ಮಂಡ್ಯದಲ್ಲಿ ಲೀಥಿಯಂ ನಿಕ್ಷೇಪ ಪತ್ತೆ: ಅಣು ಶಕ್ತಿ ಇಲಾಖೆ ಸ್ಪಷ್ಟನೆ
ನವದೆಹಲಿ, ಫೆಬ್ರವರಿ 9: ಕರ್ನಾಟಕದ ಮಂಡ್ಯ ಜಿಲ್ಲೆಯ ಮರಳಗಾಲ-ಅಲ್ಲಾಪಟ್ಟಣ ಪ್ರದೇಶದಲ್ಲಿ ಲೀಥಿಯಂ ನಿಕ್ಷೇಪ ಪತ್ತೆಗೆ ಸಂಬಂಧಿಸಿದಂತೆ ಇನ್ನೂ ಪರಿಶೋಧನೆ ಕಾರ್ಯ ನಡೆಯುತ್ತಿದೆ. ಒಟ್ಟು 1,600 ಟನ್ಗಳಷ್ಟು ಲೀಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ಡಿಎಇ ತಿಳಿಸಿದೆ.
ಮಂಡ್ಯದಲ್ಲಿ ಪತ್ತೆಯಾಗಿರುವ ನಿಕ್ಷೇಪವನ್ನು 'ನಿರ್ಣಯ ವಿಭಾಗ' ಎಂದು ವರ್ಗೀಕರಿಸಲಾಗಿದೆ. ಅಂದರೆ ಇವು ವಾಣಿಜ್ಯಾತ್ಮಕ ಬಳಕೆಗೆ ಲಭ್ಯವಾಗುವುದು ಕಷ್ಟವಾಗಬಹುದು ಎಂದು ಅಣುಶಕ್ತಿ ಇಲಾಖೆಯ (ಡಿಎಇ) ಪರಮಾಣು ಖನಿಜಗಳ ನಿರ್ದೇಶನಾಲಯದ ಪರಿಶೋಧನೆ ಮತ್ತು ಸಂಶೋಧನೆ (ಎಎಂಡಿ) ಸ್ಪಷ್ಟಪಡಿಸಿದೆ.
ರಾಜ್ಯದ ಸಂಸದ ಜಿಎಸ್ ಬಸವರಾಜ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಕೇಂದ್ರ ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆಗಳ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಲೀಥಿಯಂ ನಿಕ್ಷೇಪದ ಬಗ್ಗೆ ಮಾಹಿತಿ ನೀಡಿದ್ದರೆ.
ಮಂಡ್ಯದಲ್ಲಿ ಅಲ್ಪ ಪ್ರಮಾಣದ ಲೀಥಿಯಂ ನಿಕ್ಷೇಪ ಪತ್ತೆ
ಸಂಶೋಧನೆ ಪೂರ್ಣಗೊಳ್ಳಬೇಕು
ಮರಳಗಾಲ-ಅಲ್ಲಾಪಟ್ಟಣ ಪ್ರದೇಶಗಳಲ್ಲಿ ಮೂರು ಹಂತಗಳಲ್ಲಿ ಎಎಂಡಿ ಪರಿಶೋಧನೆ ಕಾರ್ಯ ನಡೆಸಿದೆ. ಈ ಕಾರ್ಯ ಸಂಪೂರ್ಣವಾಗಿ ಅಂತ್ಯಗೊಂಡ ಬಳಿಕವೇ ಅಲ್ಲಿರುವ ಲೀಥಿಯಂ ಗುಣಮಟ್ಟ ಮತ್ತು ಪ್ರಮಾಣದ ಬಗ್ಗೆ ಹೆಚ್ಚಿನ ಖಚಿತತೆ ದೊರಕಲಿದೆ. ವಾಣಿಜ್ಯ ಉದ್ದೇಶಕ್ಕಾಗಿ ಅಲ್ಲಿನ ಲೀಥಿಯಂ ಹೊರ ತೆಗೆಯುವ ಚಟುವಟಿಕೆ ಕುರಿತು ತಾಂತ್ರಿಕ, ಸಾಮಾಜಿಕ ಮತ್ತು ಆರ್ಥಿಕ ಸಾಧ್ಯತೆಗಳನ್ನು ಪರಿಶೀಲಿಸಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದರು.
ಮತ್ತಷ್ಟು ಅಧ್ಯಯನದ ಅಗತ್ಯವಿದೆ
ಮೊದಲ ಹಂತದ ಪರಿಶೋಧನೆ 1979 ರಿಂದ 1998ರವರೆಗೂ ನಡೆದಿತ್ತು. 2013ರಲ್ಲಿ ಎರಡನೆಯ ಹಂತದ ಪರಿಶೋಧನೆ ಆರಂಭವಾಗಿದೆ. ಅಲ್ಲಿಂದ ಈ ಭಾಗದಲ್ಲಿ ನಿರಂತರ ಪರಿಶೋಧನಾ ಚಟುವಟಿಕೆಗಳು ನಡೆಯುತ್ತಿವೆ. 1600 ಟನ್ ನಿಕ್ಷೇಪದ ಅಂದಾಜು ಪ್ರಾಥಮಿಕ ಅಭಿಪ್ರಾಯವಷ್ಟೇ. ಇಲ್ಲಿ ಗುಣಮಟ್ಟದ ಹಾಗೂ ಕಾರ್ಯಚಟುವಟಿಕೆ ನಡೆಸಲು ಯೋಗ್ಯ ರೀತಿಯಲ್ಲಿ ನಿಕ್ಷೇಪಗಳು ಇವೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ಮತ್ತಷ್ಟು ಪರಿಶೋಧನೆ ಅಗತ್ಯವಿದೆ ಎಂದು ಡಿಎಇ ಹೇಳಿಕೆ ತಿಳಿಸಿದೆ.
ಮಂಡ್ಯದಲ್ಲಿ ಅಪರೂಪದ ಲೀಥಿಯಂ ನಿಕ್ಷೇಪ ಪತ್ತೆ
ಪ್ರಾಥಮಿಕ ಹಂತದಲ್ಲಿದೆ
ಮಂಡ್ಯದಲ್ಲಿ ಪತ್ತೆಯಾದ ಲೀಥಿಯಂ ನಿಕ್ಷೇಪ 14,100 ಟನ್ ಇರಬಹುದು ಎಂದು ಆರಂಭದ ಮಾಧ್ಯಮ ವರದಿಗಳು ಪ್ರಕಟಿಸಿದ್ದವು. ಆದರೆ ಇದು ನಿಜವಲ್ಲ ಎಂದು ಡಿಎಇ ಸ್ಪಷ್ಟಪಡಿಸಿದೆ. ಈಗ ನಡೆಯುತ್ತಿರುವ ಸಂಶೋಧನೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ನಿಕ್ಷೇಪ ಎಷ್ಟು ಭಾಗದಲ್ಲಿ ವ್ಯಾಪಿಸಿದೆ, ಅದರ ಪ್ರಮಾಣ ಎಷ್ಟು ಎಂಬುದನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ ನಂತರ ಅದನ್ನು ಹೊರತೆಗೆಯುವುದು ಆರ್ಥಿಕವಾಗಿ ಲಾಭದಾಯಕವೇ ಎಂಬುದರ ಬಗ್ಗೆ ಇಲಾಖೆಗೆ ವರದಿ ನೀಡಲಾಗುತ್ತದೆ ಎಂದು ಅದು ತಿಳಿಸಿದೆ.
ಪರಿಶೋಧನೆಯ ಲಾಭ ಸಿಗದೆಯೂ ಇರಬಹುದು
ಸೂಕ್ತ ತಂತ್ರಜ್ಞಾನ ಅಥವಾ ಮಾದರಿ ಲಭ್ಯವಾಗದ ಹೊರತು ನಿಕ್ಷೇಪದಿಂದ ಲಾಭದಾಯಕವಾಗಿ ಲೀಥಿಯಂ ಹೊರ ತೆಗೆಯುವುದು ಸಾಧ್ಯವಿಲ್ಲ. ಪರಿಶೋಧನೆಯ ನೈಜ ಪ್ರಯೋಜನ ಸಿಗದೆಯೂ ಇರಬಹುದು. ನಾಲ್ಕು ದಶಕಗಳಿಂದಲೂ ಹೆಚ್ಚು ಸಮಯದ ಪರಿಶೋಧನೆಯ ಪ್ರಯತ್ನಗಳನ್ನು ಈ ಹಂತದಲ್ಲಿ ಅಂದಾಜಿಸಲು ಸಾಧ್ಯವಿಲ್ಲ. ರಾಜಸ್ಥಾನ, ಗುಜರಾತ್, ಒಡಿಶಾ ಮತ್ತು ಛತ್ತೀಸಗಡಗಳಲ್ಲಿಯೂ ಲೀಥಿಯಂ ನಿಕ್ಷೇಪ ಕಂಡುಬಂದಿದೆ. ಇದು ಕೂಡ ಪ್ರಾಥಮಿಕ ಹಂತದಲ್ಲಿರುವ ಸಂಶೋಧನೆ ಎಂದು ಅದು ವಿವರಿಸಿದೆ.