ಶುಕ್ರವಾರದಿಂದ ನಾಗಪುರದಲ್ಲಿ ಮಹತ್ವದ ಆರ್.ಎಸ್.ಎಸ್ ಸಭೆ ಆರಂಭ
ನಾಗಪುರ, ಮಾರ್ಚ್ 8: ಮೂರು ವರ್ಷಗಳಿಗೊಮ್ಮೆ ನಡೆಯುವ ಮಹತ್ವದ ಆರ್.ಎಸ್.ಎಸ್ ಸಭೆ ಶುಕ್ರವಾರದಿಂದ ನಾಗಪುರದಲ್ಲಿ ಆರಂಭವಾಗಲಿದೆ. ಮುಂದಿನ ಮೂರು ವರ್ಷಗಳ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಈ ಸಭೆಯನ್ನು ಅಖಿಲ ಭಾರತೀಯ ಪ್ರತಿನಿಧಿ ಸಭಾ ಎಂದು ಕರೆಯಲಾಗುತ್ತದೆ. ಇದರಲ್ಲಿ ಮಾರ್ಚ್ 10ರಂದು ಮುಂದಿನ ಸರಕಾರ್ಯವಾಹಕರ (ಪ್ರಧಾನ ಕಾರ್ಯದರ್ಶಿ) ಆಯ್ಕೆಯೂ ನಡೆಯಲಿದೆ. ಇವರು ಸಂಘದ ದಿನದಿತ್ಯದ ಆಗು ಹೋಗುಗಳ ಬಗ್ಗೆ ಗಮನ ಹರಿಸಲಿದ್ದಾರೆ.
ಮೂಲಗಳ ಪ್ರಕಾರ ಆರ್.ಎಸ್.ಎಸ್ ನಾಯಕತ್ವದಲ್ಲಿ ಬದಲಾವಣೆ ನಡೆಯುವ ಸಾಧ್ಯತೆ ಇದೆ. ಸದ್ಯ ಭಯ್ಯಾಜಿ ಜೋಶಿ ಸರಕಾರ್ಯವಾಹಕವಾಗಿದ್ದಾರೆ. ಇದು ಸರಸಂಘಚಾಲಕ ಮೋಹನ್ ಭಾಗವತ್ ನಂತರದ ಸ್ಥಾನವಾಗಿದೆ. ಸರಕಾರ್ಯವಾಹಕ ಹುದ್ದೆ ಕನ್ನಡಿಗ ದತ್ತಾತ್ರೇಯ ಹೊಸಬಾಳೆಯವರಿಗೆ ಸಿಗುವ ಸಾಧ್ಯತೆಯೂ ಇದೆ.
ಚುನಾಯಿತ ಪ್ರತಿನಿಧಿಗಳು ಸರಕಾರ್ಯವಾಹಕರ ಆಯ್ಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆರ್.ಎಸ್.ಎಸ್ ನಾಯಕ ಮನಮೋಹನ್ ವೈದ್ಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಸಭೆಯಲ್ಲಿ 1,500 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಬಹುದು ಎಂದು ಅವರು ಅಂದಾಜಿಸಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಸೇರಿದಂತೆ ಉನ್ನತ ಬಿಜೆಪಿ ನಾಯಕರು ಮಾರ್ಚ್ 9ರಂದು ನಡೆಯಲಿರುವ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.