ಕೊರೊನಾ ಲಸಿಕೆ ಪಡೆಯಲು ಧೈರ್ಯ ಮಾಡಿ; ದಲೈ ಲಾಮಾ ಕರೆ
ನವದೆಹಲಿ, ಮಾರ್ಚ್ 6: ಶನಿವಾರ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿನ ಆಸ್ಪತ್ರೆಯೊಂದರಲ್ಲಿ ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡರು.
ಲಸಿಕೆ ಪಡೆದುಕೊಂಡ ನಂತರ ಮಾತನಾಡಿದ ಅವರು, ಜನರು ಅಧಿಕ ಸಂಖ್ಯೆಯಲ್ಲಿ ಲಸಿಕೆ ತೆಗೆದುಕೊಳ್ಳಲು ಮುಂದೆ ಬರಬೇಕು ಹಾಗೂ ಲಸಿಕೆ ತೆಗೆದುಕೊಳ್ಳುವುದು ಪ್ರಸ್ತುತ ಆರೋಗ್ಯಕ್ಕೆ ಬಹು ಮುಖ್ಯವಾಗಿದೆ ಎಂದು ಹೇಳಿದರು.
24 ಗಂಟೆ, 18327 ಕೇಸ್: ಭಾರತದಲ್ಲಿ ಭಯ ಹುಟ್ಟಿಸಿದ ಕೊರೊನಾವೈರಸ್!
ವೈದ್ಯರು ಹಾಗೂ ನನ್ನ ಸ್ನೇಹಿತರು ಲಸಿಕೆ ಪಡೆದುಕೊಳ್ಳಲು ನನಗೆ ಸಲಹೆ ನೀಡಿದರು. ಕೊರೊನಾದಂಥ ಗಂಭೀರ ಸೋಂಕನ್ನು ತಡೆಯಲು ಈ ಲಸಿಕೆ ತುಂಬಾ ಪ್ರಯೋಜನಕಾರಿ. ಈ ಲಸಿಕೆ ತೆಗೆದುಕೊಳ್ಳುವುದು ತುಂಬಾ ಮುಖ್ಯ. ಹೀಗಾಗಿ ನಾನು ಕೂಡ ಲಸಿಕೆ ಪಡೆದುಕೊಂಡೆ. ಅಧಿಕ ಸಂಖ್ಯೆಯಲ್ಲಿ ಜನರು ಲಸಿಕೆ ಪಡೆದುಕೊಳ್ಳಬೇಕು. ಲಸಿಕೆ ಪಡೆಯಲು ಎಲ್ಲರೂ ಧೈರ್ಯ ಮಾಡಿ ಎಂದು ಕರೆ ನೀಡಿದರು.
ದಲೈ ಲಾಮಾ ಅವರು ಲಸಿಕೆ ಪಡೆದುಕೊಂಡ ನಂತರ ಭಾರತೀಯ ಸರ್ಕಾರ ಹಾಗೂ ರಾಜ್ಯ ಔಷಧಾಲಯಕ್ಕೆ ದಲೈ ಲಾಮಾ ಕಚೇರಿ ಧನ್ಯವಾದ ಸಲ್ಲಿಸಿದೆ.
ಭಾರತದಲ್ಲಿ ಮಾರ್ಚ್ 1ರಿಂದ ಎರಡನೇ ಹಂತದ ಕೊರೊನಾ ಲಸಿಕಾ ಅಭಿಯಾನ ಆರಂಭವಾಗಿದ್ದು, ಈ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. 60 ವರ್ಷ ಮೇಲ್ಪಟ್ಟವರಿಗೆ ಆದ್ಯತೆಯಲ್ಲಿ ಲಸಿಕೆ ನೀಡಲಾಗುತ್ತಿದೆ.