ಮಹಾ ಚಂಡಮಾರುತ ಚುರುಕು: ನವೆಂಬರ್ 6 ರಿಂದ ಮತ್ತೆ ಮಳೆ ಶುರು
ಬೆಂಗಳೂರು, ನವೆಂಬರ್ 4: ಅರಬ್ಬಿ ಸಮುದ್ರದಲ್ಲಿ ಮತ್ತೆ ವಾಯುಭಾರ ಕುಸಿತ ಉಂಟಾಗಿದ್ದು, ಮಹಾ ಚಂಡಮಾರುತ ಚುರುಕಾಗಿದ್ದು, ಕೇರಳ, ಗುಜರಾತ್ ಸೇರಿದಂತೆ ಕರ್ನಾಟಕದ ಕೆಲ ಭಾಗಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ.
ಮತ್ತೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ, ನವೆಂಬರ್ 6ರಂದು ಗುಜರಾತ್, ಕೇರಳ, ತಮಿಳುನಾಡು ಸೇರಿದಂತೆ ಕರ್ನಾಟಕದ ಕೆಲ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
'ಮಹಾ' ಚಂಡಮಾರುತ ಪ್ರಭಾವ: ನವೆಂಬರ್ 6 ರಿಂದ ಎಲ್ಲೆಲ್ಲಿ ಮಳೆ
ಭಾರತೀಯ ಹವಾಮಾನ ಇಲಾಖೆ ಚಂಡಮಾರುತದಿಂದ ಭೂಕುಸಿತವಾಗುವ ಬಗ್ಗೆ ಯಾವುದೇ ನಿರ್ದಿಷ್ಟವಾದ ಸೂಚನೆ ನೀಡಿಲ್ಲ. ಕ್ಯಾರ್ ಚಂಡಮಾರುತದಿಂದಾಗಿ ಕಳೆದ ಕೆಲವು ದಿನಗಳಲ್ಲಿ ಗುಜರಾತ್ನ ಹಲವಾರು ಭಾಗಗಳಲ್ಲಿ ಭಾರಿ ಮಳೆಯಾಗಿತ್ತು. ಅದು ಈಗ ದುರ್ಬಲಗೊಂಡು ಒಮಾನ್ ಕಡೆಗೆ ಸಾಗಿದೆ.
ಕೇರಳದ ನಾಲ್ಕು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ಕೇರಳದ ಎರ್ನಾಕುಲಮ್, ತ್ರಿಶೂರ್, ಮಲಪ್ಪುರಂ ಹಾಗೂ ಕೋಳಿಕ್ಕೊಡ್ನಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲಿ 6 ಸೆಂ.ಮೀನಿಂದ 20 ಸೆಂ.ಮೀವರೆಗೆ ಮಳೆಯಾಗುವ ನಿರೀಕ್ಷೆ ಇದೆ. ಉಳಿದ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಗುಜರಾತ್ನಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ.
ಗುಜರಾತ್ನ ದಕ್ಷಿಣ ಭಾಗದಲ್ಲಿ ಮಳೆ
ಮಹಾ ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ವಾಯುವ್ಯ ದಿಕ್ಕಿನಲ್ಲಿ ಮತ್ತು ನವೆಂಬರ್ 2ರಿಂದ4ರ ವರೆಗೆ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳಲ್ಲಿ ಮಹಾ ಚಂಡಮಾರುತ ತೀವ್ರಗೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಳೆ ಕುರಿತು ಹವಾಮಾನ ಇಲಾಖೆ ಏನು ಹೇಳುತ್ತೆ?
ನವೆಂಬರ್ 6ರಿಂದ ಮಹಾ ಚಂಡಮಾರುತ ಪೂರ್ವ-ಈಶಾನ್ಯ ದಿಕ್ಕಿನಲ್ಲಿ ದಕ್ಷಿಣ ಗುಜರಾತ್ ಕರಾವಳಿಯ ಕಡೆಗೆ ಮರು ತಿರುವು ತೆಗೆದುಕೊಳ್ಳುತ್ತದೆ. ಸೌರಾಷ್ಟ್ರದ ಕರಾವಳಿ ಸೇರಿದಂತೆ ದಕ್ಷಿಣ ಗುಜರಾತ್ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರದ ನಿರ್ದೇಶಕ ಜಯಂತ್ ಸರ್ಕಾರ್ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಮಳೆ ಬರುತ್ತಾ?
ರಾಜ್ಯದಾದ್ಯಂತ ಒಣ ಹವೆ ಮುಂದುವರೆದಿದ್ದು, ಉಷ್ಣಾಂಶದಲ್ಲಿ ಭಾರಿ ಏರಿಕೆಯಾಗಿದೆ. ಮತ್ತೆ ಚಂಡ ಮಾರುತ ಅಪ್ಪಳಿಸುವ ಸಾಧ್ಯತೆ ಇದ್ದು, ಬೆಂಗಳೂರಲ್ಲೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.