾಗ ಅವರ ಎದುರು ಊಟ ಮಾಡಿದ್ದಕ್ಕಾಗಿ ಜೀತೇಂದ್ರ ಎಂಬುವವರ ಮೇಲೆ ಮಾರಕವಾಗಿ ಹಲ್ಲೆ ನಡೆಸಲಾಗಿತ್ತು.
ದಲಿತರಿಗೆ ಗುಜರಾತ್ ಸುರಕ್ಷಿತವಲ್ಲ: ಜಿಗ್ನೇಶ್ ಮೆವಾಣಿ
ಜಿಲ್ಲೆಯ ಶ್ರೀಕೋಟ್ ಗ್ರಾಮದಲ್ಲಿ ಏಪ್ರಿಲ್ 26ರಂದು ನಡೆದ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಈ ಘಟನೆ ನಡೆದಿತ್ತು ಎಂದು ಡಿಎಸ್ಪಿ ಉತ್ತಮ್ ಸಿಂಗ್ ಜಿಮ್ವಾಲ್ ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಜೀತೇಂದ್ರ ಅವರನ್ನು ಡೆಹರಾಡೂನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂಬತ್ತು ದಿನಗಳ ನಿರಂತರ ಚಿಕಿತ್ಸೆ ನೀಡಿದ್ದರೂ ಫಲಿಸದೆ ಅವರು ಮೃತಪಟ್ಟಿದ್ದಾರೆ.
ಬಿಜೆಪಿ-ಬಿಎಸ್ವೈ ದಲಿತ-ವಿರೋಧಿ ಎಂದು ಪಕ್ಷ ತೊರೆದ ಮಾಜಿ ಸಚಿವ
ಜೀತೇಂದ್ರ ಅವರ ಸಹೋದರಿ ನೀಡಿದ ದೂರಿನ ಆಧಾರದಲ್ಲಿ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗಜೇಂದ್ರ ಸಿಂಗ್, ಸೋಬನ್ ಸಿಂಗ್, ಕುಶಾಲ್ ಸಿಂಗ್, ಗಬ್ಬರ್ ಸಿಂಗ್, ಗಂಭೀರ್ ಸಿಂಗ್, ಹರ್ಬೀರ್ ಸಿಂಗ್ ಮತ್ತು ಹುಕುಂ ಸಿಂಗ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಡಿಎಸ್ಪಿ ಹೇಳಿದ್ದಾರೆ.