ನಕ್ಸಲ್ ಅಂಕಲ್ ಪ್ಲೀಸ್... ಕೋಬ್ರಾ ಕಮಾಂಡೋ ಮಗಳ ಹೃದಯ ಕಲಕುವ ಮನವಿ
ಛತ್ತೀಸ್ಗಡ, ಏಪ್ರಿಲ್ 7: "ನಕ್ಸಲ್ ಅಂಕಲ್, ದಯವಿಟ್ಟು ನನ್ನ ಅಪ್ಪನನ್ನು ಬಿಟ್ಟುಬಿಡಿ. ನಾನು ಅಪ್ಪನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ನನ್ನ ಅಪ್ಪನನ್ನು ತುಂಬಾ ಪ್ರೀತಿಸುತ್ತೇನೆ. ಅವರನ್ನು ಮನೆಗೆ ವಾಪಸ್ ಕಳುಹಿಸಿಬಿಡಿ ಪ್ಲೀಸ್ ..." ನಕ್ಸಲರ ಬಳಿ ಒತ್ತೆಯಾಳಾಗಿರುವ ತನ್ನ ತಂದೆಯ ಬಿಡುಗಡೆಗಾಗಿ ಕಣ್ಣೀರಾದ ಈ ಪುಟಾಣಿಯ ಮನವಿ ಎಂಥವರ ಹೃದಯವನ್ನು ಕಲಕುವಂತಿದೆ.
ಕೋಬ್ರಾ ಕಮಾಂಡೋ ಮನ್ಹಾಸ್ ಬಿಡುಗಡೆಗಾಗಿ ಅವರ ಐದು ವರ್ಷದ ಮಗಳು ರಾಘ್ವಿ ಕಣ್ಣೀರಿಡುತ್ತಾ ನಕ್ಸಲರಿಗೆ ಮನವಿ ಮಾಡಿದ್ದಾಳೆ. ತನ್ನ ತಂದೆ ಎಲ್ಲಿದ್ದಾರೆ, ಹೇಗಿದ್ದಾರೆ ತಿಳಿಯದೇ ಅವರ ಬರುವಿಕೆಗಾಗಿ ಕಾದು ಕುಳಿತಿದ್ದಾಳೆ.
ನಾಪತ್ತೆಯಾಗಿರುವ ಸಿಆರ್ಪಿಎಫ್ ಯೋಧ ನಕ್ಸಲರ ವಶದಲ್ಲಿ
ಛತ್ತೀಸಗಡದ ಬಿಜಾಪುರದಲ್ಲಿ ಶನಿವಾರ ಸಂಭವಿಸಿದ ದಾಳಿಯ ಸಂದರ್ಭ ಕಣ್ಮರೆಯಾಗಿರುವ ಸಿಆರ್ಪಿಎಫ್ ಯೋಧ ಮನ್ಹಾಸ್ ಮಾವೋವಾದಿಗಳ ಒತ್ತೆಯಾಳಾಗಿದ್ದಾರೆ. ನಾಪತ್ತೆಯಾಗಿರುವ ಜಮ್ಮು ಮತ್ತು ಕಾಶ್ಮೀರದ ನಿವಾಸಿ ರಾಕೇಶ್ವರ್ ಸಿಂಗ್ ಮನ್ಹಾಸ್ ಜೀವಂತವಾಗಿದ್ದು, ಮಾವೊವಾದಿಗಳ ವಶದಲ್ಲಿದ್ದಾರೆ ಎಂದು ಭದ್ರತಾ ಪಡೆಗಳ ಮೂಲಗಳು ತಿಳಿಸಿವೆ. ಹೀಗಾಗಿ ತನ್ನ ತಂದೆ ಬಿಡುಗಡೆಗೆ ಪುಟ್ಟ ಹುಡುಗಿ ಕೇಳಿಕೊಂಡಿದ್ದಾಳೆ.
ಪುಟ್ಟ ಹುಡುಗಿಯೊಂದಿಗೆ ಮನ್ಹಾಸ್ ಅವರ ತಾಯಿ ಕುಂತಿ ದೇವಿ ಕೂಡ ಮಾತನಾಡಿದ್ದಾರೆ. "ನನ್ನ ಪತಿ ಕೂಡ ಸಿಆರ್ಪಿಎಫ್ನಲ್ಲಿದ್ದು, ದೇಶಕ್ಕಾಗಿ ಪ್ರಾಣ ನೀಡಿದರು. ಅವರಿಂದ ಪ್ರೇರಿತನಾಗಿ ನನ್ನ ಮಗ ಸಿಆರ್ಪಿಎಫ್ ಸೇರಿದ. ಸರ್ಕಾರ ನನ್ನ ಮಗನನ್ನು ವಾಪಸ್ ಕರೆಸುವ ವಿಶ್ವಾಸವಿದೆ" ಎಂದು ಕೇಳಿಕೊಂಡಿದ್ದಾರೆ.
ಛತ್ತೀಸ್ಗಡದ ಬಿಜಾಪುರದಲ್ಲಿ ಶನಿವಾರ ನಡೆದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ 23 ಮಂದಿ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ರಾಕೇಶ್ವರ್ ಸಿಂಗ್ ಮನ್ಹಾಸ್ ನಕ್ಸಲರ ಬಳಿ ಒತ್ತೆಯಾಳಾಗಿದ್ದು, ಅವರು ಸುರಕ್ಷಿತವಾಗಿದ್ದು, ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಆದರೆ ಇದುವರೆಗೂ ಯಾವುದೇ ಮಾಹಿತಿ ದೊರೆತಿಲ್ಲ.