ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗಾಗಿ ನಿರ್ಣಾಯಕ ಸಭೆ: ನಾಲ್ಕು ಖಚಿತ ಸಾಧ್ಯತೆಗಳು
ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ನಿರ್ಣಾಯಕ ಸಭೆ ಇನ್ನು ಸ್ವಲ್ಪಹೊತ್ತಿನಲ್ಲಿ ಆರಂಭವಾಗಲಿದೆ. ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ, ಅಧಿಕೃತವಾಗಿ ಆ ಹುದ್ದೆಯಿಂದ ಕೆಳಗಿಳಿಯುವ ಸಾಧ್ಯತೆ ಇರುವುದರಿಂದ, ಈ ಸಭೆಗೆ ಭಾರೀ ಮಹತ್ವ ಬಂದಿದೆ.
ವರ್ಚುಯಲ್ ಸಭೆಯಲ್ಲಿ ಭಾಗವಹಿಸಲಿರುವ ಕಾಂಗ್ರೆಸ್ ಮುಖಂಡರು ಮತ್ತು ಅಸಂಖ್ಯಾತ ಕಾರ್ಯಕರ್ತರು ಈ ಸಭೆಯಲ್ಲಿ ಹೊರಬೀಳುವ ಅಂತಿಮ ನಿರ್ಧಾರದ ಬಗ್ಗೆ ತೀವ್ರ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಖರ್ಗೆ ಹೆಸರು ಚಾಲ್ತಿಯಲ್ಲಿ: ಸಿದ್ದರಾಮಯ್ಯ ಹೀಗ್ಯಾಕೆ ಟ್ವೀಟ್ ಮಾಡಿದ್ರು?
ಕಳೆದ ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ನಂತರ ಅಧ್ಯಕ್ಷ ಹುದ್ದೆಗೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರು. ಅಲ್ಲಿಂದ, ಆ ಹುದ್ದೆಯನ್ನು ಯಾರು ಅಲಂಕರಿಸಬೇಕು ಎನ್ನುವ ವಿಚಾರದಲ್ಲಿ ಬರೀ ಚರ್ಚೆಗಳು ನಡೆಯುತ್ತಿತ್ತೋ ವಿನಃ ಯಾವ ಸ್ಪಷ್ಟ ನಿರ್ಧಾರವೂ ಬಂದಿರಲಿಲ್ಲ.
ಕರ್ನಾಟಕದ ಕಾಂಗ್ರೆಸ್ಸಿಗರಿಗೆ ರಾಹುಲ್ ಗಾಂಧಿ ಮೇಲೆ ಒಲವು!
ಕಾಂಗ್ರೆಸ್ ಕಾರ್ಯಕಾರಿಣಿಯ ಸದಸ್ಯರ ಜೊತೆಗೆ ಹಾಲೀ ಸಂಸದರೂ ಈ ವರ್ಚುಯಲ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕೆಲವು ದಿನಗಳ ಹಿಂದೆ, ಹಲವು ಕಾಂಗ್ರೆಸ್ ಮುಖಂಡರು, ನಾಯಕತ್ವದಲ್ಲಿ ಬದಲಾವಣೆಯಾಗಬೇಕೆಂದು ಧ್ವನಿ ಎತ್ತಿದ್ದರು. ಕಾಂಗ್ರೆಸ್ ಅಧ್ಯಕ್ಷರು ಯಾರು ಆಗಬಹುದು, ಇಲ್ಲಿದೆ ನಾಲ್ಕು ಸಾಧ್ಯತೆಗಳು:
ಸೋನಿಯಾ ಗಾಂಧಿಯೇ ಪ್ರಧಾನಿಯಾಗಬೇಕೆಂದು ಒಕ್ಕೂರಿಲಿನಿಂದ ಒತ್ತಾಯಿಸಿದ್ದರು
ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದ ವೇಳೆ, ಕಾಂಗ್ರೆಸ್ಸಿನ ಎಲ್ಲಾ ಸಂಸದರು, ಸೋನಿಯಾ ಗಾಂಧಿಯೇ ಪ್ರಧಾನಿಯಾಗಬೇಕೆಂದು ಒಕ್ಕೂರಿಲಿನಿಂದ ಒತ್ತಾಯಿಸಿದ್ದರು. ಆದರೆ, ಇದಕ್ಕೆ ಸೋನಿಯಾ ಆಸ್ಪದ ನೀಡದೇ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಈಗ, ಅಂತಹ ಸನ್ನಿವೇಶ ಮತ್ತೊಮ್ಮೆ ಸೃಷ್ಟಿಯಾಗುವ ಸಾಧ್ಯತೆಯಿಲ್ಲದಿಲ್ಲ. ಪಕ್ಷದ ಎಲ್ಲಾ ಮುಖಂಡರು, ಸೋನಿಯಾ ಅಧ್ಯಕ್ಷರಾಗಿ ಮುಂದುವರಿಯಲಿ ಎನ್ನುವ ನಿರ್ಣಯಕ್ಕೆ ಬರಬಹುದು.
ರಾಹುಲ್ ಗಾಂಧಿಯ ಹಿಂದೆ ಕಾಂಗ್ರೆಸ್ ಮುಖಂಡರು ಬೀಳಬಹುದು
ಒಂದು ವೇಳೆ ಸೋನಿಯಾ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯಲು ಸುತರಾಂ ಒಪ್ಪದಿದ್ದರೆ, ರಾಹುಲ್ ಗಾಂಧಿಯ ಹಿಂದೆ ಕಾಂಗ್ರೆಸ್ ಮುಖಂಡರು ಬೀಳಬಹುದು. ಆದರೆ, ಕಾಂಗ್ರೆಸ್ ಮೂಲಗಳ ಪ್ರಕಾರ, ರಾಹುಲ್ ಗಾಂಧಿ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಸಾಧ್ಯತೆ ಕಮ್ಮಿ. ಅಂದರೆ, ಅವರು ಅಧ್ಯಕ್ಷರಾಗಲು ಒಪ್ಪುವುದಿಲ್ಲ.
ಕಾಂಗ್ರೆಸ್ ಆಂತರಿಕ ಚುನಾವಣೆಯ ಮೊರೆ ಹೋಗಬಹುದು
ಸೋನಿಯಾ - ರಾಹುಲ್ ಇಬ್ಬರೂ ಒಪ್ಪದಿದ್ದರೆ, ಕಾಂಗ್ರೆಸ್ ಆಂತರಿಕ ಚುನಾವಣೆಯ ಮೊರೆ ಹೋಗಬಹುದು. ಹರ್ಯಾಣ ಮತ್ತು ಕೆಲವು ರಾಜ್ಯಗಳನ್ನು ಹೊರತು ಪಡಿಸಿ, ಈಗಾಗಲೇ ಎಲ್ಲಾ ರಾಜ್ಯಗಳಲ್ಲಿ ಪಕ್ಷದ ಕಾರ್ಯಕಾರಿಣಿಯ ಸದಸ್ಯರಿದ್ದಾರೆ. ಸುಮಾರು ಒಂಬತ್ತರಿಂದ ಹತ್ತು ಸಾವಿರ ಕಾಂಗ್ರೆಸ್ ಕಾರ್ಯಕಾರಿಣಿ ಸದಸ್ಯರು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬಹುದು. ಈ ಪ್ರಕ್ರಿಯೆ ಮುಗಿಯಲು ಒಂದೆರಡು ತಿಂಗಳು ಬೇಕಾಗಿರುವುದರಿಂದ, ಅಲ್ಲಿಯವರಿಗೆ ಸೋನಿಯಾ ಗಾಂಧಿ, ಹಂಗಾಮಿ ಅಧ್ಯಕ್ಷೆಯಾಗಿ ಮುಂದುವರಿಯಬಹುದು.
ಮನಮೋಹನ್ ಸಿಂಗ್, ಎ.ಕೆ.ಆಂಟನಿ, ಮಲ್ಲಿಕಾರ್ಜುನ ಖರ್ಗೆ, ಸುಶೀಲ್ ಕುಮಾರ್ ಶಿಂಧೆ
ಆರೋಗ್ಯದ ಸಮಸ್ಯೆಯಿಂದ ಹಂಗಾಮಿ ಅಧ್ಯಕ್ಷೆಯಾಗಿ ಮುಂದುವರಿಯಲೂ ಸೋನಿಯಾ ಒಪ್ಪದಿದ್ದರೆ, ಹಿರಿಯ ಕಾಂಗ್ರೆಸ್ ಮುಖಂಡರಾದ ಮನಮೋಹನ್ ಸಿಂಗ್, ಎ.ಕೆ.ಆಂಟನಿ, ಮಲ್ಲಿಕಾರ್ಜುನ ಖರ್ಗೆ, ಸುಶೀಲ್ ಕುಮಾರ್ ಶಿಂಧೆ, ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾಗಬಹುದು.