ಜವಾದ್ ಚಂಡಮಾರುತ: ಆಂಧ್ರ, ಒಡಿಶಾ, ದಕ್ಷಿಣದ ರಾಜ್ಯಗಳಲ್ಲಿ ಭಾರಿ ಮಳೆ
ನವದೆಹಲಿ, ಡಿಸೆಂಬರ್ 3: ದಕ್ಷಿಣ ಭಾರತದಲ್ಲಿ ಸುರಿದ ಧಾರಾಕಾರ ಮಳೆಯಿಂದ ಸೃಷ್ಟಿಯಾಗಿದ್ದ ಪ್ರವಾಹ ಪರಿಸ್ಥಿತಿ ಇನ್ನೂ ಚೇತರಿಸಿಕೊಂಡಿಲ್ಲ. ಇದರ ಮಧ್ಯೆ ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ಜವಾದ್ ಚಂಡಮಾರುತ ತೀವ್ರಗೊಳ್ಳುವ ನಿರೀಕ್ಷೆಯಿದೆ. ಅದು ಗಂಟೆಗೆ ಸುಮಾರು 100 ಕಿ.ಮೀ ವೇಗದಲ್ಲಿ ಚಲಿಸಿ, 2021ರ ಡಿಸೆಂಬರ್ 4ರಂದು ಶನಿವಾರ ಬೆಳಿಗ್ಗೆ ಉತ್ತರ ಆಂಧ್ರಪ್ರದೇಶ- ಒಡಿಶಾದ ಕರಾವಳಿ ಭಾಗಕ್ಕೆ ತಲುಪುವ ಸಾಧ್ಯತೆಯಿದೆ.
ಶುಕ್ರವಾರ ಸಂಜೆ 5.30ಕ್ಕೆ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಮುಂದಿನ 24 ಗಂಟೆಗಳಲ್ಲಿ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆ ಇದೆ, ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಚಂಡಮಾರುತದ ಹಿನ್ನೆಲೆ ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಡಿಸೆಂಬರ್ 4, ಶನಿವಾರದಂದು ರೆಡ್ ಅಲರ್ಟ್ ಘೋಷಿಸಲಾಗಿದೆ.
ಜವಾದ್ ಚಂಡಮಾರುತ ಭೀತಿ: ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ
ಚಂಡಮಾರುತ ಭೀತಿ ಹಿನ್ನೆಲೆ ದಕ್ಷಿಣ ಕರಾವಳಿಯ ಹಲವು ರಾಜ್ಯಗಳಲ್ಲಿ ಮುಂದಿನ 24 ಗಂಟೆಗಳ ನಂತರದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಆಂಧ್ರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು, ಅಂಡಮಾನ ಮತ್ತು ನಿಕೋಬಾರ್ ಪ್ರದೇಶದಲ್ಲಿ ಒಟ್ಟು 62 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(NDRF)ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಆಂಧ್ರ ಪ್ರದೇಶ:
ಜವಾದ್ ಚಂಡಮಾರುತ ಶನಿವಾರ ಬಂಗಾಳಕೊಲ್ಲಿಯ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿರುವುದರಿಂದ ಆಂಧ್ರಪ್ರದೇಶ ಸರ್ಕಾರವು ಉತ್ತರ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಗುರುವಾರ ಶ್ರೀಕಾಕುಳಂ, ವಿಜಯನಗರಂ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದು, ಎಲ್ಲಾ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಗತ್ಯವಿರುವ ಕಡೆ ಪರಿಹಾರ ಶಿಬಿರಗಳನ್ನು ಸ್ಥಾಪಿಸಲು ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ್ದಾರೆ.
ಉತ್ತರ ಮತ್ತು ದಕ್ಷಿಣ ಕರಾವಳಿಯಲ್ಲಿ ಮಳೆ:
ಹವಾಮಾನ ಇಲಾಖೆಯು ದಕ್ಷಿಣ ಕರಾವಳಿ ಒಡಿಶಾದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮತ್ತು ಅತಿ ಭಾರೀ ಮಳೆಯೊಂದಿಗೆ ಹಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ. ಉತ್ತರ ಕರಾವಳಿ ಆಂಧ್ರಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುತ್ತದೆ. ಹವಾಮಾನ ವೈಪರೀತ್ಯದಿಂದಾಗಿ ತಮಿಳುನಾಡು ಮತ್ತು ಕೇರಳದಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಒಡಿಶಾದಲ್ಲಿ ಭತ್ತದ ಕೊಯ್ಲಿಗೆ ಸಂಕಷ್ಟ:
ಜವಾದ್ ಚಂಡಮಾರುತ ಈ ವಾರಾಂತ್ಯದಲ್ಲಿ ಒಡಿಶಾಗೆ ಅಪ್ಪಳಿಸುವ ಮುನ್ಸೂಚನೆ ನಡುವೆ ರೈತರು ಭತ್ತದ ಆರಂಭಿಕ ಕೊಯ್ಲು ಮತ್ತು ಮಾರಾಟದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಡಿಸೆಂಬರ್ ತಿಂಗಳಾಂತ್ಯದ ವೇಳೆಗೆ ಭತ್ತದ ಮಂಡಿಗಳು ತೆರೆಯಲಿದ್ದು, ತಿಂಗಳ ಮಧ್ಯಭಾಗದಲ್ಲಿ ಕಟಾವು ಆರಂಭಿಸಲು ರೈತರು ಸಿದ್ಧತೆ ನಡೆಸಿದ್ದರು. "ಮೊದಲು ಯಾಸ್, ನಂತರ ಸುಗ್ಗಿಯ ಪೂರ್ವದಲ್ಲಿ ಅಕಾಲಿಕ ಮಳೆ ಮತ್ತು ಈಗ ಮತ್ತೊಂದು ಚಂಡಮಾರುತ ಎದುರಾಗಿದೆ.
ರೈತರು ಪರಿಸ್ಥಿತಿಯಿಂದ ಚೇತರಿಸಿಕೊಳ್ಳುವುದಕ್ಕೆ ರೈತರಿಗೂ ಸಮಯ ಸಿಕ್ಕಿಲ್ಲ. ಭತ್ತ ಇನ್ನೂ ಸಂಪೂರ್ಣವಾಗಿ ಹಣ್ಣಾಗಿಲ್ಲ ಆದರೆ ಅದನ್ನು ಬೇಗ ಕೊಯ್ಲು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಬಾಲಸೋರ್ ಜಿಲ್ಲೆಯ ಜಲೇಶ್ವರ ಬ್ಲಾಕ್ನ ಚುರ್ಮುರಾ ಗ್ರಾಮದ ನಿವಾಸಿ ದೇಬೇಂದ್ರ ರೌತ್ ಹೇಳಿದ್ದಾರೆ. ಪ್ರಸಕ್ತ ವರ್ಷ ಭತ್ತ ಖರೀದಿ ದರವನ್ನು ಪ್ರತಿ ಕ್ವಿಂಟಲ್ಗೆ 1,940 ರೂ. ಆದರೆ, ರೈತರು ತಮ್ಮ ಉತ್ಪನ್ನವನ್ನು ಕ್ವಿಂಟಲ್ಗೆ 900-1000 ರೂ.ಗೆ ಮಾರಾಟ ಮಾಡಲು ಮುಂದಾಗಿದ್ದು, ನಷ್ಟ ಅನುಭವಿಸುತ್ತಿದ್ದಾರೆ.
ನೌಕಾಪಡೆಯ ಪೂರ್ವಭಾವಿ ಕ್ರಮ:
"ಬಂಗಾಳಕೊಲ್ಲಿಯಲ್ಲಿ ಚಂಡಮಾರುತವು ವಾರಾಂತ್ಯದಲ್ಲಿ ದಕ್ಷಿಣ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ ಭಾರೀ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ. ಭಾರತೀಯ ಕೋಸ್ಟ್ ಗಾರ್ಡ್ ಸಮುದ್ರದಲ್ಲಿನ ಜೀವರಾಶಿ ಮತ್ತು ಆಸ್ತಿಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ನೌಕಾಪಡೆಗಳಿಗೆ ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆಯನ್ನು ರವಾನಿಸಲಾಗಿದೆ," ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.