ಪುಣೆಯಲ್ಲಿ ಭೀಮಾ-ಕೊರೆಗಾಂವ್ ಗಲಭೆ ಖಂಡಿಸಿದ ದಲೈಲಾಮ
ಪುಣೆ, ಜನವರಿ 10: ಭೀಮಾ-ಕೊರೆಗಾಂವ್ ಗೆಲುವಿಗೆ 200 ವರ್ಷ ತುಂಬಿದ ಸವಿನೆನಪಿಗಾಗಿ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸಭೆಯ ನಂತರ ಹುಟ್ಟಿಕೊಂಡ ಗಲಭೆಯ ಕುರಿತು ಟಿಬೆಟಿಯನ್ ಧರ್ಮಗುರು ದಲೈಲಾಮ ವಿಷಾದ ವ್ಯಕ್ತಪಡಿಸಿದರು.
ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮತ ಎಂಬುದು ವೈಯಕ್ತಿಕ ವಿಚಾರ ಮತ್ತು ವ್ಯವಹಾರ. ನಾವು ಹಿಂದು, ಮುಸ್ಲಿಮರೆಂದು ನಮ್ಮನ್ನು ವಿಭಜಿಸಿಕೊಳ್ಳಬಾರದು. ಸಿಟ್ಟಿನಿಂದ ಆಗುವ ಪ್ರಯೋಜನವೇನು? ಅದು ಆರೋಗ್ಯಕ್ಕೂ ಒಳ್ಳೆಯದಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದರು.
ವಿಡಿಯೋಗಳಲ್ಲಿ ನೋಡಿ ಮಹಾರಾಷ್ಟ್ರ ಬಂದ್ ಅಬ್ಬರ!
1818 ಜ.1 ರಂದು ಪೇಶ್ವೆಗಳ ವಿರುದ್ಧ ಈಸ್ಟ್ ಇಂಡಿಯಾ ಕಂಪೆನಿಯ ಜೊತೆ ಸೇರಿ ದಲಿತರು ಜಯಗಳಿಸಿ 200 ವರ್ಷ ಸಂದಿದ ಸವಿನೆನಪಿಗಾಗಿ ಈ ಆಚರಣೆ ಏರ್ಪಡಿಸಲಾಗಿತ್ತು. ಆದರೆ ಈ ಸಂದರ್ಭದಲ್ಲಿ, ಬ್ರಿಟಿಷರ ಗೆಲುವುದನ್ನು ಸಂಭ್ರಮಿಸುತ್ತಿರುವುದನ್ನು ಬಲಪಂಥೀಯ ಸಂಘಟನೆಗಳು ವಿರೋಧಿಸಿದ್ದರು. ಈ ಗಲಾಟೆಯೇ ಗಲಭೆಯಾಗಿ ಬದಲಾಗಿ ಓರ್ವ ವ್ಯಕ್ತಿ ಅಸುನೀಗಿದ್ದರು.
ಒಂದು ದಿನ ಮಹಾರಾಷ್ಟ್ರ ರಾಜ್ಯದಾದ್ಯಂತ ಬಂದ್ ಆಚರಿಸಲಾಗಿತ್ತು. ಈ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ ದಲೈಲಾಮ, ಭಾರತಕ್ಕೆ ಅತ್ಯಂತ ಹೆಚ್ಚಿನ ಸಾಮರ್ಥ್ಯವಿದೆ. ಆಧುನಿಕತೆ ಮತ್ತು ಸಾಂಪ್ರದಾಯಿಕ ಜ್ಞಾನ ಎರಡನ್ನೂ ಒಟ್ಟಾಗಿಸಿ ತನ್ನ ಅಗತ್ಯಗಳನ್ನು ನೀಗಿಸಿಕೊಳ್ಳುವ ಶಕ್ತಿಯಿದೆ. ಇಂಥ ಘಟನೆಗಳು ಭಾರತದ ಶಕ್ತಿಯನ್ನು ಕುಂದಿಸುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.