ಪ.ಬಂಗಾಳ- ಒಡಿಶಾಗೆ ಅಪ್ಪಳಿಸಲಿರುವ ಯಾಸ್: ರೆಡ್ ಅಲರ್ಟ್ ಘೋಷಣೆ
ಕೋಲ್ಕತ್ತಾ, ಮೇ 26: ಬುಧವಾರದಂದು ಒಡಿಶಾದ ಪರದೀಪ್ ಮತ್ತು ಪಶ್ಚಿಮ ಬಂಗಾಳದ ಸಾಗರ್ ದ್ವೀಪದ ನಡುವಿನ ಕರಾವಳಿ ಪ್ರದೇಶಕ್ಕೆ ಯಾಸ್ ಚಂಡಮಾರುತ ಅಪ್ಪಳಿಸಲಿದ್ದು, ಪೂರ್ವ ಮತ್ತು ಪಶ್ಚಿಮ ಕರಾವಳಿ ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಿಲಾಗಿದೆ.
ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಬುಧವಾರ ಮಧ್ಯಾಹ್ನ ಧಮ್ರಾದ ಉತ್ತರ ಮತ್ತು ಬಾಲಸೋರ್ನ ದಕ್ಷಿಣಕ್ಕೆ ಚಂಡಮಾರುತ ಅಪ್ಪಳಿಸಲಿದೆ ಎಂದು ತಿಳಿಸಿದೆ.
ಒಡಿಶಾದ ದಕ್ಷಿಣ-ಆಗ್ನೇಯಕ್ಕೆ 160 ಕಿ.ಮೀ ಮತ್ತು ಪಶ್ಚಿಮ ಬಂಗಾಳದ ದಿಘಾದಿಂದ ದಕ್ಷಿಣ-ಆಗ್ನೇಯಕ್ಕೆ 240 ಕಿ.ಮೀ ದೂರದಲ್ಲಿ ಯಾಸ್ ಅಬ್ಬರ ಆರಂಭಗೊಳ್ಳಲಿದ್ದು, ಸಂಜೆ ಹೊತ್ತಿಗೆ ಹಲವೆಡೆ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ.
ಈಗಾಗಲೇ ಪಶ್ಚಿಮ ಬಂಗಾಳಕ್ಕೆ 45 ಎನ್ಡಿಆರ್ಎಫ್ ತಂಡ, ಒಡಿಶಾಗೆ 52 ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಎನ್ಡಿಆರ್ಎಫ್ ನಿರ್ದೇಶಕ ಎಸ್.ಎನ್ ಪ್ರಧಾನ್ ತಿಳಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 9 ಲಕ್ಷ ಹಾಗೂ ಒಡಿಶಾದಲ್ಲಿ 2 ಲಕ್ಷ ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.