ಫೋನಿ ಚಂಡಮಾರುತಕ್ಕೆ ಒಡಿಶಾ, ಆಂಧ್ರ, ಪ.ಬಂಗಾಲ ಅಲ್ಲೋಲ ಕಲ್ಲೋಲ
ಎರಡು ದಶಕದಲ್ಲೇ ಅತ್ಯಂತ ಪ್ರಬಲ ಎನಿಸಿದ ಫೋನಿ ಚಂಡಮಾರುತ ಭಾರತ ಪ್ರವೇಶಿಸಿ, ಒಡಿಶಾವನ್ನು ಅಕ್ಷರಶಃ ವಿಲವಿಲ ಎನಿಸಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ದೇವಾಲಯಗಳ ನಗರಿ ಪುರಿಯಲ್ಲಿ ನೀರೋ ನೀರು. ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಲದ ಕರಾವಳಿ ಪ್ರದೇಶಗಳಲ್ಲೂ ಭಾರೀ ಮಾರುತಗಳು ಬೀಸುತ್ತಿವೆ.
ಚಂಡಮಾರುತದ ಅಬ್ಬರ ಮಧ್ಯಾಹ್ನದ ನಂತರ ತಗ್ಗಿ, ನಾಳೆ (ಶನಿವಾರ) ಬೆಳಗ್ಗೆ ಹೊತ್ತಿಗೆ ಪೂರ್ತಿ ತಮಣಿ ಆಗಬಹುದು ಎಂಬ ಅಂದಾಜಿದೆ. ಒಡಿಶಾ ಸರಕಾರದಿಂದ ಕರಾವಳಿ ಪ್ರದೇಶದ ಹನ್ನೊಂದು ಲಕ್ಷ ಮಂದಿಯನ್ನು ಎತ್ತರದ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಭೂ ಸೇನೆ, ನೌಕಾ ಸೇನೆ, ವಾಯು ಸೇನೆಯ ಜತೆಗೆ ವಿಪತ್ತು ನಿರ್ವಹಣಾ ಪಡೆ ಮತ್ತಿತರ ಸಂಸ್ಥೆಗಳು ರಕ್ಷಣಾ ಕಾರ್ಯಕ್ಕೆ ಸನ್ನದ್ಧ ಸ್ಥಿತಿಯಲ್ಲಿವೆ.
ಚಂಡಮಾರತದ ಅಬ್ಬರ ಕುರಿತ ಅಪ್ಡೇಟ್ಸ್, ಸಹಾಯಕ್ಕಾಗಿ ಡಯಲ್ 1938
ಫೋನಿ ಚಂಡಮಾರುತದಿಂದ ತೊಂದರೆಗೆ ಒಳಗಾದವರ ಜತೆಗೆ ಇಡೀ ದೇಶ ಮತ್ತು ಕೇಂದ್ರ ಸರಕಾರ ಇದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜಸ್ತಾನದ ಸಭೆಯೊಂದರಲ್ಲಿ ಹೇಳಿದ್ದಾರೆ. ಅಂದಹಾಗೆ ಫೋನಿ ಚಂಡಮಾರುತದಿಂದ ಏನೇನಾಯ್ತು ಎಂಬುದರ ಸ್ಥೂಲ ಮಾಹಿತಿ ಇಲ್ಲಿದೆ:
ಹನ್ನೊಂದು ಲಕ್ಷ ಮಂದಿ ಸ್ಥಳಾಂತರ
ಒಡಿಶಾದ ಭುವನೇಶ್ವರದಿಂದ ಹೊರಡಬೇಕಾದ ಎಲ್ಲ ವಿಮಾನಗಳನ್ನು ಶುಕ್ರವಾರ ಮಧ್ಯರಾತ್ರಿಯಿಂದಲೇ ರದ್ದುಗೊಳಿಸಲಾಗಿದೆ. ಇನ್ನು ಕೋಲ್ಕತ್ತಾ ವಿಮಾನ ನಿಲ್ದಾಣವನ್ನು ಶುಕ್ರವಾರ ಮಧ್ಯಾಹ್ನ ಮೂರರಿಂದ ಶನಿವಾರ ಬೆಳಗ್ಗೆ ಎಂಟು ಗಂಟೆ ತನಕ ಮುಚ್ಚಲಾಗುತ್ತಿದೆ. ಕೋಲ್ಕತ್ತಾದಿಂದ ಇನ್ನೂರಕ್ಕೂ ಹೆಚ್ಚು ವಿಮಾನ ರದ್ದು ಮಾಡಲಾಗಿದೆ. ಐನೂರಕ್ಕೂ ಹೆಚ್ಚು ಗರ್ಭಿಣಿಯರು ಸೇರಿ ಹನ್ನೊಂದು ಲಕ್ಷ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಈ ದಿನ ಮನೆಯೊಳಗೆ ಇರುವಂತೆ ಸೂಚನೆ ನೀಡಲಾಗಿದೆ. ಗಂಜಾಂ ಜಿಲ್ಲೆಯೊಂದರಿಂದಲೇ ಮೂರು ಲಕ್ಷಕ್ಕೂ ಹೆಚ್ಚು ಮಂದಿ, ಪುರಿಯಲ್ಲಿ ಒಂದು ಕಾಲು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಶೆಲ್ಟರ್ ಗಳಲ್ಲಿ ಇರುವ ಜನರಿಗೆ ಅಡುಗೆ ತಯಾರಿಸಲು ಐದು ಸಾವಿರಕ್ಕೂ ಹೆಚ್ಚು ಅಡುಗೆ ಮನೆ ಕಾರ್ಯ ನಿರ್ವಹಿಸುತ್ತಿವೆ.
ಮಮತಾ ಬ್ಯಾನರ್ಜಿ ಪ್ರಚಾರ ಸಭೆಗಳು ರದ್ದು
ಫೋನಿ ಚಂಡಮಾರುತದ ಕಾರಣಕ್ಕೆ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಎಲ್ಲ ಚುನಾವಣೆ ಪ್ರಚಾರ ಸಭೆಗಳನ್ನು ರದ್ದು ಮಾಡಿದ್ದಾರೆ. ಜಾರ್ಖಂಡ್ ನ ಛಲಿಬಸದಲ್ಲಿ ಮೇ ಐದನೇ ತಾರೀಕು ನಿಗದಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಸಭೆಯು ಒಂದು ದಿನ ಮುಂದಕ್ಕೆ ಹಾಕಲಾಗಿದೆ. ಶುಕ್ರವಾರದಂದು ಜಾರ್ಖಂಡ್ ನಲ್ಲಿ ನಿಗದಿ ಆಗಿದ್ದ ಅಮಿತ್ ಶಾ ಹಾಗೂ ಯೋಗಿ ಆದಿತ್ಯನಾಥ್ ಚುನಾವಣೆ ಸಭೆಗಳನ್ನು ರದ್ದು ಮಾಡಲಾಗಿದೆ. ಆಂಧ್ರಪ್ರದೇಶದಲ್ಲಿ ಫೋನಿಯ ಪರಿಣಾಮವಾಗಿ ಭಾರೀ ಮಳೆಯಾಗಿದ್ದು, ಶ್ರೀಕಾಕುಲಂನಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿಯನ್ನು ನೂರಕ್ಕೂ ಹೆಚ್ಚು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ಫೋನಿ ಚಂಡಮಾರುತದ ಅಬ್ಬರಕ್ಕೆ ಮೊದಲ ದಿನವೇ ಐವರು ಬಲಿ
ಪಶ್ಚಿಮ ಬಂಗಾಲದ ಮೇಲೂ ಚಂಡಮಾರುತದ ಪ್ರಭಾವ
ಪರಿಹಾರ ಆಯುಕ್ತರು, ಜಿಲ್ಲಾಧಿಕಾರಿಗಳು ತಳ ಮಟ್ಟದಲ್ಲಿ ಪರಿಹಾರ ಕಾರ್ಯಾಚರಣೆಗಳ ನೇತೃತ್ವ ವಹಿಸಿದ್ದಾರೆ. ಭುವನೇಶ್ವರದಲ್ಲಿ ಪರಿಹಾರ ಸಾಮಗ್ರಿಗಳ ಜತೆಗೆ ಟ್ರಕ್ ಗಳು ಸಿದ್ಧವಾಗಿವೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸನ್ನಿವೇಶದ ಮೇಲೆ ನಿಗಾ ಇರಿಸಿದ್ದಾರೆ. ಪೂರ್ವ ಕರಾವಳಿ ರೈಲ್ವೆಯು ಶನಿವಾರದ ತನಕ ನೂರಕ್ಕೂ ಹೆಚ್ಚು ರೈಲನ್ನು ರದ್ದು ಮಾಡಿದೆ. ಗುರುವಾರದಂದು ಪುರಿಯಿಂದ ಹೌರ ಮತ್ತು ಶಾಲಿಮಾರ್ (ಪಶ್ಚಿಮ ಬಂಗಾಲ) ತನಕ ಪ್ರವಾಸಿಗರ ಸ್ಥಳಾಂತರಕ್ಕಾಗಿಯೇ ವಿಶೇಷ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪಶ್ಚಿಮ ಬಂಗಾಲದ ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ್, ದಕ್ಷಿಣ ಮತ್ತು ಉತ್ತರ 24 ಪರಗಣ, ಹೌರಾ, ಹೂಗ್ಲಿ, ಝಾರ್ ಗ್ರಾಮ್ ಜಿಲ್ಲೆಗಳು ಹಾಗೂ ಕೋಲ್ಕತ್ತಾದಲ್ಲೂ ಚಂಡಮಾರುತದ ಪ್ರಭಾವ ಆಗಿದೆ.
'ಫೋನಿ' ರುದ್ರನರ್ತನ: ಭಯಾನಕ ಚಂಡಮಾರುತದ ವಿಡಿಯೋ
ಇಪ್ಪತ್ತು ವರ್ಷಗಳ ನಂತರ ಪ್ರಬಲ ಚಂಡಮಾರುತ
ಆಂಧ್ರಪ್ರದೇಶದ ಕರಾವಳಿ ಭಾಗದ ಜನರಿಗೆ ವಿದ್ಯುತ್ ಇಲಾಖೆಯಿಂದ ಮನವಿ ಮಾಡಿದ್ದು, ಅಪಘಾತಗಳಿಗೆ ಈಡಾಗದಂತೆ ಎಚ್ಚರ ವಹಿಸಲು ಮನವಿ ಮಾಡಲಾಗಿದೆ. ಹನ್ನೆರಡು ಸಾವಿರ ವಿದ್ಯುತ್ ಕಂಬ, ನಲವತ್ತು ಕಂಬದ ಡ್ರಿಲ್ಲಿಂಗ್ ಮಷೀನ್, ನಲವತ್ತು ಜನರೇಟರ್, ಎರಡು ಸಾವಿರ ಟ್ರಾನ್ಸ್ ಫಾರ್ಮರ್ಸ್ ಸೇರಿದಂತೆ ಇತರ ಅಗತ್ಯ ಸಲಕರಣೆಗಳನ್ನು ಯಾವ ಪ್ರದೇಶದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇದೆಯೋ ಅಲ್ಲಿಗೆ ಕಳುಹಿಸಲಾಗಿದೆ. ಇಪ್ಪತ್ತು ವರ್ಷಗಳ ಹಿಂದೆ 'ಸೂಪರ್ ಸೈಕ್ಲೋನ್' ಬಂದಿತ್ತು. ಹತ್ತು ಸಾವಿರ ಮಂದಿಯ ಪ್ರಾಣ ಕಸಿದಿತ್ತು ಅ ನಂತರ ಬಂದಿರುವ ಅತ್ಯಂತ ಪ್ರಬಲ ಚಂಡಮಾರುತ ಫೋನಿ ಎನ್ನಲಾಗುತ್ತಿದೆ. ಫೋನಿ ಎಂಬ ಹೆಸರು ಸೂಚಿಸಿರುವುದು ಬಾಂಗ್ಲಾದೇಶ್. ಅದನ್ನು ಭಾಷಾಂತರ ಮಾಡುವುದಾದರೆ 'ಹಾವಿನ ಹೆಡೆ' ಎಂದರ್ಥ.